ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ
ಟಿಪ್ಪು ಸುಲ್ತಾನನನ್ನು ಯುದ್ಧದಲ್ಲಿ ಬ್ರಿಟೀಷರು ಕೊಂದಂತೆ ನನ್ನನ್ನು ಕೊಲ್ಲಿ ಎಂದು ಸಚಿವ ಅಶ್ವಥ್ ನಾರಾಯಣ ಅವರು ಜನರಿಗೆ ಪ್ರಚೋದನೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಗದಗ,ಫೆಬ್ರವರಿ16: ಜನತೆಯ ಆಶೀರ್ವಾದ ಇರುವವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಗುರುವಾರ ಗದಗ ಜಿಲ್ಲೆಯ ಶಿರಹಟ್ಟಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿ ಅವರು, ಟಿಪ್ಪು ಸುಲ್ತಾನನನ್ನು ಯುದ್ಧದಲ್ಲಿ ಬ್ರಿಟೀಷರು ಕೊಂದಂತೆ ನನ್ನನ್ನು ಕೊಲ್ಲಿ ಎಂದು ಸಚಿವ ಅಶ್ವಥ್ ನಾರಾಯಣ ಅವರು ಜನರಿಗೆ ಪ್ರಚೋದನೆ ನೀಡಿದ್ದಾರೆ, ಆದರೆ ಎಲ್ಲಿಯವರೆಗೆ ನನ್ನ ಮೇಲೆ ಜನರ ಆಶೀರ್ವಾದ ಇರುತ್ತದೆ ಅಲ್ಲಿಯವರೆಗೆ ನನ್ನನ್ನು ಯಾರಿಂದಲೂ ಏನು ಮಾಡಲು ಆಗಲ್ಲ, ಇಂಥಾ ಹಗಲುಗನಸು ಕಾಣುವುದನ್ನು ಅಶ್ವಥ್ ನಾರಾಯಣ ಅವರು ನಿಲ್ಲಿಸಬೇಕು ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅತ್ಯಂತ ಭ್ರಷ್ಟ, ಕೋಮುವಾದಿ ಸರ್ಕಾರ ಅಧಿಕಾರದಲ್ಲಿದೆ. ಬಿಜೆಪಿಯವರಿಂದ ತಳ ಸಮುದಾಯದ ಜನರಿಗೆ ಒಳ್ಳೆಯದಾಗಲು ಸಾಧ್ಯವಿಲ್ಲ. ಶಿರಹಟ್ಟಿಯಲ್ಲಿ 14 ಮಂದಿ ಆಕಾಂಕ್ಷಿಗಳು ಟಿಕೇಟ್ ಗಾಗಿ ಅರ್ಜಿ ಹಾಕಿದ್ದಾರೆ, ಒಬ್ಬರಿಗೆ ಮಾತ್ರ ಟಿಕೇಟ್ ನೀಡಲು ಸಾಧ್ಯ, ಉಳಿದ 13 ಮಂದಿ ಒಬ್ಬರ ಕಾಲು ಇನ್ನೊಬ್ಬರು ಎಳೆಯದೆ, ಪಕ್ಷ ಘೋಷಿಸಿದ ಅಭ್ಯರ್ಥಿಯ ಸಹಾಯಕ್ಕೆ ನಿಂತುಕೊಂಡು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಸಂಪೂರ್ಣ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡುತ್ತೇನೆ.

ಚುನಾವಣೆಗೆ ಇನ್ನು ಎರಡು ತಿಂಗಳುಗಳು ಉಳಿದಿದೆ. ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಇನ್ನು 60 ದಿನಗಳಾದ ಮೇಲೆ ಮನೆಗೆ ಹೋಗುತ್ತದೆ. ಆಪರೇಷನ್ ಕಮಲದ ಮೂಲಕ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಶಾಸಕರನ್ನು ಖರೀದಿಸಿ ಅನೈತಿಕ ಮಾರ್ಗದಲ್ಲಿ ಸರ್ಕಾರ ರಚನೆ ಮಾಡಿದ್ದಾರೆ. ಹೀಗೆ ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದವರಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ 40% ಕಮಿಷನ್ ಸರ್ಕಾರ ಆಡಳಿತದಲ್ಲಿದೆ. ಇದನ್ನು ಹೇಳಿದ್ದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು. ನ ಖಾವೂಂಗ ನ ಖಾನೆದೂಂಗ ಎನ್ನುವ ನರೇಂದ್ರ ಮೋದಿ ಅವರಿಗೆ ಕೆಂಪಣ್ಣನವರು ಪತ್ರ ಬರೆದು ಒಂದುವರೆ ವರ್ಷ ಆದರೂ ಯಾವುದೇ ಕ್ರಮಕೈಗೊಳ್ಳದೆ ಲಂಚ ತಿನ್ನಲು ಬಿಟ್ಟಿದ್ದಾರೆ. ಪೊಲೀಸ್ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಹೀಗೆ ಎಲ್ಲೇ ಹೋದರು ಲಂಚದಿಂದ ತುಂಬಿಹೋಗಿದೆ.
ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ, ಲಂಚ ಎಂದು ಪಿಸುಗುಟ್ಟಲು ಆರಂಭ ಮಾಡಿದೆ. ವಿಧಾನಸೌಧದಲ್ಲಿ ಒಂದೊಂದು ಹುದ್ದೆಗೆ ಇಂತಿಷ್ಟು ಎಂದು ಲಂಚ ಫಿಕ್ಸ್ ಮಾಡಿ ಬೋರ್ಡ್ ಹಾಕಿಕೊಂಡು ಕೂತಿದ್ದಾರೆ. ನಾನು 12 ವರ್ಷ ಹಣಕಾಸು ಸಚಿವನಾಗಿ, 5 ವರ್ಷ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ, ಒಬ್ಬನೇ ಒಬ್ಬ ಗುತ್ತಿಗೆದಾರ ಎನ್,ಒ,ಸಿ ರಿಲೀಸ್ ಮಾಡಲು ಸಿದ್ದರಾಮಯ್ಯನಿಗೆ 5 ಪೈಸೆ ಲಂಚ ನೀಡಿದ್ದೇನೆ ಎಂದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ತೇನೆ ಎಂದು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ ಮಾತನಾಡುವಾಗ ರಸ್ತೆ, ಚರಂಡಿ, ಸೇತುವೆಗಳ ಬಗ್ಗೆ ಪ್ರಶ್ನೆ ಮಾಡಬೇಡಿ, ಲವ್ ಜಿಹಾದ್ ಬಗ್ಗೆ ಮಾತ್ರ ಮಾತನಾಡಿ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಂದಿನ ಚುನಾವಣೆ ಟಿಪ್ಪು ಸುಲ್ತಾನ್ ವರ್ಸಸ್ ಅಬ್ಬಕ್ಕ ಎಂದಿದ್ದಾರೆ. ಯುವ ಜನರಿಗೆ ಕೆಲಸ, ರೈತರ ಜಮೀನಿಗೆ ನೀರು, ಬಡವರಿಗೆ ಅನ್ನ ಇದನ್ನು ಚರ್ಚೆ ಮಾಡದೆ ಅಬ್ಬಕ್ಕ ವರ್ಸಸ್ ಟಿಪ್ಪು ಬಗ್ಗೆ ಯೋಚನೆ ಮಾಡಿ ಮತ ನೀಡುತ್ತೀರ? ಮಹಾತ್ಮ ಗಾಂಧಿ ವರ್ಸಸ್ ಸಾವರ್ಕರ್, ಗಾಂಧಿ ವರ್ಸಸ್ ಗೋಡ್ಸೆ ಎಂದು ಗಾಂಧಿ ಹಂತಕರನ್ನು ಆರಾಧಿಸುತ್ತಿದ್ದಾರೆ. ಇಂಥವರ ಕೈಗೆ ಮತ್ತೆ ಅಧಿಕಾರ ನೀಡುತ್ತೀರ? ಪ್ರಶ್ನಿಸಿದರು.
ಟಿಪ್ಪು ಸುಲ್ತಾನ್ ನನ್ನು ಕೊಂದಂತೆ ಸಿದ್ದರಾಮಯ್ಯ ಅವರನ್ನು ಕೊಲ್ಲಬೇಕು ಎಂದು ಸಚಿವರಾದ ಅಶ್ವಥ್ ನಾರಾಯಣ ಕರೆ ನೀಡಿದ್ದಾರೆ. ಒಂದಂತು ಸತ್ಯ, ಎಲ್ಲಿಯವರೆಗೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರುತ್ತದೆ ಅಲ್ಲಿಯವರೆಗೆ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅಶ್ವಥ್ ನಾರಾಯಣ ಅವರೇ ನೀವು ಹಗಲುಗನಸು ಕಾಣುತ್ತಿದ್ದೀರ. ಜನರನ್ನು ಪ್ರಚೋದನೆ ಮಾಡಲು ಹೋದರೆ ಜನ ಅದಕ್ಕೆ ಸೊಪ್ಪು ಹಾಕಲ್ಲ ಎಂದು ಹೇಳಿದರು.












Click it and Unblock the Notifications