ಈರುಳ್ಳಿ ದರ ಏರಿಕೆ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 04 : ದೇಶದ ವಿವಿಧ ನಗರಗಳಲ್ಲಿ ಈರುಳ್ಳಿ ದರ ಶತಕ ಬಾರಿಸಿದೆ. ಮುಂದಿನ ದಿನಗಳಲ್ಲಿ ಕೆ.ಜಿ. ಈರುಳ್ಳಿ ದರ 150ರ ಗಡಿ ದಾಟಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈರುಳ್ಳಿ ದರ ಏರಿಕೆಗೆ ಕಾರಣ ಯಾರು? ಎಂಬುದು ಇನ್ನೂ ಬಹಿರಂಗವಾಗಿಲ್ಲ.
ಕರ್ನಾಟಕದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಈರುಳ್ಳಿ ದರದ ಬಗ್ಗೆ ಬುಧವಾರ ಸಾಲು-ಸಾಲು ಟ್ವೀಟ್ ಮಾಡಿದ್ದಾರೆ. "ಅಧಿಕಾರದಲ್ಲಿರುವವರ ಅಸಾಮರ್ಥ್ಯಕ್ಕೆ ಜನ ಕಣ್ಣೀರು ಸುರಿಸುವಂತಾಗಿದೆ" ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.
ತಮ್ಮ ಟ್ವೀಟ್ನಲ್ಲಿ ಸಿದ್ದರಾಮಯ್ಯ ಕರ್ನಾಟಕದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಎರಡೂ ಸರ್ಕಾರಗಳ ವೈಫಲ್ಯದಿಂದಾಗಿಯೇ ಬೆಲೆ ಏರಿಕೆ ಬಿಸಿಯಿಂದ ಜನ ಬೇಯುವಂತಾಗಿದೆ" ಎಂದು ಟ್ವೀಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. "ಈರುಳ್ಳಿ ಆಮದಿಗೆ ಕೇಂದ್ರ ತಕ್ಷಣ ಮುಂದಾಗಬೇಕಿತ್ತು" ಎಂದು ಸಲಹೆಯನ್ನು ನೀಡಿದ್ದಾರೆ.

#OnionTears ಹ್ಯಾಷ್ ಟ್ಯಾಗ್
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡುವಾಗ #OnionTears ಮತ್ತು #OnionPriceRise ಎಂಬ ಹ್ಯಾಷ್ ಟ್ಯಾಗ್ ಬಳಕೆ ಮಾಡಿದ್ದಾರೆ. "ಕಾಳಸಂತೆಕೋರರ ಅಕ್ರಮದಾಸ್ತಾನು ವಿರುದ್ದ ರಾಜ್ಯಸರ್ಕಾರ ಕ್ರಮಕೈಗೊಳಬೇಕಾಗಿತ್ತು" ಎಂದು ಹೇಳಿದ್ದಾರೆ.

ಈರುಳ್ಳಿ ಬೆಲೆ ಏರಿಕೆ
"ಈರುಳ್ಳಿ ಬೆಲೆ ಏರಿಕೆಗೆ ಅತೀವೃಷ್ಟಿ ಕಾರಣವಿರಬಹುದು, ಆದರೆ ಇಂತಹ ಸಮಸ್ಯೆಯನ್ನು ನಿರೀಕ್ಷಿಸಿ ಬಳಕೆದಾರರ ಹಿತರಕ್ಷಣೆಗೆ ಕ್ರಮಕೈಗೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಅಧಿಕಾರದಲ್ಲಿರುವವರ ಅಸಾಮರ್ಥ್ಯಕ್ಕೆ ಜನ ಕಣ್ಣೀರು ಸುರಿಸುವಂತಾಗಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಕ್ರಮಕೈಗೊಳಬೇಕಾಗಿತ್ತು
"ಆಂತರಿಕ ಬಳಕೆಗೆ ಅಗತ್ಯವಿದ್ದಷ್ಟು ಈರುಳ್ಳಿ ಆಮದಿಗೆ ಕೇಂದ್ರ ತಕ್ಷಣ ಮುಂದಾಗಬೇಕಿತ್ತು. ಕಾಳಸಂತೆಕೋರರ ಅಕ್ರಮದಾಸ್ತಾನು ವಿರುದ್ದ ರಾಜ್ಯಸರ್ಕಾರ ಕ್ರಮಕೈಗೊಳಬೇಕಾಗಿತ್ತು. ಎರಡೂ ಸರ್ಕಾರಗಳ ವೈಫಲ್ಯದಿಂದಾಗಿಯೇ ಬೆಲೆಏರಿಕೆ ಬಿಸಿಯಿಂದ ಜನ ಬೇಯುವಂತಾಗಿದೆ" ಎಂದು ಸಿದ್ದರಾಮಯ್ಯ ಟ್ವೀಟ್ನಲ್ಲಿ ಹೇಳಿದ್ದಾರೆ.

ಪ್ರವಾಹದಿಂದಾಗಿ ಬೆಲೆ ಏರಿಕೆ?
ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿತ್ತು. ಇದರಿಂದಾಗಿ ಬೆಳೆ ನಷ್ಟವಾಗಿ ಬೆಲೆ ಹೆಚ್ಚಳವಾಗಿದೆ ಎಂದು ಅಂದಾಜಿಸಲಾಗುತ್ತಿದೆ. ನವೆಂಬರ್ ಮೊದಲ ವಾರದಿಂದ ಈರುಳ್ಳಿ ಬೆಲೆ ಏರಿಕೆಯಾಗುತ್ತಲೇ ಇತ್ತು. ಈಗ ಅದು 100 ರ ಗಡಿ ದಾಟಿದೆ.












Click it and Unblock the Notifications