ಪದ್ಮ ಪ್ರಶಸ್ತಿ: ಸಿದ್ದು ಸರ್ಕಾರದ ಶಿಫಾರಸು ಕಸದ ಬುಟ್ಟಿಗೆ
ಬೆಂಗಳೂರು, ಜ.26: ದೇಶದ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿಗಳು ಪ್ರಕಟಗೊಂಡಿದ್ದು ರಾಜ್ಯದ ಆರು ಗಣ್ಯರೂ ಈ ಬಾರಿಯ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮಿತಿ ಕಳಿಸಿದ್ದ ಶಿಫಾರಸ್ಸನ್ನು ತಿರಸ್ಕರಿಸುವ ಮೂಲಕ ಯುಪಿಎ ಸರ್ಕಾರ ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದ್ದಂತಾಗಿದೆ.
ಪದ್ಮ ಭೂಷಣ ಪ್ರಶಸ್ತಿಗೆ 5 ಹೆಸರು ಪದ್ಮಶ್ರೀ ಪ್ರಶಸ್ತಿಗೆ 5 ಸೇರಿದಂತೆ ಒಟ್ಟಾರೆ ಪದ್ಮ ಪ್ರಶಸ್ತಿಗೆ ಈ ಬಾರಿ ಕರ್ನಾಟಕ ಸರ್ಕಾರ ಶಿಫಾರಸ್ಸು ಕಳಿಸಿತ್ತು. ಈ 20 ಹೆಸರುಗಳಲ್ಲಿ ಒಂದನ್ನೂ ಕೇಂದ್ರ ಸರಕಾರ ಗಣನೆಗೆ ತೆಗೆದುಕೊಂಡಿಲ್ಲ ಎಂಬುದು ದುರಂತ. ಆಶ್ಚರ್ಯಕರ ಸಂಗತಿ ಎಂದರೆ, ಕಳೆದ ಐದಾರು ವರ್ಷಗಳಿಂದ ಕರ್ನಾಟಕ ಸರ್ಕಾರದ ಶಿಫಾರಸ್ಸು ಮೂಲೆಗುಂಪಾಗುತ್ತಿದೆ ಸುಮಾರು 158 ಸಾಧಕರ ಪೈಕಿ, 10 ಮಂದಿಗೆ ಮಾತ್ರ ಕೇಂದ್ರ ಸರ್ಕಾರದದ ಮನ್ನಣೆ ಸಿಕ್ಕಿದೆ.
ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದ ಕಾರಣ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ- ಪ್ರಶಸ್ತಿ ಪಟ್ಟಿಗೆ ಸೊಪ್ಪು ಹಾಕುತ್ತಿರಲಿಲ್ಲ ಎಂಬ ಆಪಾದನೆ ಬಲವಾಗಿ ಕೇಳಿ ಬಂದಿತ್ತು. ಆದರೆ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರು ಯುಪಿಎ ಸರ್ಕಾರ ಶಿಫಾರಸ್ಸುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲದಿದ್ದರೂ ಆಶ್ಚರ್ಯಕರವಾಗಿದೆ.

ರಾಜ್ಯ ಸರ್ಕಾರ ಈ ಬಾರಿ ಪದ್ಮಭೂಷಣ ಪ್ರಶಸ್ತಿಗೆ ರಮೇಶ್ ಟೀಕಾರಾಮ್ (ಕ್ರೀಡೆ), ಡಾ.ಅಶೋಕ್ ಪೈ (ವೈದ್ಯಕೀಯ), ಸಾಲುಮರದ ತಿಮ್ಮಕ್ಕ (ಪರಿಸರ), ವೆಂಕಟೇಶ್ ಕುಮಾರ್ (ಹಿಂದೂಸ್ತಾನಿ ಸಂಗೀತ) ಮತ್ತು ರಾಜೀವ್ ತಾರಾನಾಥ್ (ಸಂಗೀತ) ಅವರನ್ನು ಹೆಸರನ್ನು ಶಿಫಾರಸ್ಸು ಮಾಡಿತ್ತು.
ಪದ್ಮ ಪ್ರಶಸ್ತಿಗೆ ಭಾರತಿ ವಿಷ್ಣುವರ್ಧನ್ (ಸಿನಿಮಾ), ಡಾ.ಸೂರಪ್ಪ (ಎಂಜಿನಿಯರಿಂಗ್), ಡಾ.ಸಿ.ಜಿ.ಸುತ್ತೂರ (ವೈದ್ಯಕೀಯ), ಕೃಪಾಕರ- ಸೇನಾನಿ (ವನ್ಯಜೀವಿ), ಎಚ್.ಸಿ.ತಿಮ್ಮಯ್ಯ (ಕಲೆ), ಎಸ್.ಜಿ.ವಾಸುದೇವ್ (ಚಿತ್ರಕಲೆ), ಸಂತಾ ರಾಮರಾವ್ ಮಹಾರಾಜ್ (ಸಮಾಜಸೇವೆ), ಡಾ.ಬೆನಕಪ್ಪ, ಡಾ.ಸುದರ್ಶನ ಬಲ್ಲಾಳ್, ಡಾ.ಜೆ.ಕೆ.ವೆಂಕಟೇಶ್ (ವೈದ್ಯಕೀಯ), ಪ್ರೊ.ಜಿ.ವೆಂಕಟಸುಬ್ಬಯ್ಯ (ಸಾಹಿತ್ಯ), ಕದ್ರಿ ಗೋಪಾಲ್ನಾಥ್ (ಸಂಗೀತ), ಎನಪೋಯ ಅಬ್ದುಲ್ಲಾ ಕುಂಜಿ ಮತ್ತು ತುಂಬೆ ಮೊಹಿದ್ದೀನ್ (ಶಿಕ್ಷಣ) ಹೀಗೆ 15 ಗಣ್ಯರನ್ನು ಶಿಫಾರಸ್ಸು ಮಾಡಿತ್ತು. ಆದರೆ, ಇವರಲ್ಲಿ ಕೇಂದ್ರ ಸರಕಾರ ಯಾರನ್ನೂ ಪರಿಗಣಿಸಿಲ್ಲ.
ಹಿಂದಿ ಚಿತ್ರರಂಗದಲ್ಲಿ ನಿನ್ನೆ ಮೊನ್ನೆ ಕಾಣಿಸಿಕೊಂಡ ಪ್ರತಿಭಾವಂತ ನಟಿ ವಿದ್ಯಾ ಬಾಲನ್ ಅವರಿಗೆ ಪ್ರಶಸ್ತಿ ಸಿಕ್ಕಿದ್ದು, ಹಿಂದಿ ಸೇರಿದಂತೆ ತೆಲುಗು, ತಮಿಳು, ಕನ್ನಡ ಅನೇಕ ಭಾಷೆಗಳಲ್ಲಿ ನಟಿಸಿರುವ ಡಾ. ವಿಷ್ಣುವರ್ಧನ್ ಅವರ ಪತ್ನಿ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಅವರಿಗೆ ಪ್ರಶಸ್ತಿ ಸಿಗದಿರುವುದು ಅವರ ಅಭಿಮಾನಿಗಳಿಗೆ ತೀವ್ರ ನೋವು ಉಂಟು ಮಾಡಿದೆ. ಈ ಹಿಂದೆ ವಿಷ್ಣುವರ್ಧನ್ ಅವರ ಹೆಸರನ್ನು ಶಿಫಾರಸ್ಸು ಮಾಡುವಾಗಲೂ ಇದೇ ರೀತಿ ನಿರಾಶೆಯನ್ನು ಅಭಿಮಾನಿಗಳು ಅನುಭವಿಸಿದ್ದರು. ಇದರ ಜತೆಗೆ ರಾಜೀವ್ ತಾರಾನಾಥ್, ಸಾಲುಮರದ ತಿಮ್ಮಕ್ಕ, ವೆಂಕಟ ಸುಬ್ಬಯ್ಯ ಅವರಿಗೆ ಪ್ರಶಸ್ತಿ ಸಿಗುವ ನಿರೀಕ್ಷೆಯೂ ಸುಳ್ಳಲಾಗಿದೆ. ಒಟ್ಟಾರೆ ಸಿದ್ದು ಸರ್ಕಾರದ ಶಿಫಾರಸ್ಸು ಬೆಲೆ ಕಳೆದುಕೊಂಡಿದೆ.












Click it and Unblock the Notifications