ಅಕ್ಟೋಬರ್ ನಿಂದ ಬಡವರಿಗೆ ಸಕ್ಕರೆ ಭಾಗ್ಯ

ಬೆಂಗಳೂರಿನಲ್ಲಿ ಈ ಕುರಿತು ಮಾಹಿತಿ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್, ರಾಜ್ಯದ ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಟೋಬರ್ ತಿಂಗಳಿನಿಂದ ರಿಯಾಯಿತಿ ದರದಲ್ಲಿ ಒಂದು ಕೆ.ಜಿ. ಸಕ್ಕರೆ ನೀಡಲಾಗುವುದು ಎಂದರು.
ಒಂದು ಕೋಟಿಗೂ ಅಧಿಕ ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ ವಿತರಿಸಲು ವಾರ್ಷಿಕವಾಗಿ 1.10 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಸಹಕಾರಿ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಖರೀದಿ ಮಾಡಿ ವಿತರಣೆ ಮಾಡಲಾಗುತ್ತದೆ ಎಂದರು.
ಸಕ್ಕರೆ ಕಾರ್ಖಾನೆಗಳ ಮೂಲಕ ಸರ್ಕಾರ ಕೆ.ಜಿ. ಸಕ್ಕರೆಯನ್ನು 30.75 ರೂ. ದರದಲ್ಲಿ ಖರೀದಿಸಲಿದೆ. ನಂತರ ಅದನ್ನು ಬಿಪಿಎಲ್ ಕಾರ್ಡ್ ಹೊಂದಿರುವ ಜನರಿಗೆ 13.50 ರೂ. ದರದಲ್ಲಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.
ಬೊಕ್ಕಸಕ್ಕೆ ಹೊರೆಯಿಲ್ಲ : ಸಕ್ಕರೆಯನ್ನು ಹೆಚ್ಚಿನ ಹಣ ನೀಡಿ ಖರೀದಿಸಿ, ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದರಿಂದ ರಾಜ್ಯ ಸರ್ಕಾರಕ್ಕೆ ಹೊರೆ ಆಗುವುದಿಲ್ಲ. ಕೇಂದ್ರ ಸರ್ಕಾರ 1.08 ಲಕ್ಷ ಮೆಟ್ರಿಕ್ ಟನ್ ಸಕ್ಕರೆಗೆ ಪ್ರತಿ ಕೆ.ಜಿ.ಗೆ 18.50 ರೂ. ಸಬ್ಸಿಡಿ ನೀಡುತ್ತಿದೆ.
ಆದ್ದರಿಂದ, 30 ರೂ.ಗೆ ಸಕ್ಕರೆ ಖರೀದಿಸಿ, 13 ರೂ.ಗೆ ನೀಡುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಯಾವುದೇ ರೀತಿಯ ಹೊರೆ ಬೀಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಹೊಸದಾಗಿ ಅರ್ಜಿ ಸಲ್ಲಿಸಿರುವ 30 ಲಕ್ಷ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ವಿತರಣೆಯಾದರೆ ಆಗ ಒಂದಷ್ಟು ಹೊರೆ ಉಂಟಾಗಬಹುದು ಎಂದರು.
ಶೀಘ್ರ ಸಕ್ಕರೆ ಖರೀದಿ : ಯೋಜನೆ ಮೂಲಕ ವಿತರಿಸಲು 1.10 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಅಗತ್ಯವಿದ್ದು, ಭದ್ರಾವತಿ ಮತ್ತು ಮೈಷುಗರ್ ಕಾರ್ಖಾನೆಗಳಿಂದ 50 ಸಾವಿರ ಮೆಟ್ರಿಕ್ ಟನ್ ದೊರೆಯಲಿದೆ ಎಂದು ಹೇಳಿದರು.
ಉಳಿದ ದಾಸ್ತಾನನ್ನು ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಲಾಗುವುದು. ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಖರೀದಿಸುವುದು ಸಚಿವ ಸಂಪುಟದ ಉಪ ಸಮಿತಿಯ ನಿರ್ಧಾರ. ಇದಕ್ಕೆ ಸಚಿವ ಸಭೆಯ ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.












Click it and Unblock the Notifications