ತ್ರಿವರ್ಣ ಧ್ವಜವೇ ಏಕೈಕ ಧ್ವಜ – ಕನ್ನಡ ಬಾವುಟಕ್ಕೆ ಗೃಹ ಇಲಾಖೆ ಅಪಸ್ವರ
ನವದೆಹಲಿ, ಜುಲೈ 19: ಕರ್ನಾಟಕ ಸರಕಾರದ ಪ್ರತ್ಯೇಕ ಧ್ವಜ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದ್ದು, "ರಾಜ್ಯಗಳಿಗೆ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ಅವಕಾಶವಿಲ್ಲ. ಭಾರತಕ್ಕಿರುವುದು ತ್ರಿವರ್ಣ ಧ್ವಜ ಮಾತ್ರ ," ಅಂತ ಸ್ಪಷ್ಟಪಡಿಸಿದೆ.
"ನಮ್ಮದು ಒಂದು ದೇಶ ಒಂದು ಧ್ವಜ. ಕಾನೂನಾತ್ಮಕವಾಗಿ ರಾಜ್ಯಗಳಿಗೆ ಪ್ರತ್ಯೇಕ ಧ್ವಜ ನೀಡಲು ಅವಕಾಶವೂ ಇಲ್ಲ, ನಿರ್ಬಂಧವೂ ಇಲ್ಲ," ಎಂದು ಗೃಹ ಇಲಾಖೆ ವಕ್ತಾರರು ಹೇಳಿದ್ದಾರೆ.

ಇನ್ನು 'ಕರ್ನಾಟಕಕ್ಕೆ ಈಗಾಗಲೇ ಧ್ವಜವಿದೆ. ಆದರೆ ಅದು ಜನರನ್ನು ಪ್ರತಿನಿಧಿಸುತ್ತದೆಯೇ ಹೊರತು ಸರಕಾರವನ್ನಲ್ಲ,' ಎಂದು ಗೃಹ ಇಲಾಖೆ ಹೇಳಿದೆ. ಈ ಧ್ವಜವನ್ನು ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯ ದಿನದಂದು ಬಳಕೆ ಮಾಡುತ್ತಿಲ್ಲ. ರಾಜ್ಯ ರಚನೆ ದಿನದಂಥ ಸಂದರ್ಭದಲ್ಲಿ ಮಾತ್ರ ಬಳಸಲಾಗುತ್ತದೆ ಎಂದು ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಕರ್ನಾಟಕ ಧ್ವಜ ವಿನ್ಯಾಸಕ್ಕೆ 9 ಜನ ತಜ್ಞರ ಸಮಿತಿ ರಚನೆ ಮಾಡಿದೆ. ಒಂದೊಮ್ಮೆ ಧ್ವಜ ಹೊಂದಿದ್ದೇ ಆದಲ್ಲಿ ಪ್ರತ್ಯೇಕ ಬಾವುಟ ಹೊಂದಿದ ದೇಶದ ಎರಡನೇ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಳ್ಳಲಿದೆ.
ಸಂವಿದಾನದ 370ನೇ ವಿಧಿ ಅನ್ವಯ ವಿಶೇಷ ಸ್ಥಾನಮಾನ ಪಡೆದಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯ ಮಾತ್ರ ಇಲ್ಲಿಯವರೆಗೆ ಪ್ರತ್ಯೇಕ ಬಾವುಟವನ್ನು ಹೊಂದಿದೆ.












Click it and Unblock the Notifications