ತೆರೆಯ ಮೇಲಿನ ಸಿಎಂ ಬಿಎಸ್ವೈ, ತೆರೆಯ ಹಿಂದಿನ ಮುಖ್ಯಮಂತ್ರಿ ಯಾರು?
ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಎಚ್ಚರಿಕೆಯ ನಂತರ, ಕರ್ನಾಟಕ ಬಿಜೆಪಿಯ ಆಂತರಿಕ ಬೇಗುದಿ ತಕ್ಕಮಟ್ಟಿಗೆ ಕಮ್ಮಿಯಾಗಿದ್ದರೂ, ಒಳಗೊಳಗಿಂದ ಕುದಿಯುತ್ತಿರುವ ಅಸಮಾಧಾನ ಜೋರಾಗುವ ಸಾಧ್ಯತೆ ಇಲ್ಲದಿಲ್ಲ.
ಇದಕ್ಕೆ ಕಾರಣ ಸೋಮವಾರ (ಜೂ 1) ರಾಜ್ಯಸಭೆಯ ಹದಿನೆಂಟು ಸ್ಥಾನಗಳಿಗೆ ಚುನಾವಣಾ ದಿನಾಂಕ ಪ್ರಕಟವಾಗಿರುವುದು. ಉತ್ತರ ಕರ್ನಾಟಕದ ಪ್ರಭಾವೀ ಮುಖಂಡ ಉಮೇಶ್ ಕತ್ತಿಯವರ ಸಹೋದರ, ರಾಜ್ಯಸಭಾ ಟಿಕೆಟ್ ಆಕಾಂಕ್ಷಿಯಾಗಿರುವುದು, ಇದಕ್ಕಿರುವ ಇನ್ನೊಂದು ಕಾರಣ.
ಇದು ಒಂದು ಕಡೆಯಾದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮೇ 30ರಂದು ಮಾಡಿರುವ ಟ್ವೀಟ್, ರಾಜ್ಯದ ರಾಜ್ಯಭಾರ ಯಡಿಯೂರಪ್ಪನವರು ನಡೆಸುತ್ತಿರುವುದು ಅಲ್ಲವೇ ಎನ್ನುವ ಸಂಶಯ ಮೂಡುವಂತೆ ಮಾಡಿದೆ.
ಉಮೇಶ್ ಕತ್ತಿಯವರ ನಿವಾಸದಲ್ಲಿ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ, ಯಡಿಯೂರಪ್ಪನವರು ಲಿಂಗಾಯತ ಶಾಸಕರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ವಿಚಾರ ಪ್ರಸ್ತಾವವಾಗಿರುವುದು ಒಂದೆಡೆ, ಇನ್ನೊಂದೆಡೆ ಸರಕಾರದ ಆಡಳಿತ ನಿಯಂತ್ರಣ ಯಡಿಯೂರಪ್ಪನವರ ಬಳಿಯಲ್ಲಿ ಇಲ್ಲ ಎನ್ನುವ ಸಿದ್ದರಾಮಯ್ಯನವರ ಟ್ವೀಟ್.

ಸಿದ್ದರಾಮಯ್ಯ ಮಾಡಿರುವ ಟ್ವೀಟ್
"ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ. ಒಬ್ಬರು ನಾಮ್ ಕಾವಸ್ಥೆ ಮುಖ್ಯಮಂತ್ರಿ, ಇನ್ನೊಬ್ಬರು ತೆರೆಯ ಹಿಂದೆ ಅಧಿಕಾರ ಚಲಾಯಿಸುವ ಮುಖ್ಯಮಂತ್ರಿ. ಇಂತಹ ಸರ್ಕಾರ ಎಷ್ಟು ದಿನ ಬಾಳಲು ಸಾಧ್ಯ? ಇಂತಹ ಮುಖ್ಯಮಂತ್ರಿ ಎಷ್ಟು ದಿನ ಅಧಿಕಾರದಲ್ಲಿರಲು ಸಾಧ್ಯ?" ಇದು ಸಿದ್ದರಾಮಯ್ಯ ಮಾಡಿರುವ ಟ್ವೀಟ್.

ಯಡಿಯೂರಪ್ಪ ನಾಮಕಾವಸ್ಥೆ ಸಿಎಂ
ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ನಾಮಕಾವಸ್ಥೆ ಸಿಎಂ ಎಂದು ಹೇಳಿರುವ ಸಿದ್ದರಾಮಯ್ಯ, ತೆರೆಯ ಹಿಂದೆ ಅಧಿಕಾರ ಚಲಾಯಿಸುವ ಸಿಎಂ ಇನ್ನೊಬ್ಬರು ಎಂದು ಹೇಳಿದ್ದಾರೆ. ಆ ಮೂಲಕ, ಅವರು ಯಾರು ಎನ್ನುವುದನ್ನು ಬಿಜೆಪಿ ವಲಯದ ಸುಲಭ ಊಹೆಗೆ ಬಿಟ್ಟಿದ್ದಾರೆ.

ನಾನು ಯಾವುದೇ ವಿಷಯದ ಬಗ್ಗೆ ವಿವರಣೆ ನೀಡಲ್ಲ
ಪಕ್ಷದೊಳಗಿನ ಭಿನ್ನಮತದ ಬಗ್ಗೆ ಯಡಿಯೂರಪ್ಪ, "ನಾನು ಯಾವುದೇ ವಿಷಯದ ಬಗ್ಗೆ ವಿವರಣೆ ನೀಡಲ್ಲ. ನನ್ನ ಕೆಲಸ ಏನೇ ಇದ್ದರೂ ಕೋವಿಡ್ ಬಗ್ಗೆ. ನಾನು ಕೋವಿಡ್ ಕೆಲಸದಲ್ಲಿ ಮಗ್ನನಾಗಿದ್ದೇನೆ. ಯಾವುದೇ ಸಭೆಗಳಾಗಲಿ ಯಾವುದೇ ನಾಯಕರ ಬಗ್ಗೆ ನಾನು ಮಾತನಾಡುವುದಿಲ್ಲ"ಎಂದು ಹೇಳಿದ್ದಾರೆ.

ಮೂರು ಡಿಸಿಎಂ ನೇಮಕ
ಮೂರು ಡಿಸಿಎಂ ನೇಮಕ ಮಾಡಿದಾಗಲೂ, ಯಡಿಯೂರಪ್ಪ, ಇದರಲ್ಲಿ ನನ್ನದೇನೂ ಇಲ್ಲ ಎನ್ನುವ ಅಸಮಾಧಾನವನ್ನು ಹೊರ ಹಾಕಿದ್ದರು. ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಪಕ್ಷದ ಫೇಸ್ ಎನ್ನುವುದು ಗೊತ್ತಿರುವ ವಿಚಾರ. ಆದರೂ, ಇತ್ತೀಚಿನ ದಿನಗಳಲ್ಲಿ, ಕೇಂದ್ರದಲ್ಲಿ ಪ್ರಭಾವಿಯಾಗಿರುವ ಮುಖಂಡರೊಬ್ಬರು, ಯಡಿಯೂರಪ್ಪನವರಿಗೆ ಸರಿಸಮಾನವಾಗಿ ಹತೋಟಿ ಸಾಧಿಸುತ್ತಾ ಬರುತ್ತಿದ್ದಾರಾ ಎನ್ನುವುದಿಲ್ಲಿ ಪ್ರಶ್ನೆ.












Click it and Unblock the Notifications