ಕರ್ನಾಟಕದಲ್ಲಿ ಲಾಕ್ಡೌನ್ ವಿಸ್ತರಣೆಗೆ ಜನರು ಡೋಂಟ್ಕೇರ್
ಬೆಂಗಳೂರು, ಮಾರ್ಚ್ 25: ಕರ್ನಾಟಕದಲ್ಲಿ ಲಾಕ್ಡೌನ್ ಏಪ್ರಿಲ್ 14ರವರೆಗೂ ವಿಸ್ತರಣೆಯಾಗಿದ್ದರೂ ಜನರು ಡೋಂಟ್ಕೇರ್ ಎನ್ನುತ್ತಿದ್ದಾರೆ.
ಕೊರೊನಾ ಮರಣಮೃದಂಗ ಕರ್ನಾಟಕದಲ್ಲೂ ಮುಂದುವರೆದಿದೆ ಕಲಬುರಗಿಯಲ್ಲಿ ಒಂದು ಬಲಿಯಾಗಿದೆ. ದೇಶಾದ್ಯಂತ ಇದುವರೆಗೆ 400ಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ.
ಐದಕ್ಕಿಂತ ಹೆಚ್ಚು ಮಂದಿ ಒಂದೆಡೆ ಸೇರುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದ್ದರೂ ಕೂಡ ಕರ್ನಾಟಕದ ಬಹುತೇಕ ದೊಡ್ಡ ದೊಡ್ಡ ಮಾರುಕಟ್ಟೆಗಳು ಓಪನ್ ಆಗಿವೆ. ಮಲ್ಲೇಶ್ವರ ಮಾರುಕಟ್ಟೆ, ಕೆಆರ್ ಮಾರಕಟ್ಟೆ, ಮಂಗಳೂರು, ಮೈಸೂರು, ಕಲಬುರಗಿ ಮಾರುಕಟ್ಟೆಗಳು ಬುಧವಾರ ಬೆಳಗಿನ ಜಾವದಿಂದಲೇ ತೆರೆದಿದ್ದು, ಜನರು ಯುಗಾದಿ ಹಬ್ಬದ ಖರೀದಿಗೆ ಮುಗಿಬಿದ್ದಿದ್ದಾರೆ.

ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರಬೇಡಿ ಮನೆಯಲ್ಲೇ ಇರಿ ಹಬ್ಬವನ್ನು ಸಣ್ಣ ಪ್ರಮಾಣದಲ್ಲಿ ಮನೆಯಲ್ಲಿಯೇ ಮಾಡಿ, ದಿನನಿತ್ಯದ ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆ ಇಲ್ಲ ಹಾಗಾಗಿ ಎಲ್ಲರೂ ಒಟ್ಟಿಗೆ ಓಡಾಡುವುದು ನಿಲ್ಲಿ ಎಂದು ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ತಮಗೆ ಬೇಕಾದಂತೆ ಓಡಾಟ ಮಾಡುತ್ತಿದ್ದಾರೆ.
ಇಂದಿನಿಂದ ಬೇರೆ ಊರುಗಳಿಗೆ ತೆರಳುವಂತಿಲ್ಲ, ಸಂಪೂರ್ಣ ಬಂದ್ ಆಗಿದ್ದು ನಾಕಾಬಂಧಿ ಹೇರಲಾಗಿದೆ. ಮಂಗಳವಾರವಷ್ಟೇ ಕಲಬುರಗಿ ಮಾರುಕಟ್ಟೆಯಲ್ಲಿ ಜನರು ಸೇರಿದ್ದು, ಪೊಲೀಸರು ಅವರನ್ನು ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು.
ಆದರೆ ಜನರು ಎಚ್ಚೆತ್ತುಕೊಳ್ಳದೆ ಇಂದೂ ಕೂಡ ಮಾರುಕಟ್ಟೆಗೆ ಬಂದಿದ್ದಾರೆ. ಕೊಪ್ಪಳದಲ್ಲೂ ಕೂಡ ಲಾಕ್ಡೌನ್ ಉಲ್ಲಂಘಿಸಿ ಜನರು ಓಡಾಡುತ್ತಿದ್ದಾರೆ. ಇದರಿಂದ ಕೊರೊನಾ ಸೋಂಕು ವೇಗದಲ್ಲಿ ಎಲ್ಲರಿಗೂ ಹರಡುವ ಆತಂಕ ಎದುರಾಗಿದೆ.
ಇನ್ನು ಮೈಸೂರಿನಲ್ಲೂ ಎಲ್ಲಾ ಮಾರುಕಟ್ಟೆಗಳು ತೆರೆದಿವೆ, ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಬೇರೆ ಜಿಲ್ಲೆಯಿಂದ ಬರುವವರಿಗೆ ಜಿಲ್ಲೆಗೆ ಪ್ರವೇಶವಿಲ್ಲ, ಅಲ್ಲಿಂದ ಹೋಗುವವರಿಗೂ ಅನುಮತಿ ಇಲ್ಲ.












Click it and Unblock the Notifications