ಗೌರಿ ಲಂಕೇಶ್ ಹತ್ಯೆ: ಪುಣೆಯಲ್ಲಿ ಮತ್ತೊಂದು ಬೈಕ್ ಪತ್ತೆ
ಬೆಂಗಳೂರು, ಆಗಸ್ಟ್ 28: ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಗೆ ಹಂತಕರು ಬಳಸಿದ್ದರು ಎನ್ನಲಾದ ಮತ್ತೊಂದು ಬೈಕ್ ಪುಣೆಯಲ್ಲಿ ಪತ್ತೆಯಾಗಿದೆ.
ವಿಚಾರವಾದಿ ನರೇಂದ್ರ ದಾಭೋಕ್ಕರ್ ಅವರ ಹತ್ಯೆ ಪ್ರಕರಣದಲ್ಲಿ ಎಟಿಎಸ್ ವಶದಲ್ಲಿರುವ ಶರದ್ ಕಳಾಸ್ಕರ್ ತನ್ನ ಪಲ್ಸರ್ ಬೈಕ್ ಬಗ್ಗೆ ಬಾಯಿಬಿಟ್ಟಿದ್ದ ಎನ್ನಲಾಗಿದೆ. ಅದನ್ನು ಎಟಿಎಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ಕುರಿತು ಎಟಿಎಸ್, ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿಗೆ ಮಾಹಿತಿ ನೀಡಿದ್ದಾರೆ. ಬೈಕ್ಅನ್ನು ವಶಕ್ಕೆ ತೆಗೆದುಕೊಳ್ಳಲು ಎಸ್ಐಟಿ ಅಧಿಕಾರಿಗಳು ಪುಣೆಗೆ ಧಾವಿಸುತ್ತಿದ್ದಾರೆ.
ಗೌರಿ ಹತ್ಯೆ ಪ್ರಕರಣದಲ್ಲಿ ಹಂತಕರಿಗೆ ಆಶ್ರಯ ನೀಡಿದ್ದ, ಬೈಕ್ ಕೊಟ್ಟ ಆರೋಪ ಎದುರಿಸುತ್ತಿರುವ ಸಿವಿಲ್ ಗುತ್ತಿಗೆದಾರ ಕುಣಿಗಲ್ ಸುರೇಶ್ನಿಂದ ಎರಡು ಬೈಕ್ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಈ ಬೈಕ್ಗಳನ್ನು ಗೌರಿ ಹತ್ಯೆಗೆ ಮುನ್ನ ಅದಕ್ಕೆ ಸಂಚು ರೂಪಿಸುವ ಓಡಾಟಕ್ಕೆ ಬಳಸಲಾಗಿತ್ತು.

ನರೇಂದ್ರ ದಾಭೋಲ್ಕರ್ ಹತ್ಯೆಗೆ ಬಳಸಿದ್ದ ಬೈಕ್ಅನ್ನೇ ಗೌರಿ ಹತ್ಯೆಗೆ ಕೂಡ ಬಳಸಲಾಗಿದೆ ಎಂಬ ಸುಳಿವು ಸಿಕ್ಕಿದೆ.
ಗೌರಿ ಅವರ ಮನೆ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಬೈಕೊಂದರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಎಸ್ಐಟಿ, ಮಹಾರಾಷ್ಟ್ರ ಪೊಲೀಸರಿಗೆ ಅದರ ಕುರಿತು ಮಾಹಿತಿ ಹಂಚಿಕೊಂಡಿದ್ದರು. ಆ ಬೈಕ್ ಕಳಾಸ್ಕರ್ಗೆ ಸೇರಿದ್ದು ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪರುಶುರಾಮ ವಾಘ್ಮೋರೆ, ಅಮೋಲ್ ಕಾಳೆ, ಅಮಿತ್ ದೇಗ್ವೇಕರ್, ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ, ಮನೋಹರ್ ಯಡವೆ, ಕೆ.ಟಿ. ನವೀನ್ ಕುಮಾರ್, ಮೋಹನ್ ನಾಯಕ್ ಅವರನ್ನು ಸಿಐಡಿ ಪೊಲೀಸರು ಸೋಮವಾರ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ.












Click it and Unblock the Notifications