ಕಾಂಗ್ರೆಸ್ ಶಾಸಕರಿಗೆ ಪತ್ರ ಬರೆದ ಡಾ.ಜಿ.ಪರಮೇಶ್ವರ್
ಬೆಂಗಳೂರು, ಜು.14 : ಕಾಂಗ್ರೆಸ್ ಪಕ್ಷದ ಶಾಸಕರು ಪದೇ-ಪದೇ ವಿವಾದಕ್ಕೆ ಸಿಲುಕುತ್ತಿರುವುದನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ ಎಲ್ಲಾ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪತ್ರ ಬರೆದಿದ್ದು, ಪಕ್ಷಕ್ಕೆ ಕೆಟ್ಟ ಹೆಸರು ಬರುವಂತೆ ನಡೆದುಕೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಿಂದ ಎಲ್ಲಾ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬರೆದಿರುವ ಪತ್ರ ರವಾನೆಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸುತ್ತಿದೆ. ಶಾಸಕರು ಪದೇ-ಪದೇ ವಿವಾದಗಳಿಗೆ ಸಿಲುಕಿದರೆ, ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ವಿಜಯಾನಂದ ಕಾಶಪ್ಪನವರ್ ಪ್ರಕರಣದ ನಂತರ ಪಕ್ಷದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷರು ಈ ಪತ್ರ ಬರೆದಿದ್ದು, ಸಾರ್ವಜನಿಕವಾಗಿ ಬಹಳ ಎಚ್ಚರಿಕೆಯಿಂದರಬೇಕು. ಜನರು ನಿಮ್ಮನ್ನು ಸದಾ ಗಮನಿಸುತ್ತಿರುತ್ತಾರೆ. ಯಾವುದೇ ವಿವಾದಗಳನ್ನು ಮಾಡಿಕೊಳ್ಳಬೇಡಿ ಎಂದು ಶಾಸಕರಿಗೆ ಸಲಹೆ ನೀಡಲಾಗಿದೆ. [ವಿಜಯಾನಂದ ಕಾಶಪ್ಪನವರ್ ಪ್ರಕರಣ]
ಇಂದಿನ ದಿನಗಳಲ್ಲಿ ಮಾಧ್ಯಮಗಳು ಶಕ್ತಿಯುತವಾಗಿವೆ. ವಿವಾದಗಳಿಗೆ ಸಿಲುಕಿದರೆ ತಕ್ಷಣ ಮಾಧ್ಯಮಗಳ ಕೈಗೆ ಸಿಲುಕುತ್ತೀರಿ. ಆದ್ದರಿಂದ, ಎಚ್ಚರಿಕೆಯಿಂದ ಇರಿ. ನಿಮ್ಮ ನಡವಳಿಕೆಯಿಂದ ಪಕ್ಷ ಮತ್ತು ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ ಎಂದು ಪತ್ರದಲ್ಲಿ ಸೂಚಿಸಲಾಗಿದೆ.
ನಿಮ್ಮ ಒಂದು ಕೆಲಸ ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಿವಾದಗಳಿಗೆ ಸಿಲುಕಬೇಡಿ. ನಿಮ್ಮ ವರ್ತನೆ ನೋಡಿರುವ ಜನರು ಚುನಾವಣೆಯಲ್ಲಿ ನಿಮ್ಮನ್ನು ತಿರಸ್ಕರಿಸಬಹುದು. ಆದ್ದರಿಂದ ಸಾರ್ವಜನಿಕ ಜೀವನದಲ್ಲಿ ವಿವಾದಕ್ಕೆ ಸಿಲುಕಬೇಡಿ ಎಂದು ಶಾಸಕರಿಗೆ ಸೂಚನೆ ನೀಡಲಾಗಿದೆ.
ಹುನಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಪೇದೆಗಳ ಮೇಲೆ ಜು.1ರಂದು ಯುಬಿ ಸಿಟಿಯಲ್ಲಿರುವ ಸ್ಕೈಬಾರ್ ನಲ್ಲಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದ್ದು, ಇದು ಭಾರೀ ಚರ್ಚೆಗೆ ಕಾರಣವಾಗಿದೆ. ಆದ್ದರಿಂದ ಪರಮೇಶ್ವರ್ ಶಾಸಕರಿಗೆ ಈ ಪತ್ರವನ್ನು ಬರೆದಿದ್ದಾರೆ.












Click it and Unblock the Notifications