ರಾಜ್ಯ ರಾಜಕೀಯ: ಆದಿಚುಂಚನಗಿರಿ ಶ್ರೀಗಳ ಮಹತ್ವದ ಹೇಳಿಕೆ
Recommended Video

ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ನಡುವೆ, ಆದಿಚುಂಚನಗಿರಿ ಸಂಸ್ಥಾನದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿಯವರು ನೀಡಿದ ಹೇಳಿಕೆ ಮಹತ್ವ ಪಡಿದಿದೆ.
ಆಪರೇಷನ್ ಕಮಲದ ಉಸ್ತುವಾರಿಯನ್ನು ಬೆಂಗಳೂರು ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ ವಹಿಸಿಕೊಂಡಿದ್ದರು, ಇದರಿಂದ ಶ್ರೀಗಳು ಶಾಸಕರ ವಿರುದ್ದ ಫುಲ್ ಗರಂ ಆಗಿದ್ದರು ಎನ್ನುವ ಸುದ್ದಿ ಭಾರೀ ವೈರಲ್ ಆಗಿತ್ತು.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು, ಸದ್ಯದ ರಾಜಕೀಯಕ್ಕೂ ಶ್ರೀಮಠಕ್ಕೂ ಯಾವುದೇ ಸಂಬಂಧವಿಲ್ಲ. ವಿನಾಕಾರಣ, ನಮ್ಮ ಮಠವನ್ನು ಇದಕ್ಕೆ ಎಳೆಯಬೇಡಿ ಎಂದಿದ್ದಾರೆ.
ದೇವೇಗೌಡರು ಒಬ್ಬ ಮಹಾನ್ ದೈವಭಕ್ತ. ಅವರ ವಿರುದ್ದ ಹೋಗುವುದು, ದೈವ ವಿರುದ್ಧ ನಿಲ್ಲುವುದು ಒಂದೇ ಎಂದು ನಿರ್ಮಲಾನಂದನಾಥ ಸ್ವಾಮೀಜಿಗಳು ಈ ಹಿಂದೆ ನೀಡಿದ್ದ ಹೇಳಿಕೆಯೂ ವ್ಯಾಪಕ ಚರ್ಚೆಗೆ ಒಳಗಾಗಿತ್ತು.

ಆಪರೇಷನ್ ಕಮಲದ ಸಂಪೂರ್ಣ ಉಸ್ತುವಾರಿ
ಮಕರ ಸಂಕ್ರಾಂತಿಯ ಮುನ್ನಾದಿನ ಚುರುಕುಗೊಂಡ ಆಪರೇಷನ್ ಕಮಲದ ಸಂಪೂರ್ಣ ಉಸ್ತುವಾರಿಯನ್ನು ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ವಹಿಸಿಕೊಂಡಿದ್ದರು ಎನ್ನುವ ಸುದ್ದಿಯ ನಡುವೆ, ಆದಿಚುಂಚನಗಿರಿ ಪೀಠಾಧಿಪತಿಗಳು ಅವರ ವಿರುದ್ದ ಸಿಟ್ಟಾಗಿದ್ದರು ಎಂದು ವರದಿಯಾಗಿತ್ತು. ಈ ಸಂಬಂಧ ಶ್ರೀಗಳು ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ.

ಸರಕಾರಕ್ಕೆ ಏನೂ ತೊಂದರೆಯಿಲ್ಲ ಎನ್ನುವ ಅಭಯ
ಒಕ್ಕಲಿಗ ಸಮುದಾಯದವರಾಗಿ, ನಮ್ಮ ಸಮುದಾಯದವರೇ ಮುಖ್ಯಮಂತ್ರಿಯಾಗಿದ್ದಾರೆ. ಅವರ ಸರಕಾರ ಬೀಳಿಸುವ ಕೆಲಸಕ್ಕೆ ನೀವು ಮುಂದಾಗಿದ್ದು ಸರಿಯಲ್ಲ ಎಂದು ನಿರ್ಮಲಾನಂದನಾಥ ಶ್ರೀಗಳು, ಶಾಸಕ ಅಶ್ವಥ್ ನಾರಾಯಣಗೆ ಕರೆ ಮಾಡಿದ್ದರು ಎಂದು ವರದಿಯಾಗಿತ್ತು. ಇದಾದ ನಂತರ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೂ ಸರಕಾರಕ್ಕೆ ಏನೂ ತೊಂದರೆಯಿಲ್ಲ ಎನ್ನುವ ಅಭಯವನ್ನು ನೀಡಿದ್ದರು.

ರಾಜ್ಯದ ಜನರ ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದೆ
ಈ ಸಂಬಂಧ ಹೇಳಿಕೆ ನೀಡಿರುವ ಆದಿಚುಂಚನಗಿರಿ ಶ್ರೀಗಳು, ಕೆಲವು ಮಾಧ್ಯಮಗಳು ಮಠದ ಬಗ್ಗೆ ಊಹಾಪೋಹದ ಸುದ್ದಿಗಳನ್ನು ಬಿತ್ತರಿಸಿ, ರಾಜ್ಯದ ಜನರ ದಾರಿತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಇದರಿಂದ ಮಠದ ಭಕ್ತರಿಗೆ ತೀವ್ರ ನೋವಾಗಿದೆ. ಸದ್ಯದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಗೂ ಶ್ರೀ ಮಠಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ - ನಿರ್ಮಲಾನಂದನಾಥ ಸ್ವಾಮೀಜಿ

ನಂಬಿಕೆಯ ವಿರುದ್ದ ಶ್ರೀಮಠ ಎಂದಿಗೂ ಕೆಲಸ ಮಾಡುವುದಿಲ್ಲ
ರಾಜ್ಯದ ಭಕ್ತರು ಮಠದ ಮೇಲೆ ಇಟ್ಟುಕೊಂಡಿರುವ ನಂಬಿಕೆಯ ವಿರುದ್ದ ಶ್ರೀಮಠ ಎಂದಿಗೂ ಕೆಲಸ ಮಾಡುವುದಿಲ್ಲ. ಎಲ್ಲರನ್ನೂ ಸಮನಾಗಿ ಕಾಣುತ್ತಾ, ಸಮಾಜಸೇವೆಯನ್ನು ಮಾಡಿದ್ದೇವೆ, ಮುಂದೆಯೂ ಮಾಡಿಕೊಂಡು ಬರುತ್ತೇವೆ. ಕಪೋಲಕಲ್ಪಿತ ಸುದ್ದಿಗಳನ್ನು ಭಕ್ತರು ಮತ್ತು ರಾಜ್ಯದ ಜನತೆ ನಂಬಬಾರದು - ನಿರ್ಮಲಾನಂದನಾಥ ಸ್ವಾಮೀಜಿ.

ಮಠದ ಕಾರ್ಯದರ್ಶಿಗಳನ್ನು ಸಂಪರ್ಕಿಸಲು ಕೋರಿದ್ದೇವೆ
ಎಲ್ಲಾ ಮಾಧ್ಯಮಗಳು ಸುದ್ದಿ ಬಿತ್ತರಿಸುವ ಮುನ್ನ ಮಠದ ಕಾರ್ಯದರ್ಶಿಗಳನ್ನು ಸಂಪರ್ಕಿಸಲು ಕೋರಿದ್ದೇವೆ. ಶ್ರೀ ಮಠವು ಹಿಂದಿನ ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮುಂದುವರೆಯುತ್ತಿದೆ. ಶ್ರೀ ಮಠಕ್ಕೆ ಎಲ್ಲಾ ಜಾತಿ, ಮತ, ಧರ್ಮ ಎಲ್ಲವೂ ಒಂದೇ - ನಿರ್ಮಲಾನಂದನಾಥ ಸ್ವಾಮೀಜಿ.












Click it and Unblock the Notifications