Karnataka Election: ಬಹಿರಂಗ ಪ್ರಚಾರ ಅಂತ್ಯ: ಕೊನೆ ದಿನದ ಮತಯಾಚನೆಗೆ ಹಲವೆಡೆ ಮಳೆ ಅಡ್ಡಿ!
ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಸೋಮವಾರ ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯವಾಗಿದ್ದು, ಕೊನೆ ಹಂತದಲ್ಲಿ ಮತದಾರರನ್ನು ಸೆಳೆಯಲು ಎಲ್ಲಾ ಪಕ್ಷಗಳ ನಾಯಕರು ಕೊನೆ ಹಂತದ ಕಸರತ್ತು ಮಾಡಿದರು.
ಬೆಂಗಳೂರಿನಲ್ಲಿ ಬಹಿರಂಗ ಪ್ರಚಾರಕ್ಕೆ ಮಳೆ ಅಡ್ಡಿಪಡಿಸಿತು. ಗಾಂಧಿ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಬೇಕಿತ್ತು ಆದರೆ, ಮಳೆಯ ಕಾರಣ ಬಹಿರಂಗ ಪ್ರಚಾರವನ್ನು ರದ್ದುಗೊಳಿಸಲಾಯಿತು.

ಹೆಚ್ಡಿ ಕುಮಾರಸ್ವಾಮಿ ಯಶವಂತಪುರದಲ್ಲಿ ಚುನಾವಣಾ ಪ್ರಚಾರ ಹಮ್ಮಿಕೊಂಡಿದ್ದರು ಮಳೆಯ ಕಾರಣದಿಂದ ಅವರು ರಾಮನಗರದಲ್ಲೇ ಉಳಿದುಕೊಂಡರು. ಆದರೆ, ಅವರು ಇಂದು ಚನ್ನಪಟ್ಟಣದಲ್ಲಿ ಪ್ರಚಾರ ಮಾಡಿದರು. ಡಿಕೆ ಶಿವಕುಮಾರ್ ಕೂಡ ಕನಕಪುರ ಕ್ಷೇತ್ರದಲ್ಲಿ ಪ್ರಚಾರ ಮಾಡಿದರು. ಸಿದ್ದರಾಮಯ್ಯ ಕೂಡ ಹೆಗ್ಗಡದೇವನಕೋಟೆಯಲ್ಲಿ ಕೊನೆಯ ಹಂತದ ಪ್ರಚಾರ ಮಾಡಿದರು.
ಮಂಗಳವಾರ ಮನೆ ಮನೆ ಪ್ರಚಾರಕ್ಕೆ ಅವಕಾಶ ನೀಡಿದ್ದು, ಕೊನೆಯ ಹಂತದ ಪ್ರಚಾರ ನಡೆಯಲಿದೆ. ಸೋಮವಾರ ಸಂಜೆ 5 ಗಂಟೆಯಿಂದ ಮೇ 10 ರ ಮಧ್ಯರಾತ್ರಿವರೆಗೆ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಹಣ, ಉಡುಗೊರೆ ಹಂಚಿಕೆ ತಡೆಯಲು ಪೊಲೀಸರು, ಚುನಾವಣಾಧಿಕಾರಿಗಳು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ.
ಬಹಿರಂಗ ಪ್ರಚಾರದ ಅವಧಿ ಮುಕ್ತಾಯವಾಗುವ ಮುನ್ನವೇ ಕ್ಷೇತ್ರಕ್ಕೆ ಸಂಬಂಧಪಟ್ಟವರನ್ನು ಬಿಟ್ಟು ಉಳಿದವರಿಗೆ ಕ್ಷೇತ್ರದಿಂದ ಹೊರಗುಳಿಯಲು ಸೂಚನೆ ನೀಡಲಾಗಿದೆ. ಹೊರಗಿನ ಯಾವುದೇ ಪ್ರಭಾವಿಗಳು ಕ್ಷೇತ್ರದಲ್ಲಿ ಕಂಡರೆ ಕಠಿಣ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಚುನಾವಣಾಧಿಕಾರಿಗಳ ಸಿದ್ಧತೆ
ಈ ಬಾರಿ ಚುನಾವಣೆಯನ್ನು ಗೊಂದಲ ಇಲ್ಲದಂತೆ ಯಶಸ್ವಿಯಾಗಿ ನಡೆಸಲು ಚುನಾವಣಾಧಿಕಾರಿಗಳು ಸಿದ್ಧತೆ ಆರಂಭಿಸಿದ್ದಾರೆ. ಮತದಾನ ಬಗ್ಗೆ ಜಾಗೃತಿ ಮೂಡಿಸಲು ಚುನಾವಣಾ ಆಯೋಗ ಹಲವು ಕ್ರಮಗಳನ್ನು ಕೈಗೊಂಡಿದೆ. ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಳ್ಳಿ ಹಳ್ಳಿಗಳಲ್ಲಿ ಚುನಾವಣಾಧಿಕಾರಿಗಳು ಶ್ರಮಿಸುತ್ತಿದ್ದಾರೆ.
ಕರ್ನಾಟಕದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಮೇ 13ರಂದು ಫಲಿತಾಂಶ ಹೊರಬೀಳಲಿದೆ.












Click it and Unblock the Notifications