ಎಸ್ಐಟಿ ತನಿಖೆಯೇ ಸರಿ, ನ್ಯಾಯಾಂಗ ತನಿಖೆ ಸಾಧ್ಯವಿಲ್ಲ: ರಮೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು, ಫೆಬ್ರವರಿ 12: ಆಪರೇಷನ್ ಕಮಲದಲ್ಲಿ ತಮ್ಮ ಹೆಸರು ಕೇಳಿಬಂದ ಪ್ರಕರಣವನ್ನು ವಿಶೇಷ ತನಿಖಾ ದಳ (ಎಸ್ಐಟಿ) ಹೊರತುಪಡಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಲು ಸಾಧ್ಯವಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಒಂದನೆಯದಾಗಿ ನ್ಯಾಯಾಂಗ ತನಿಖೆ ಬಹಳ ವಿಳಂಬ. ಇಲ್ಲಿ ಇರುವ ಆರೋಪ ಇರುವ ಆರೋಪ ಕ್ರಿಮಿನಲ್ ಸ್ವರೂಪದ್ದು. ಸರ್ಕಾರ ಅಸ್ಥಿರ ಮಾಡುವುದು, ದುಡ್ಡು ಕೊಟ್ಟಿದ್ದೇವೆ ಎನ್ನುವುದು ಕ್ರಿಮಿನಲ್ ಸ್ವರೂಪ ಹೊಂದಿದೆ. ಕ್ರಿಮಿನಲ್ ಸ್ವರೂಪದ ಆರೋಪ ಇದ್ದಾಗ ಶಿಕ್ಷೆ ನೀಡಲು ನ್ಯಾಯಾಂಗ ತನಿಖಾಧಿಕಾರಿಗಳಿಗೆ ಅವಕಾಶ ಇರುವುದಿಲ್ಲ. ಫೋರೆನ್ಸಿಕ್ ಟೆಸ್ಟ್ ಖಚಿತವಾಗಿ ಮಾತನಾಡಿದವರು ಸದನಕ್ಕೆ ಸೇರಿದವರೇ ಆದರೆ ನ್ಯಾಯಾಂಗ ತನಿಖೆ ಹೇಗೆ ನಡೆಸುವುದು? ಅದೇ ಎಸ್ಐಟಿ ತನಿಖೆ ನಡೆದರೆ ತಪ್ಪಿತಸ್ಥರೆಂದು ಕಂಡುಬಂದ ಕೂಡಲೇ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
ಮುಖ್ಯಮಂತ್ರಿ ವಿರುದ್ಧವೇ ಆರೋಪ ಇರುವಾಗ ಅವರ ಅಧೀನದಲ್ಲಿರುವ ಎಸ್ಐಟಿಯನ್ನು ಹೇಗೆ ನಂಬಲು ಸಾಧ್ಯ ಎಂಬ ವಿರೋಧಪಕ್ಷಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರಿ ಸೇವೆಯಲ್ಲಿ ಇರುವವರು ಸರ್ಕಾರದ ಆಳುಗಳಲ್ಲ. ಆ ರೀತಿ ವಹಿಸಿದರೆ ಮುಂದಿನ ಯಾವ ಸರ್ಕಾರಕ್ಕೂ ಎಂದಿಗೂ ಏನೂ ಮಾಡಲು ಆಗೊಲ್ಲ.

ಯಾರು ಯಾರನ್ನು ಬೇಕಾದರೂ ಈ ದೇಶದಲ್ಲಿ ಪ್ರಭಾವಿಸಬಹುದು. ನಿಮ್ಮ ವಾದಕ್ಕೆ ಅರ್ಥವೇ ಇರುವುದಿಲ್ಲ. ಎಲ್ಲ ಕಾಲಕ್ಕೂ ಚುನಾವಣೆ ನಡೆಯಲೇಬೇಕು ಸರ್ಕಾರಗಳು ಬದಲಾಗಲೇಬೇಕು. ಸರ್ಕಾರ ನಿಮ್ಮದು ಅಧಿಕಾರ ನಿಮ್ಮದು ಎಂದರೆ? ಪ್ರಜಾಪ್ರಭುತ್ವವನ್ನು ಅರ್ಥ ಮಾಡಿಕೊಲ್ಳಬೇಕು. ಅಧಿಕಾರ, ಆಡಳಿತ, ನ್ಯಾಯಾಂಗ ಎಲ್ಲವೂ ಬೇರೆ. ಐಎಎಸ್, ಐಪಿಎಸ್ ಮಾಡಿಕೊಂಡು ಬಂದವರಿಗೆ ಏನು ಮಾಡಬೇಕು ಮಾಡಬಾರದು ಎಂದು ಗೊತ್ತಿದೆ. ಅವರಿಗೆ ತರಬೇತಿ ಇರೊಲ್ಲವಾ? ಮುಖ್ಯಮಂತ್ರಿ ಹೇಳಿದ ಕೂಡಲೇ ಮಾಡುತ್ತಾರಾ? ಎಂದು ಮರುಪ್ರಶ್ನಿಸಿದರು.
ಕುಮಾರಸ್ವಾಮಿ ರಾಜೀನಾಮೆ ಕುರಿತಾದ ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ರಾಜೀನಾಮೆಯಾದರೂ ತೆಗೆದುಕೊಳ್ಳಲಿ. ಅದರಲ್ಲಿ ನನ್ನ ಹೆಸರು ಅದರಲ್ಲಿ ಮೆನ್ಷನ್ ಆಗಿದೆ. ನಾನು ಈ ಕಸದ ಬುಟ್ಟಿ ಹೊತ್ತುಕೊಳ್ಳಲಾರೆ. ಅದರಿಂದ ಬಿಡುಗಡೆ ನೀಡಲಿ ಎಂದು ಹೇಳಿದರು.
ಶಾಸಕರ ಅನರ್ಹತೆ ಕುರಿತಾದ ಪ್ರಶ್ನೆಗೆ ಅವರು, ನಾಲ್ವರು ಶಾಸಕರ ವಿರುದ್ಧ ಅರ್ಜಿ ಕೊಟ್ಟಿದ್ದಾರೆ. ದೊಡ್ಡ ಪುಸ್ತಕ ಅದು. ನೂರು ಪುಟಕ್ಕೂ ಜಾಸ್ತಿ ಇದೆ. ಸೆಷನ್ ಮುಗಿದ ಬಳಿಕ ಓದಿ, ಅಧಿಕಾರಿಗಳೊಂದಿಗೆ ಸಲಹೆ ಪಡೆಯುತ್ತೇನೆ. ಅಡ್ವೊಕೇಟ್ ಜನರಲ್ ಬಳಿ ಚರ್ಚೆ ಮಾಡಿ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಯೋಚನೆ ಮಾಡಬೇಕು. ಅಗತ್ಯಬಿದ್ದರೆ ಮುಂದಿನ ಕ್ರಮ ತೆಗೆದುಕೊಳ್ಳುತ್ತಾರೆ. ಚರ್ಚೆ ಮಾಡದೆ ಹೇಗೆ ಬಹಿರಂಗಪಡಿಸಲಿ. ಹಾಗೆ ತೀರ್ಮಾನ ತೆಗೆದುಕೊಳ್ಳಲು ನಾನೇನು ಹಿಟ್ಲರಾ? ಎಂದರು.
ಗಣೇಶ್ ಕಂಪ್ಲಿ ವಿಚಾರ ನನಗೆ ಸಂಬಂಧವಿಲ್ಲ. ಬಹಳ ಜನಕ್ಕೆ ಕಲ್ಪನೆ ಇದೆ. ಕೆಲವು ನಿರ್ದಿಷ್ಟ ಜವಾಬ್ದಾರಿಗಳನ್ನು ನಿರ್ವಹಿಸಲು ಜನಪ್ರಾನಿಧಿಕ ಕಾಯ್ದೆ ಪ್ರಕಾರ ಎಂಎಲ್ಎ, ಎಂಪಿಯನ್ನು ಆಯ್ಕೆ ಮಾಡುತ್ತಾರೆ. ದೇಶದಲ್ಲಿರುವ ಎಲ್ಲ ಕಾನೂನು ಅವರಿಗೂ ಅನ್ವಯಿಸುತ್ತದೆ. ಬಂಧಿಸಲು ಯಾರ ಅನುಮತಿಯೂ ಬೇಕಾಗಿಲ್ಲ. ತನಿಖಾಧಿಕಾರಿ ಬಂಧಿಸಬಹುದು ಎಂದು ತಿಳಿಸಿದರು.
ಧರಣಿ ಮುಂದುವರಿಸಲು ತೀರ್ಮಾನಿಸಿರುವ ಬಿಜೆಪಿಯವರು ಸಹಕರಿಸಿದರೆ ಸದನ ನಡೆಸುತ್ತೇನೆ. ಇಲ್ಲದಿದ್ದರೆ ಅನಿವಾರ್ಯವಾಗಿ ಮುಂದಕ್ಕೆ ಹಾಕುತ್ತೇನೆ. ನಾನು ಹೇಳಿದ್ದನ್ನು ಅರ್ಥ ಮಾಡಕೊಳ್ಳಬೇಕು. ಅದನ್ನು ಪದೇ ಪದೇ ಸದನದಲ್ಲಿ ಹೇಳಿದ್ದೇನೆ ಎಂದು ಹೇಳಿದರು.












Click it and Unblock the Notifications