"ಸಾವಿನ ಮನೆಯಲ್ಲಿ ಸಂಭ್ರಮಾಚರಣೆ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ"
Pahalgam terror attack: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ದಲ್ಲಿ ಉಗ್ರರ ದಾಳಿಯ ವಿಚಾರಲ್ಲಿ ಬಿಜೆಪಿ ನಡೆ ಅತ್ಯಂತ ಕೆಟ್ಟದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಸಾವಿನ ಮನೆಯಲ್ಲಿ ಸಂಭ್ರಮಾಚರಣೆ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ. ಭಯೋತ್ಪಾದಕ ದಾಳಿಗೆ, ಕೇಂದ್ರ ಸರ್ಕಾರದ ವೈಫಲ್ಯಕ್ಕೆ ದೇಶದ ಮುಂದೆ ತಲೆ ತಗ್ಗಿಸಿ ನಿಲ್ಲಬೇಕಿದ್ದ ಬಿಜೆಪಿ ನೀಚಾತಿನೀಚ ರಾಜಕಾರಣಕ್ಕೆ ಮುಂದಾಗಿರುವುದು ಈ ದೇಶದ ದುರ್ದೈವ ಎಂದಿದ್ದಾರೆ.
Divert and rule ತಂತ್ರ ಹೂಡಿದರೆ ನಿಮ್ಮ ವೈಫಲ್ಯಗಳನ್ನು ದೇಶದ ಜನತೆ ಮರೆಯುವುದಿಲ್ಲ ಎಂದು ಕರ್ನಾಟಕ ಬಿಜೆಪಿಯನ್ನು ಟ್ಯಾಗ್ ಮಾಡಿರುವ ಅವರು, ಗಡಿಯಿಂದ ನೂರಾರು ಕಿ.ಮಿ ದೂರದಲ್ಲಿರುವ ಪೆಹಲ್ಗಾಮ್ಗೆ ಉಗ್ರರು ನುಸುಳಿ ಬಂದಿದ್ದು ಹೇಗೆ ?, ಒಂದು ತಿಂಗಳ ಹಿಂದೆಯೇ ಉಗ್ರರ ಸುಳಿವಿದ್ದರೂ ನಿರ್ಲಕ್ಷಿಸಿದ್ದೇಕೆ, ಇಂಟೆಲಿಜೆನ್ಸ್ ವೈಫಲ್ಯವಾಗಿದ್ದೇಕೆ, ಪೆಹಲ್ಗಾಮ್ ನಲ್ಲಿ ಭದ್ರತೆ ನಿಯೋಜಿಸುವಲ್ಲಿ ನಿರ್ಲಕ್ಷ್ಯ ಮಾಡಿದ್ದೇಕೆ, ಅಮರಾನಾಥ್ ಬೇಸ್ ಕ್ಯಾಂಪ್ ಎನಿಸಿಕೊಂಡಿರುವ ಪ್ರದೇಶದಲ್ಲಿ ಒಬ್ಬನೇ ಒಬ್ಬ ಯೋಧನನ್ನೂ ನಿಯೋಜಿಸದಿರುವುದೇಕೆ ಎಂದು ಸರಣಿ ಪ್ರಶ್ನೆಗಳನ್ನು ಕೇಳಿರುವ ಅವರು, ಹಿಂದೂ - ಮುಸ್ಲಿಂ ಬೆಂಕಿ ಹಚ್ಚುವ ಮುನ್ನ ಬಿಜೆಪಿ ಉತ್ತರಿಸಬೇಕಾದ ಪ್ರಶ್ನೆಗಳಿವು. ಕಿಂಚಿತ್ ಶೋಕವೂ ಇಲ್ಲದೆ ಬಿಹಾರದಲ್ಲಿ ನಿತೀಶ್ ಅವರೊಂದಿಗೆ ವೇದಿಕೆಯಲ್ಲಿ ನಗೆ ಚಟಾಕಿ ಹಾರಿಸಿದ ಮೋದಿಯವರನ್ನದರೂ ಕೇಳಿ ಉತ್ತರ ಹೇಳಿ ಎಂದು ಹೇಳಿದ್ದಾರೆ.

ಪೆಹಲ್ಗಾಮ್ ಪ್ರವಾಸದಲ್ಲಿದ್ದ ಪ್ರತ್ಯಕ್ಷದರ್ಶಿಯ ಫೋಟೋ ಇಟ್ಟುಕೊಂಡು ಕೊಳಕು ರಾಜಕೀಯಕ್ಕೆ ಮುಂದಾದ ಬಿಜೆಪಿಗೆ ಸತ್ಯವೆಂದರೆ ಅಲರ್ಜಿ, ಏಕೆಂದರೆ ಸುಳ್ಳೇ ಅವರ ಮನೆದೇವರು. ಸತ್ಯವನ್ನು ಪಕ್ಷ, ಜಾತಿ, ಧರ್ಮಗಳಿಂದ ಅಳೆಯಲು ಸಾಧ್ಯವೇ? ಸತ್ಯವನ್ನು ಕಾಂಗ್ರೆಸ್ ನವರು ಹೇಳಿದರೂ ಸತ್ಯವೇ, ಬಿಜೆಪಿಯವರು ಹೇಳಿದರೂ ಸತ್ಯವೇ. ನಿಮ್ಮದೇ ಯುವ ಮೋರ್ಚಾದ ಮುಖಂಡ ಹಾಗೂ ಆರ್ಎಸ್ಎಸ್ ಕಾರ್ಯಕರ್ತ ಅರವಿಂದ್ ಅಗರ್ವಾಲ್ ಕೂಡ ಸ್ಥಳೀಯ ಮುಸ್ಲಿಮರು ತಮ್ಮ ಜೀವ ಪಣಕ್ಕಿಟ್ಟು ನನ್ನನ್ನು ರಕ್ಷಿಸಿದ್ದಾರೆ, ಅವರ ಋಣ ತೀರಿಸಲಾಗದು ಎಂದಿದ್ದಾರೆ, ಬಿಜೆಪಿಯವರು ಕನಿಷ್ಠ ಅವರದೇ ಪಕ್ಷದವರ ಮಾತನ್ನಾದರೂ ಕೇಳಲಿ ಎಂದಿದ್ದಾರೆ.
ಎಲ್ಲಾ ಧರ್ಮದಲ್ಲೂ ಹಾದಿ ತಪ್ಪಿದವರಿದ್ದಾರೆ, ಮಾನವೀಯತೆಯನ್ನು ಕಳೆದುಕೊಂಡವರಿದ್ದಾರೆ, ಹಿಂದೂ ಧರ್ಮದಲ್ಲಿ ಹೇಗೆ ಬಿಜೆಪಿ, ಆರ್ಎಸ್ಎಸ್ ಸೇರಿ ಮನುಷ್ಯತ್ವ ಬಿಟ್ಟಿದ್ದಾರೋ ಅಂತೆಯೇ ಮುಸ್ಲಿಂ ಧರ್ಮದಲ್ಲೂ ಕೂಡ.. ದಾಳಿ ನಡೆದಾಗ ಪ್ರವಾಸಿಗರ ನೆರವಿಗೆ ಧಾವಿಸಿದ್ದು ಅಲ್ಲಿನ ಸ್ಥಳೀಯರು, ಧೈರ್ಯ ತುಂಬಿ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ ಆರೈಕೆ ಮಾಡಿದವರ ಮಾನವೀಯತೆಯನ್ನು ಅವಮಾಸುವ ಬಿಜೆಪಿ ಅತ್ಯಂತ ನಿರ್ಲಜ್ಜ ಸ್ಥಿತಿಗೆ ತಲುಪಿದೆ ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಘಟನೆಯಲ್ಲಿ ಜೀವ ತೆತ್ತ ಕರ್ನಾಟಕದ ಭರತ್ ಅವರ ಪತ್ನಿಯವರ ಸತ್ಯ ನುಡಿಯಿಂದ, ಸ್ವತಃ ಬಿಜೆಪಿ ಹಾಗೂ ಆರ್ಎಸ್ಎಸ್ ಕಾರ್ಯಕರ್ತನ ಮಾತಿನಿಂದ, ಸ್ಥಳೀಯರ ಮಾನವೀಯತೆಯನ್ನು ಕೊಂಡಾಡಿದ ಶಿವಮೊಗ್ಗದ ಮಂಜುನಾಥ್ ಅವರ ಪತ್ನಿ ಪಲ್ಲವಿಯವರ ಮಾತಿನಿಂದಲಾದರೂ ಬಿಜೆಪಿಗೆ ಸದ್ಬುದ್ದಿ ಬರುವಂತಾಗಲಿ ಎಂದಿದ್ದಾರೆ. ಕೊನೆಯದಾಗಿ BTW, when is PM Modi visiting Kashmir? ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗ ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications