ಪೇಜಾವರ ಶ್ರೀ ವಿಶ್ವೇಶ ತೀರ್ಥರ ಎಕ್ಸ್ ಕ್ಲೂಸಿವ್ ಸಂದರ್ಶನ
ಉಡುಪಿ ಕೃಷ್ಣ ಮಠದಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲ ಧರ್ಮದವರೂ ಊಟ ಮಾಡಿದ್ದಾರೆ. ಈ ಘಟನೆಯಲ್ಲಿ ಯಾವ ವಿಶೇಷಾರ್ಥವೂ ಇಲ್ಲ. ಅದನ್ನು ದೊಡ್ಡದು ಮಾಡುವ ಅಗತ್ಯವೂ ಇಲ್ಲ. ಮುಸ್ಲಿಮರ ಜತೆಗೆ ಸೌಹಾರ್ದ ಸಂಬಂಧ ಇರುವುದು ಮಧ್ವಾಚಾರ್ಯರ ಕಾಲದಿಂದಲೂ ಕಂಡುಬರುತ್ತದೆ ಎಂದಿದ್ದಾರೆ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು.
ಉಡುಪಿ ಕೃಷ್ಣ ಮಠದಲ್ಲಿ ಮುಸ್ಲಿಮರಿಗೆ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಔತಣ ಕೂಟ ನೀಡಿದ್ದಕ್ಕೆ ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತು ಈ ಕ್ರಮಕ್ಕೆ ತಮ್ಮ ವಿರೋಧ ಇದೆ ಎಂದು ಹೇಳಿದ್ದಕ್ಕೆ ಸ್ವಾಮೀಜಿಗಳು ನೀಡಿದ ಪ್ರತಿಕ್ರಿಯೆ ಇದು.
ಈ ಬಗ್ಗೆ ಆ ನಂತರ ಪೇಜಾವರ ಶ್ರೀಗಳ ಜತೆಗೆ ಮಾತುಕತೆ ನಡೆಸಿರುವ ಪ್ರಮೋದ್ ಮುತಾಲಿಕರು, ಸ್ವಾಮೀಜಿ ನೀಡಿದ ಉತ್ತರದಿಂದ ಸಮಾಧಾನವಾಗಿಲ್ಲ. ಇಷ್ಟು ಹಿಂದೂ ಉಗ್ರವಾದ ಒಳ್ಳೆಯದಲ್ಲ ಎಂಬ ಸಮಾಧಾನ ಮಾತಿಗೂ ಅವರು ಕರಗಿಲ್ಲ. ಈ ಎಲ್ಲ ಘಟಾನೆಗಳ ಹಿನ್ನೆಲೆಯಲ್ಲಿ ಫೋನ್ ಮೂಲಕ ವಿಶ್ವೇಶ ತೀರ್ಥ ಸ್ವಾಮೀಜಿ ಒನ್ ಇಂಡಿಯಾ ಕನ್ನಡಕ್ಕೆ ಸಂದರ್ಶನ ನೀಡಿದ್ದಾರೆ.

ವಿವಾದದ ಬಗ್ಗೆ
ಪ್ರಶ್ನೆ: ಮುಸ್ಲಿಮರನ್ನು ದೇವಾಲಯಕ್ಕೆ ಸೇರಿಸಬಾರದಿತ್ತು ಎಂಬ ವಿವಾದದ ಬಗ್ಗೆ ಏನು ಹೇಳ್ತೀರಿ?
ಉತ್ತರ: ಈ ಬಗ್ಗೆ ನಾವು ಹೇಳಬೇಕಾದ್ದೆಲ್ಲವನ್ನೂ ಹೇಳಿದ್ದೇವೆ. ಉಡುಪಿ ಕೃಷ್ಣ ಮಠದಲ್ಲಿ ತುಂಬ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು..ಎಲ್ಲ ಧರ್ಮದವರೂ ಊಟ ಮಾಡಿದ್ದಾರೆ. ಇದು ಖಂಡಿತಾ ಹೊಸ ಸಂಗತಿಯಲ್ಲ.

ಮಧ್ವಾಚಾರ್ಯರ ಕಾಲದಿಂದಲೂ ಈ ಸೌಹಾರ್ದ ಸಂಬಂಧ
ಪ್ರಶ್ನೆ: ಮಧ್ವಾಚಾರ್ಯರ ಕಾಲದಿಂದಲೂ ಈ ಸೌಹಾರ್ದ ಸಂಬಂಧ ಮುಂದುವರಿದಿದೆ ಎಂದಿದ್ದೀರಿ, ಅದು ಹೇಗೆ?
ಉತ್ತರ: ಮಧ್ವಾಚಾರ್ಯರನ್ನು ಕೊಲ್ಲುವುದಕ್ಕೆ ಅಂತಲೇ ಮುಸ್ಲಿಂ ರಾಜನೊಬ್ಬ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳಿಸುತ್ತಾನೆ. ಆ ರಾಜನನ್ನು ಭೇಟಿಯಾಗಿ ಆಚಾರ್ಯರು ಮಾತನಾಡುತ್ತಾರೆ. ಅವರ ಮಾತಿನ ಮೋಡಿಗೆ ಬೆರಗಾದ ಆ ಮುಸ್ಲಿಂ ರಾಜ ಸನ್ಮಾನ ಮಾಡಿ ಕಳಿಸುತ್ತಾನೆ.

ಗೋ ಹತ್ಯೆ ಈಗಲೂ ವಿರೋಧಿಸುತ್ತೇವೆ
ಪ್ರಶ್ನೆ: ಗೋ ಮಾಂಸವನ್ನು ಸೇವಿಸುವವರನ್ನು ಮಠಕ್ಕೆ ಸೇರಿಸಿದ್ದರಿಂದ, ಗೋ ಹತ್ಯೆ ಬಗ್ಗೆ ನಿಮ್ಮ ನಿಲುವಿನಲ್ಲಿ ಬದಲಾವಣೆ ಆಗಿದೆಯಾ?
ಉತ್ತರ: ಗೋ ಹತ್ಯೆ ಮಾಡುವುದನ್ನು ನಾವು ಈಗಲೂ ವಿರೋಧಿಸುತ್ತೇವೆ. ಹಿಂದೂಗಳಲ್ಲೇ ಎಷ್ಟು ಮಂದಿ ಗೋಮಾಂಸ ಸೇವನೆ ಮಾಡೋದಿಲ್ಲ? ಅಂಥವರ ಮನ ಪರಿವರ್ತನೆ ಮಾಡುವುದು ನಮ್ಮ ಉದ್ದೇಶ.

ಎಲ್ಲರೂ ಸಂತಸದಿಂದ ಇದ್ದಾರೆ
ಪ್ರಶ್ನೆ: ಆದರೆ, ಈಗ ನಿಮಗೆ ವಿರೋಧ ಬರುತ್ತಿದೆಯಲ್ಲಾ?
ಉತ್ತರ: ಈ ದಿನ ಹಬ್ಬ ಇದೆ. ಯಾವ ಮುಸ್ಲಿಮರೂ ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಹಿಂದೂಗಳೂ ವಿರೋಧ ಮಾಡಿಲ್ಲ. ಎಲ್ಲರೂ ಸಂತಸದಿಂದ ಇದ್ದಾರೆ.

ಆರಂಭದಲ್ಲಿ ವಿರೋಧವಿತ್ತು
ಪ್ರಶ್ನೆ: ನೀವು ಈ ಹಿಂದೆ ದಲಿತರ ಕೇರಿಗೆ ಹೋದಾಗ ಬ್ರಾಹ್ಮಣರೇ ವಿರೋಧಿಸಿದರು. ಈಗ ಮುಸ್ಲಿಮರಿಗೆ ಔತಣ ಕೂಟ ಮಾಡಿರುವುದರಿಂದ ಆಕ್ಷೇಪ ಇರಲ್ಲವೇ?
ಉತ್ತರ: ಹೌದು, ದಲಿತರ ಕೇರಿಗೆ ಹೋದಾಗ ಆರಂಭದಲ್ಲಿ ವಿರೋಧವಿತ್ತು. ಆದರೆ ಈಗ ಇಲ್ಲ. ಅದೇ ರೀತಿ ಈ ಔತಣಕೂಟಕ್ಕೂ ಯಾರೂ ವಿರೋಧಿಸಿಲ್ಲ.

ಇಂಥ ಉಗ್ರವಾದ ಹಿಂದುತ್ವ ಬೇಡ
ಪ್ರಶ್ನೆ: ಈಗ ಪ್ರಮೋದ್ ಮುತಾಲಿಕ್ ನಿಮ್ಮನ್ನು ಭೇಟಿ ಆಗಿ ಚರ್ಚೆ ಮಾಡಿದ್ರಾ?
ಉತ್ತರ: ಅವರಿಗೆ ನಾವು ಹೇಳಿದೆವು. ಇಂಥ ಉಗ್ರವಾದ ಹಿಂದುತ್ವ ಬೇಡ ಅಂತ. ಆದರೆ ಅವರಿಗೆ ನಮ್ಮ ಉತ್ತರದಿಂದ ಸಮಾಧಾನ ಆಗಲಿಲ್ಲ.

ನಮಗೆ ಉದ್ದೇಶದ ಬಗ್ಗೆ ಸ್ಪಷ್ಟತೆ ಇದೆ
ಪ್ರಶ್ನೆ: ನಿಮ್ಮನ್ನು ಹಿಂದೂಪರ ಸಂಘಟನೆಗಳೂ ವಿರೋಧಿಸುತ್ತಿವೆ. ಅದೇ ವೇಳೆ ಪ್ರಗತಿಪರರು ಸಹ ವಿರೋಧಿಸುತ್ತಾರೆ. ಈ ಬಗ್ಗೆ ಏನು ಹೇಳ್ತೀರಿ?
ಉತ್ತರ: ನಮಗೆ ಉದ್ದೇಶದ ಬಗ್ಗೆ ಸ್ಪಷ್ಟತೆ ಇದೆ. ಇದಕ್ಕಿಂತ ಹೆಚ್ಚಿನ ವಿರೋಧವನ್ನು ನಾವು ನೋಡಿದ್ದೇವೆ. ಇದನ್ನೆಲ್ಲ ತಲೆಗೆ ಹಚ್ಚಿಕೊಂಡಿಲ್ಲ. ಸಮಾಜದ ಒಳಿತಿಗಾಗಿ ಮಾಡಬೇಕಾದ ಕಾರ್ಯಗಳನ್ನು ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ.












Click it and Unblock the Notifications