Dharmasthala Case: ಪ್ರಣಬ್ ಮೊಹಂತಿ ಜೊತೆ ಪರಮೇಶ್ವರ್ ಚರ್ಚೆ; ಬದಲಾಗ್ತಾರಾ ಧರ್ಮಸ್ಥಳ ಕೇಸ್ ಎಸ್ಐಟಿ ತನಿಖೆ ಮುಖ್ಯಸ್ಥ?
ಬೆಂಗಳೂರು, ಆಗಸ್ಟ್ 01: ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡುಪ್ರದೇಶದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪಕ್ಕೆ ಸಂಬಂಧಿಸಿದಂತೆ ದೂರುದಾರ ತೋರಿಸಿದ್ದ 13 ಸ್ಥಳಗಳಲ್ಲಿ 6ನೇ ಪಾಯಿಂಟ್ ನಲ್ಲಿ ಅಸ್ಥಿಪಂಜರ ಸಿಕ್ಕ ಬೆನ್ನಲ್ಲೇ ಇಂದು ಗೃಹ ಸಚಿವ ಪರಮೇಶ್ವರ್ ಅವರನ್ನ ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕ ಪ್ರಣಬ್ ಮೊಹಂತಿ ಭೇಟಿಯಾಗಿದ್ದಾರೆ. ಸದಾಶಿವನಗರದ ಗೃಹ ಸಚಿವರಾದ ಪರಮೇಶ್ವರ್ ನಿವಾಸಕ್ಕೆ ಭೇಟಿ ನೀಡಿದ ಪ್ರಣವ್ ಮೊಹಂತಿ ಸದೀರ್ಘ ಚರ್ಚೆ ನಡೆಸಿದ್ದಾರೆ.
ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ 6 ನೇ ಪಾಯಿಂಟ್ ನಲ್ಲಿ ಸಿಕ್ಕ ಅಸ್ಥಿಪಂಜರದ ಗೃಹ ಸಚಿವ ಪರಮೇಶ್ವರ್ ಅವರಿಗೆ ಮಾಹಿತಿ ನೀಡಲು ಮೊಹಂತಿ ಪರಮೇಶ್ವರ್ ಮನೆಗೆ ಧಾವಿಸಿದ್ದಾರೆ ಎಂದು ಹೇಳಲಾಗಿದ್ದು, ಇಬ್ಬರ ಭೇಟಿ ತೀವ್ರ ಮಹತ್ವ ಪಡೆದುಕೊಂಡಿದೆ.ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾನವನ ದೇಹದ ಪೂರ್ತಿ ಅಸ್ಥಿ ಪಂಜರ ಪತ್ತೆಯಾಗಿದೆ ಎಂದು ವಿಶೇಷ ತನಿಖಾ ತಂಡ ಮಾಹಿತಿ ನೀಡಿದೆ.

ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಹೆಚ್ಚಾಗಿದ್ದು,ಎಸ್ಐಟಿ ತನಿಖೆ ಕೂಡ ನಿರ್ಣಾಯಕ ಹಂತ ತಲುಪಿದೆ. ತನಿಖೆ ಚುರುಕುಗೊಂಡಿರುವ ಹೊತ್ತಲ್ಲೇ ಎಸ್ಐಟಿ ತನಿಖಾ ತಂಡ ಮುಖ್ಯಸ್ಥರಾಗಿರುವ ಪ್ರಣಬ್ ಮೊಹಂತಿಕೇಂದ್ರ ಸೇವೆ ನೇಮಕರಾಗಿದ್ದಾರೆ ಎನ್ನುವ ವಿಚಾರ ಹೊರಬಿದ್ದಿದೆ. ಕೊನೆ ಹಂತದಲ್ಲಿ ಧರ್ಮಸ್ಥಳ ಕೇಸ್ನಿಂದ ಪ್ರಣವ್ ಮೊಹಂತಿ ಅವರು ಕೇಂದ್ರ ಸೇವೆಗೆ ಹೋಗ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಈ ಬಗ್ಗೆ ಪರಮೇಶ್ವರ್ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.
ಮಾಧ್ಯಮಗಳ ಜೊತೆಗೆ ಪರಮೇಶ್ವರ್ ಅವರು ಮಾತನಾಡಿ, ಪ್ರಣಬ್ ಮೊಹಂತಿ ಅವ್ರು ಕೇಂದ್ರದ ಹುದ್ದೆಗಳಿಗೆ ನೇಮಕ ಆಗಿದ್ದಾರೆ. ಇದು ನಿಜಕ್ಕೂ ನಮ್ಮ ಕರ್ನಾಟಕಕ್ಕೆ ದೊಡ್ಡ ಕ್ರೆಡಿಟ್ ಆಗಿದೆ. ತಕ್ಷಣವೇ ಯಾವ ಹುದ್ದೆ ಕೊಡ್ತಾರೆ ಅನ್ನೋ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ತಿಳಿಸಲೆಂದೆ ಮೊಹಂತಿ ಬಂದಿದ್ರು ಎಂದು ಪರಮೇಶ್ವರ್ ಹೇಳಿದ್ದಾರೆ. ಇನ್ನೂ ಧರ್ಮಸ್ಥಳ ಕುರಿತು ಎಸ್ಐಟಿ ತನಿಖೆ ಮಾಡ್ತಿದ್ದಾರೆ. ಅವರು ವರದಿ ಕೊಡುವ ತನಕ ನಾವು ಏನೂ ಮಾತಾಡೋಕೆ ಹೋಗಲ್ಲ. ತನಿಖೆ ನಡೆಯುವಾಗ ನಾವು ಮಾತಾಡೋದು ಸಮಂಜಸ ಅಲ್ಲ. ಯಾರು ಮಾತಾಡೋಕೆ ಹೋಗಲ್ಲ ಎಂದಿದ್ದಾರೆ.
ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಸಮಾಜದ ಭಾವನೆಗಳಿಗೆ ಧಕ್ಕೆ ಆಗುವ ಪೋಸ್ಟ್ ಗಳ ಬಗ್ಗೆ ನಿಗಾವಹಿಸಲಾಗಿದೆ. ಭಾವನೆಗಳಿಗೆ ಧಕ್ಕೆ ಆಗುವ ಪೋಸ್ಟ್ ಮಾಡಿದವರ ಬಗ್ಗೆ ಕ್ರಮ ತೆಗೆದುಕೊಳ್ತಾರೆ ಎಂದ ಪರಮೇಶ್ವರ್ ಅವರು, ಪ್ರಣಬ್ ಮೊಹಾಂತಿ ಹೊರಗಡೆ ಹೋಗುವ ಪ್ರಶ್ನೆಯೇ ಇಲ್ಲ . ಕೇಂದ್ರ ಆಯ್ಕೆ ಮಾಡಿದೆ. ಆದ್ರೆ ನಾವು ಅವರನ್ನ ಕಳಿಸಬೇಕು. ಇಂತಹ ಜಾಗಕ್ಕೆ ಅವರನ್ನು ನೇಮಕ ಮಾಡ್ತಿದ್ದೇವೆ, ಅವರನ್ನು ಕಳುಹಿಸಿಕೊಡಿ ಎಂದು ಮೊದಲು ಕೇಂದ್ರ ನಮಗೆ ಹೇಳ್ಬೇಕು. ಬಳಿಕ ನಾವು ಕಳುಹಿಸ್ತೀವೋ ಬಿಡ್ತೀವೋ ಅದು ನಮಗೆ ಬಿಟ್ಟ ವಿಚಾರ ಎಂದು ಪರಮೇಶ್ವರ್ ಅವರು ಹೇಳಿದರು.












Click it and Unblock the Notifications