ಆಪರೇಷನ್ ಕಮಲ : ಮುಂಬೈನಲ್ಲಿದ್ದಾರೆ ಅತೃಪ್ತ ಕಾಂಗ್ರೆಸ್ ಶಾಸಕರು
ಬೆಂಗಳೂರು, ಫೆಬ್ರವರಿ 06 : ರಾಜ್ಯದಲ್ಲಿ ಆಪರೇಷನ್ ಕಮಲ ಇನ್ನೂ ನಿಂತಿಲ್ಲ. ಕಾಂಗ್ರೆಸ್ನ ಕೆಲವು ಅತೃಪ್ತ ಶಾಸಕರು ಮುಂಬೈನಲ್ಲಿದ್ದಾರೆ ಎಂಬ ಮಾಹಿತಿ ಇದೆ. ಬಜೆಟ್ ಅಧಿವೇಶನಕ್ಕೆ ಹಾಜರಾಗಬೇಕು ಎಂದು ಕಾಂಗ್ರೆಸ್ ಎಲ್ಲಾ ಶಾಶಕರಿಗೆ ವಿಪ್ ಜಾರಿ ಮಾಡಿದೆ.
ವಿಧಾನ ಮಂಡಲದ ಬಜೆಟ್ ಅಧಿವೇಶನ ಬುಧವಾರ ಆರಂಭವಾಗಿದೆ. ಬಿಜೆಪಿ ಸದಸ್ಯರ ಗದ್ದಲದ ನಡುವೆಯೇ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಆದರೆ, ಕಾಂಗ್ರೆಸ್ನ 8, ಜೆಡಿಎಸ್ನ ಒಬ್ಬರು ಶಾಸಕರು ಇಂದು ಸದನಕ್ಕೆ ಗೈರಾಗಿದ್ದರು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮೊದಲು ಗುರುವಾರ ಸದನದಲ್ಲಿ ಏನಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸದನಕ್ಕೆ ಗೈರಾಗಿರುವ ಶಾಸಕರು ಮುಂಬೈನಲ್ಲಿದ್ದಾರೆ ಎಂದು ಶಂಕಿಸಲಾಗಿದೆ. ಆದರೆ, ಎಷ್ಟು ಜನ ಶಾಸಕರು ಇದ್ದಾರೆ ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಎಲ್ಲಾ ಶಾಸಕರು ಗುರುವಾರ ಒಟ್ಟಾಗಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ....

9 ಶಾಸಕರು ಗೈರು
ಬುಧವಾರ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್ನ 8, ಜೆಡಿಎಸ್ನ ಒಬ್ಬರು ಶಾಸಕರು ಗೈರಾಗಿದ್ದಾರು. ಕಾಂಗ್ರೆಸ್ನಲ್ಲಿ ಗೈರಾರದವ ಪೈಕಿ ಎಲ್ಲರೂ ಅತೃಪ್ತರ ಬಣದಲ್ಲಿ ಗುರುತಿಸಿಕೊಂಡ ಶಾಸಕರು. ಶಾಸಕರಾದ ರಮೇಶ್ ಜಾರಕಿಹೊಳಿ (ಗೋಕಾಕ್), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಮಹೇಶ್ ಕುಮಟಳ್ಳಿ (ಅಥಣಿ), ಡಾ.ಕೆ.ಸುಧಾಕರ್ (ಚಿಕ್ಕಬಳ್ಳಾಪುರ), ಬಿ.ಸಿ.ಪಾಟೀಲ್ (ಹಿರೆಕೇರೂರು). ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿದ್ದ ಮುಳಬಾಗಿಲು ಶಾಸಕ ಎಚ್.ನಾಗೇಶ್ ಮತ್ತು ರಾಣೆಬೆನ್ನೂರು ಶಾಸಕ ಆರ್.ಶಂಕರ್ ಸಹ ಗೈರಾಗಿದ್ದರು.

ಎಲ್ಲರೂ ಗುರುವಾರ ಬರ್ತಾರೆ
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು, 'ಯಾವ ಶಾಸಕರು ರಾಜೀನಾಮೆ ಕೊಡುವುದಿಲ್ಲ. ಗುರುವಾರ ಸದನಕ್ಕೆ ಎಲ್ಲರೂ ಆಗಮಿಸುತ್ತಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮೈತ್ರಿ ಸರ್ಕಾರದ ಬಲ 114
224 ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್-ಜೆಡಿಎಸ್ 117 ಸದಸ್ಯರ ಬಲವನ್ನು ಹೊಂದಿದೆ. ಇವುಗಳಲ್ಲಿ ಕೆಪಿಜೆಪಿ, ಬಿಎಸ್ಪಿ ಮತ್ತು ಪಕ್ಷೇತರ ಶಾಸಕ ಎಚ್.ನಾಗೇಶ್ ಸೇರಿದ್ದಾರೆ. ಆದರೆ, ಕೆಪಿಜೆಪಿಯ ಆರ್.ಶಂಕರ್ ಮತ್ತು ಎಚ್.ನಾಗೇಶ್ ತಮ್ಮ ಬೆಂಬಲ ವಾಪಸ್ ಕೊಡುವುದಾಗಿ ಹಿಂದೆ ಹೇಳಿದ್ದರು. ಆದರೆ, ಅವರಿನ್ನೂ ರಾಜ್ಯಪಾಲರನ್ನು ಭೇಟಿಯಾಗಿ ಪತ್ರವನ್ನು ನೀಡಿಲ್ಲ. ಬಿಜೆಪಿಯ ಬಲ 104.

ಗುರುವಾರ ರಾಜೀನಾಮೆ?
ಅತೃಪ್ತ ಶಾಸಕರು ಗುರುವಾರ ರಾಜೀನಾಮೆ ನೀಡಲಿದ್ದಾರೆಯೇ? ಎಂಬ ಸುದ್ದಿ ಹಬ್ಬಿದೆ. ಬುಧವಾರ ರಾತ್ರಿ ಮುಂಬೈನಿಂದ ಎಲ್ಲರೂ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದ್ದು, ಗುರುವಾರ ಸ್ಪೀಕರ್ ರಮೇಶ್ ಕುಮಾರ್ ಭೇಟಿಯಾಗಿ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.












Click it and Unblock the Notifications