ಕೆಎಂಎಫ್ ಅಧ್ಯಕ್ಷರಾದ ನಾಗರಾಜ್, ಡಿಕೆಶಿ ಬಣಕ್ಕೆ ಗೆಲುವು
ಬೆಂಗಳೂರು, ಸೆ. 17 : ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್)ಅಧ್ಯಕ್ಷಗಾದಿಗೆ ನಡೆಯುತ್ತಿದ್ದ ಪೈಪೋಟಿ ಅಂತ್ಯಗೊಂಡಿದೆ. ಮೊದಲ ಅವಧಿಗೆ ಪಿ.ನಾಗರಾಜ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ನಾಗರಾಜ್ ಪರವಾಗಿ ನಿಂತಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಣಕ್ಕೆ ಗೆಲುವು ಸಿಕ್ಕಿದೆ.
ಬುಧವಾರ ಬೆಳಗ್ಗೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ಕುರಿತು ಸಹಕಾರ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಿ.ನಾಗರಾಜ್ ಅವರನ್ನು ಮೊದಲ ಅವಧಿಗೆ ಅಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಲಾಯಿತು. ಎರಡನೇ ಅವಧಿಗೆ ಹರಪನಹಳ್ಳಿ ಶಾಸಕ ಎಂ.ಪಿ.ರವೀಂದ್ರ ಅಧ್ಯಕ್ಷರಾಗಲಿದ್ದಾರೆ.

ಮಹದೇವ ಪ್ರಸಾದ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಿ.ನಾಗರಾಜ್ ಪರವಾಗಿ ನಿಂತಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ಎಂ.ಪಿ.ರವೀದ್ರ, ಪಿ.ನಾಗರಾಜ್ ಮುಂತಾದವರು ಪಾಲ್ಗೊಂಡಿದ್ದರು. ಸಭೆಯ ಬಳಿಕ ಕೆಎಂಎಫ್ ಕಚೇರಿಗೆ ತೆರಳಿದ ಪಿ.ನಾಗರಾಜ್ ಅವರು ಸಹಾಯಕ ಚುನಾವಣಾ ಆಯುಕ್ತ ನಟೇಶ್ ಅವರಿಗೆ ನಾಮಪತ್ರ ಸಲ್ಲಿಸಿದರು. [ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ]
ಹರಪನಹಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ.ಪಿ.ರವೀಂದ್ರ ಅವರು ಬಳ್ಳಾರಿ, ರಾಯಚೂರು, ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರಾಗಿದ್ದು ಅಲ್ಲಿಂದ ಕೆಎಂಎಫ್ಗೆ ನಾಮ ನಿರ್ದೇಶನಗೊಂಡಿದ್ದರು. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಒಕ್ಕೂಟದ ಸದಸ್ಯರಾಗಿರುವ ಪಿ.ನಾಗರಾಜ್ ಬಮೂಲ್ ಪರವಾಗಿ ನಾಮ ನಿರ್ದೇಶಗೊಂಡಿದ್ದರು.
ಮೊದಲ ಅವಧಿಗೆ ಎಂ.ಪಿ.ರವೀಂದ್ರ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಬಗ್ಗೆ ಸೋಮವಾರ ಚರ್ಚೆ ನಡೆದಿತ್ತು. ಆದರೆ, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಿ.ನಾಗರಾಜ್ ಮೊದಲ ಅವಧಿಗೆ ಅಧ್ಯಕ್ಷರಾಗಲಿ ಎಂದು ಒತ್ತಡ ಹೇರಿದ್ದರು.
ಕೆಎಂಎಫ್ ಅಧ್ಯಕ್ಷರಾಗಿದ್ದ ಸೋಮಶೇಖರ ರೆಡ್ಡಿ ಅವರ ಅಧಿಕಾರಾವಧಿ ಜು.25ರಂದು ಅಂತ್ಯಗೊಂಡಿತ್ತು. ಜಿಲ್ಲಾ ಒಕ್ಕೂಟಗಳ ಚುನಾವಣೆ ನಡೆಯುತ್ತಿದ್ದ ಕಾರಣ ಅಧ್ಯಕ್ಷ ಚುನಾವಣೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಪಿ.ನಾಗರಾಜ್ ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಚುನಾವಣಾಧಿಕಾರಿ ನಟೇಶ್ ಅಧಿಕೃತ ಘೋಷಣೆ ಮಾಡಿದ್ದಾರೆ. ಆಯ್ಕೆಯಾದ ಅಧ್ಯಕ್ಷರ ಅವಧಿ ಐದು ವರ್ಷಗಳಾಗಿವೆ.












Click it and Unblock the Notifications