ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯಕ್ಕೆ ಅನುಕೂಲ: ಹೆಚ್.ಡಿ. ಕುಮಾರಸ್ವಾಮಿ
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, 123 ಸ್ಥಾನಗಳಲ್ಲಿ ಜೆಡಿಎಸ್ ಖಚಿತವಾಗಿ ಗೆಲುವು ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ರಾಯಚೂರು, ಜನವರಿ28: ಬಿಜೆಪಿಯ ರಾಷ್ಟ್ರೀಯ ನಾಯಕರಿಂದ ರಾಜ್ಯಕ್ಕೆ ವಿಶೇಷ ಯೋಜನೆಗಳು ದೊರೆಯದು. ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯಕ್ಕೆ ಅನುಕೂಲವಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ರಾಯಚೂರು ಜಿಲ್ಲೆಯ ಮಿಟ್ಟಿಮಲ್ಕಾಪುರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಿರೋಧ ಪಕ್ಷದ ಸಿದ್ದರಾಮಯ್ಯಗೆ ಇದು ನಿಜವಾಗಲೂ ಕಡೆಯ ಚುನಾವಣೆ ಆಗಲಿದೆ. ಕೋಲಾರದಲ್ಲಿ ಅವರ ಸೋಲು ನಿಶ್ಚಿತ. ಮುಂದೆ ಅವರು ರಾಜಕೀಯದಿಂದ ದೂರವುಳಿಯಲೇಬೇಕಲ್ಲ ಎಂದ ಹೇಳಿದರು.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದ್ದು, 123 ಸ್ಥಾನಗಳಲ್ಲಿ ಖಚಿತವಾಗಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇನ್ನೂ ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದೆ. ಇಂಥ ಸಂದರ್ಭದಲ್ಲಿ ಬಿಜೆಪಿಯನ್ನು ರಾಷ್ಟ್ರಮಟ್ಟದಲ್ಲಿ ಎದುರಿಸಲು ಜೆಡಿಎಸ್ ಸಿದ್ಧತೆ ನಡೆಸಿದೆ. ವಿವಿಧ ರಾಜ್ಯಗಳಲ್ಲಿರುವ ಸಮಾನ ಮನಸ್ಕರ ಪಕ್ಷಗಳೊಂದಿಗೆ ರಣತಂತ್ರ ಸಿದ್ಧಪಡಿಸುತ್ತಿದ್ದು, ರಾಜ್ಯ ವಿಧಾನಸಭೆ ಚುನಾವಣೆ ನಂತರ ರಾಷ್ಟ್ರೀಯ ಮಟ್ಟದಲ್ಲಿ ಜನತಾ ಪರಿವಾರವನ್ನು ಕಟ್ಟಿ ಬೆಳೆಸುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಅಲ್ಲದೇ ಪ್ರತಿ ಬಾರಿಯೂ ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ಟೀಕೆ ಮಾಡುವುದೇ ಕೆಲಸವಾಗಿದೆ. ಜೆಡಿಎಸ್ ಗೆ ಟೀಕೆ ಮಾಡುವುದರಿಂದ ಆ ಪಕ್ಷ ಗೆಲ್ಲಲು ಆಗದು. ಪ್ರಣಾಳಿಕೆ ಬಗ್ಗೆ ಜನತೆಗೆ ತಿಳಿಸಿಕೊಡುವ ಕೆಲಸ ಮಾಡಿ ಎಂದು ಕುಮಾರಸ್ವಾಮಿ ಹೇಳಿದರು.
ಬಿಜೆಪಿಯ ರಾಷ್ಟ್ರೀಯ ನಾಯಕರು ಯಾವುದೇ ಯೋಜನೆ ರಾಜ್ಯಕ್ಕೆ ನೀಡಲು ಬರುವುದಿಲ್ಲ. ಕಾರ್ಪೋರೇಟ್ ಕಂಪನಿಗಳು ಬೃಹತ್ ಶಿಕ್ಷಣ ಸಂಸ್ಥೆಗಳ ಕಾರ್ಯಕ್ರಮಕ್ಕಾಗಿ ಬರುತ್ತಾರೆ. ಅವರಿಗೆ ಬಡವರ ಪರ ಚಿಂತನೆಯಿಲ್ಲ ಎಂದು ಬಿಜೆಪಿ ವಿರುದ್ದ ಕಿಡಿಕಾರಿದರು.

ಮಹಾದಾಯಿ ಯೋಜನೆ ಅನುಷ್ಟಾನ ಮಾಡ್ತೇವೆ ಎಂದು ಹೇಳಿದ್ದ ಬಿಜೆಪಿ ಈಗ ಮೌನವಾಗಿದೆ. ಗೋವಾ ಸರಕಾರ ಈ ಯೋಜನೆ ವಿರುದ್ಧ ಸುಪ್ರೀಂ ಕೋರ್ಟಿಗೆ ಹೋಗಿದೆ. ಅರಣ್ಯ ಇಲಾಖೆ ಈ ಯೋಜನೆ ಜಾರಿ ವಿರುದ್ಧ ಸರಕಾರಕ್ಕೆ ನೊಟೀಸ್ ನೀಡಿದೆ. ಬಿಜೆಪಿ ಮಹಾದಾಯಿ ಟೆಂಡರ್ ಕರೀತೇವೆಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದೆ ಎಂದ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಪ್ರಧಾನಿಯಾಗಿ ದೇವೇಗೌಡರು ಜನ ಮನ ಗೆಲ್ಲಲಿಲ್ಲ; ಡಿ. ಕೆ ಶಿವಕುಮಾರ್ ಹೇಳಿಕೆ ಗೆ ಜೆಡಿಎಸ್ ತಿರುಗೇಟು
ಇಡೀ ದೇಶದಲ್ಲಿ ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ಇಂದು ಶೋಚನಿಯ ಸ್ಥಿತಿಗೆ ಏಕೆ ಇಳಿದಿದೆ? ಜನರ ಮನಸ್ಸು ಗೆಲ್ಲಲಿಲ್ಲವೊ?ಅಥವಾ ಜನರು ತಮ್ಮ ಮನಸ್ಸನ್ನು ನಿಮ್ಮಂತಹ ದ್ರೋಹಿಗಳಿಗೆ ಸ್ಥಾನವನ್ನೇ ಕೊಡಲಿಲ್ಲವೊ ಎಂದು ಜೆಡಿಎಸ್ ರಾಜ್ಯ ಘಟಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಕೆಂಡಾಮಂಡಲವಾಗಿದೆ.
ಶಿವಕುಮಾರ್ ಅವರೆ, ಅಧಿಕಾರದ ಮದದಿಂದಾಗಿ ಬಾಯಿಗೆ ಬಂದಂತೆ ಮಾತನಾಡುವ ಕೆಟ್ಟ ಚಾಳಿ ಬಂದಿರಬೇಕು ನಿಮಗೆ. ದೇವೇಗೌಡರು ಹನ್ನೊಂದು ತಿಂಗಳ ಕಾಲ ಪ್ರಧಾನಿಯಾಗಿ ಏನೆಲ್ಲ ಕೆಲಸ ಮಾಡಿದರು, ಕರ್ನಾಟಕದ ಏಳ್ಗೆಗೆ ಯಾವೆಲ್ಲ ಕೊಡುಗೆ ನೀಡಿದರು ಎಂಬ ಸತ್ಯ ಕನ್ನಡಿಗರಿಗೆ ಗೊತ್ತಿದೆ. ನಿಮ್ಮ ಹಳಹಳಿಕೆಗೆ ಜನ ಮರುಳಾಗುವುದಿಲ್ಲ ಎಂದು ಕಿಡಿಕಾರಿದ್ದರೆ.
ಈ ರೀತಿಯ ಉಡಾಫೆ ಹೇಳಿಕೆ ನೀಡಿದವರಲ್ಲಿ ನೀವು ಮೊದಲೂ ಅಲ್ಲ, ಕೊನೆಯವರೂ ಆಗುವುದಿಲ್ಲ. ಚುನಾವಣೆಯಲ್ಲಿ ಮತ ಪಡೆಯಲು ಇಂತಹ ಕೀಳು ಮಟ್ಟದ ತಂತ್ರಗಳನ್ನು ಬಳಸಿದರೆ ಕನ್ನಡಿಗರು ನಂಬುವುದಿಲ್ಲ. ದೇವೇಗೌಡರು, ಹಲವು ನೋವುಗಳನ್ನುಂಡು ವಿಷಕಂಠನಾಗಿ, ಈಗಲೂ ನಾಡು-ನುಡಿಗೆ ಕಟಿಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಪ್ರಧಾನಿ ಸ್ಥಾನದಿಂದ ಅವರನ್ನು ಹೇಗೆ ಇಳಿಸಲಾಯಿತು ಎಂಬುದು ಜಗಜ್ಜಾಹಿರಾಗಿರುವ ಸತ್ಯ. ಆ ಬಗ್ಗೆ ಮತ್ತೆ ಈಗ ಭ್ರಮಾತ್ಮಕ ಸುಳ್ಳುಗಳನ್ನು ಹೇಳಿದರೆ ಅದು ನಿಮಗೇ ತಿರುಗುಬಾಣವಾಗಲಿದೆ. ಜನರು ನಿಮ್ಮನ್ನು ಉದಾಸೀನವಾಗಿ ಪರಿಗಣಿಸುವ ಮುನ್ನ, ನಡೆ-ನುಡಿ ಬದಲಿಸಿಕೊಳ್ಳಿ. ಇಲ್ಲವಾದರೆ ಜನರು ನಿಮ್ಮನ್ನು ತಿರಸ್ಕರಿಸುತ್ತಾರಷ್ಟ ಎಂದು ಜೆಡಿಎಸ್ ಹೇಳಿದೆ.












Click it and Unblock the Notifications