ಬಿಜೆಪಿ 15 ದಿನದಲ್ಲಿ ಕಪ್ಪು ಹಣ ವಾಪಸ್ ತರಲಿ
ಉಡುಪಿ, ಮೇ 23 : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲೇ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ವಾಗ್ಧಾಳಿ ಆರಂಭಿಸಿದ್ದಾರೆ. ಬಿಜೆಪಿ ಸರ್ಕಾರ 15 ದಿನಗಳಲ್ಲಿ ವಿದೇಶದಲ್ಲಿರುವ ಭಾರತದ ಕಪ್ಪು ಹಣವನ್ನು ವಾಪಸ್ ತರಲಿ, ಆರ್ಥಿಕ ಕುಸಿತ ತಡೆಯಲಿ ಎಂದು ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಸವಾಲು ಹಾಕಿದ್ದಾರೆ.
ಗುರುವಾರ ಉಡುಪಿಯಲ್ಲಿ ಮಾತನಾಡಿದ ಆಸ್ಕರ್ ಫರ್ನಾಂಡೀಸ್, ಬಿಜೆಪಿ ಪ್ರತಿಪಕ್ಷದಲ್ಲಿದ್ದಾಗ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತಂದರೆ ಪಂಚವಾರ್ಷಿಕ ಯೋಜನೆಗೆ ಸಾಕಾಗುತ್ತದೆ ಎಂದು ಹೇಳುತ್ತಿದ್ದರು. ಈಗ ಅವರದ್ದೇ ಸರ್ಕಾರವಿದೆ ಕಪ್ಪುಹಣವನ್ನು 15 ದಿನಗಳಲ್ಲಿ ವಾಪಸ್ ತರಲಿ ಎಂದರು.

ಬಿಜೆಪಿಯವರು ಬೆಲೆ ಏರಿಕೆ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದಾರೆ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಿ, ಆರ್ಥಿಕ ಕುಸಿತವನ್ನು ತಡೆಯಿರಿ ಎಂದು ಬಿಜೆಪಿಗೆ ಸವಾಲು ಹಾಕಿದರು. ಜನರಿಗೆ ಅಗತ್ಯವಿರುವುದನ್ನು ನಾವೇ ಮಾಡುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಆದ್ದರಿಂದ ಪ್ರತಿಪಕ್ಷದ ಅಗತ್ಯವೇನಿದೆ? ಎಂದು ಅವರು ಪ್ರಶ್ನಿಸಿದರು. [ಕಪ್ಪುಹಣ: ಮತ್ತೆ ಕೇಂದ್ರಕ್ಕೆ ಚುರುಕು ಮುಟ್ಟಿಸಿದ ಕೋರ್ಟ್]
ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ 1 ರೂಗೆ ಅಕ್ಕಿ ಕೊಟ್ಟಿದ್ದು ಜನರಿಗೆ ಗೊತ್ತಾಗಲಿಲ್ಲ. ಅಡುಗೆ ಸಿಲಿಂಡರ್ ಗಳ ಸಂಖ್ಯೆಯನ್ನು 12ಕ್ಕೆ ಏರಿಕೆ ಮಾಡಿರುವುದು ತಿಳಿಯಲಿಲ್ಲ. ಬಿಜೆಪಿ ಸರ್ಕಾರ ಸಿಲಿಂಡರ್ ಗಳ ಸಂಖ್ಯೆಯನ್ನು 15ಕ್ಕೆ ಏರಿಕೆ ಮಾಡಲಿ ಎಂದು ಆಸ್ಕರ್ ಫರ್ನಾಂಡೀಸ್ ಹೇಳಿದರು.
ರಾಜ್ಯ ಸರ್ಕಾರಕ್ಕೆ ಸರ್ಜರಿ ಬೇಡ : ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಸರ್ಜರಿ ಮಾಡಬೇಕಾದ ಅಗತ್ಯವಿಲ್ಲ. ಸಾಕಷ್ಟು ಸರ್ಜರಿಗಳನ್ನು ಮಾಡಿಯೇ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಮುಂದಿನ ನಾಲ್ಕು ವರ್ಷಗಳ ಕಾಲ ಸರ್ಕಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಆಸ್ಕರ್ ಫರ್ನಾಂಡೀಸ್ ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications