ಸದನದಲ್ಲಿ ವೇಶ್ಯೆಯ ಬಗ್ಗೆ ಉಲ್ಲೇಖಿಸಿದ ಸ್ಪೀಕರ್ ರಮೇಶ್ ಕುಮಾರ್
Recommended Video

ಬೆಂಗಳೂರು, ಫೆ 11: ಆಪರೇಷನ್ ಕಮಲದ ಆಡಿಯೋದಲ್ಲಿ ತಮ್ಮ ಹೆಸರು ಬಂದಿರುವುದಕ್ಕೆ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿ, ರಾಜೀನಾಮೆ ನೀಡುವ ಕುರಿತು ಮಾತನ್ನಾಡಿದ್ದಾರೆ. ಈ ಬಗ್ಗೆ, ಎಲ್ಲಾ ಶಾಸಕರು ಪಕ್ಷಬೇಧ ಮರೆತು, ಇದನ್ನು ವಿರೋಧಿಸಿದ್ದಾರೆ.
ಸಚಿವ ಡಿ ಕೆ ಶಿವಕುಮಾರ್ ಮಾತನಾಡುತ್ತಾ, ನಾವೆಲ್ಲಾ ಸಾರ್ವಜನಿಕ ಜೀವನದಲ್ಲಿ ಇರುವವರು. ಆಡಿಯೋ ಮುಂತಾದ ಘಟನೆಗಳಿಂದ ಜನಪ್ರತಿನಿಧಿಗಳ ಮರ್ಯಾದೆ ಮೂರಾಬಟ್ಟೆಯಾಗುತ್ತಿದೆ. ನಿಮ್ಮ ಮೂಲಕ ನಮ್ಮೆಲ್ಲರ ಮತ್ತು ಸದನದ ಮರ್ಯಾದೆ ಉಳಿಯುವಂತಾಗಲಿ ಎಂದು ಡಿಕೆಶಿ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸುತ್ತಾ ಸ್ಪೀಕರ್ ರಮೇಶ್ ಕುಮಾರ್, ಪುಸ್ತಕವೊಂದರಲ್ಲಿ ಬಂದಿದ್ದ ವಾಖ್ಯವನ್ನು ಉಲ್ಲೇಖಿಸುತ್ತಾ.. ಒಬ್ಬ ಕಂಠಪೂರ್ತಿ ಮದ್ಯಪಾನ ಮಾಡಿ ವೇಶ್ಯೆಯ ಮನೆಗೆ ಹೋಗುತ್ತಾನೆ. ಮದ್ಯದ ಅಮಲಿನಿಂದ ಅವನು ಸುಖ ಅನುಭವಿಸಲು ಆಗುವುದಿಲ್ಲ.

ಮರುದಿನ ಬೆಳಗ್ಗೆ ತಿಂಡಿ ತರಿಸಿ ಕೊಡುವಂತೆ ಕೇಳುತ್ತಾನೆ, ವೇಶ್ಯೆ ತಾನೇ ತಿಂಡಿ ತರಿಸಿಕೊಡುತ್ತಾಳೆ. ಅದರ ದುಡ್ಡನ್ನು ಅವಳು ತೆಗೆದುಕೊಳ್ಳುವುದಿಲ್ಲ. ಯಾಕೆಂದು ಕೇಳಿದಾಗ, ನಾವು ಇದೇ ವೃತ್ತಿಯಲ್ಲಿ ಇರುವವರು, ನೀವು ನನ್ನನ್ನು ನಿನ್ನೆ ರಾತ್ರಿ ಅನುಭವಿಸಲಿಲ್ಲ. ಹಾಗಾಗಿ, ನಿಮ್ಮಿಂದ ತೆಗೆದುಕೊಂಡ ದುಡ್ಡನ್ನು ನಾನು ತೆಗೆದುಕೊಳ್ಳುವುದು ತಪ್ಪು, ನಮಗೂ ಸ್ವಾಭಿಮಾನ ಎನ್ನುವುದು ಇರುತ್ತದೆ ಎಂದು ಹೇಳುತ್ತಾಳೆ.
ಆಡಿಯೋ ಘಟನೆಯಿಂದ ವೈಯಕ್ತಿಕವಾಗಿ ನನಗೆ ಬಹಳ ದುಃಖವಾಗಿದೆ, ನಾನು ಯಾವ ಪರಿಸ್ಥಿತಿಯಲ್ಲಿ ಇದ್ದಿರಬಹುದು ಎನ್ನುವುದನ್ನು ಮಾನ್ಯ ಎಲ್ಲಾ ಶಾಸಕರು ಒಮ್ಮೆ ಅರಿತುಕೊಳ್ಳಬೇಕು. ಇದು ನನ್ನ ಸ್ವಾಭಿಮಾನಕ್ಕಾದ ಧಕ್ಕೆ, ಹಾಗಂತ ವೈಯಕ್ತಿಕವಾಗಿ ಈ ಘಟನೆಗೆ ನಾನು ಪ್ರತಿಕ್ರಿಯೆ ನೀಡುವುದು ತಪ್ಪಾಗುತ್ತದೆ ಎಂದು ರಮೇಶ್ ಕುಮಾರ್ ಹೇಳುವ ಮೂಲಕ, ರಾಜೀನಾಮೆ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದಾರೆ.
ಈ ಸದನದ ಮರ್ಯಾದೆಯನ್ನು ಉಳಿಸುವ ಗುರುತರ ಜವಾಬ್ದಾರಿ ನನ್ನ ಮೇಲಿದೆ. ಹಾಗಾಗಿ, ಇದರ ತನಿಖೆಯಾಗಬೇಕು, ಹದಿನೈದು ದಿನದೊಳಗೆ ತನಿಖೆ ನಡೆಸಿ, ವರದಿ ನೀಡುವಂತೆ, ಸ್ಪೀಕರ್ ರಮೇಶ್ ಕುಮಾರ್, ಸಿಎಂ ಕುಮಾರಸ್ವಾಮಿಯವರಿಗೆ ಸೂಚಿಸಿದ್ದಾರೆ.












Click it and Unblock the Notifications