ಆರೋಪಪಟ್ಟಿ ಸಲ್ಲಿಕೆ ನಂತರ ವಿಚಾರಣಾ ಪೂರ್ವ ಶಿಕ್ಷೆ ಸಲ್ಲದು- ಹೈಕೋರ್ಟ್
ಬೆಂಗಳೂರು ಜುಲೈ.12: ಅಪರಾಧ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ ನಂತರವೂ ಆರೋಪಿಯನ್ನು ಬಂಧನದಲ್ಲಿಟ್ಟು ವಿಚಾರಣೆ ಮುಂದುವರಿಸುವುದು ವಿಚಾರಣಾ ಪೂರ್ವ ಶಿಕ್ಷೆ ಆಗುತ್ತದೆ. ಹೀಗೆಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜೊತೆಗೆ, ಅರ್ಜಿದಾರನಿಗೆ ಷರತ್ತು ಬದ್ಧ ಮಂಜೂರು ಮಾಡಿ ಆದೇಶಿಸಿದೆ.
ಜೋಡಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಚಿಕ್ಕಮಗಳೂರಿನ ಆರೋಪಿ ಎಂ.ಬಿ.ಸಂತೋಷ್, ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಂಧನದಲ್ಲಿಡಲು ಕಾರಣಗಳಿಲ್ಲ: ಪ್ರಕರಣದಲ್ಲಿ ತನಿಖಾಧಿಕಾರಿಗಳು ವಿಚಾರಣಾ ನ್ಯಾಯಾಲಯಕ್ಕೆ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಷನ್ನ ಮೊದಲರೆಡು ಸಾಕ್ಷಿಗಳನ್ನು ಈಗಾಗಲೇ ಪರೀಕ್ಷಿಸಲಾಗಿದೆ. ಪ್ರತ್ಯಕ್ಷ ದರ್ಶಿಯಾದ ಎರಡನೇ ಸಾಕ್ಷಿಯು (ಆರೋಪಿಯ ತಾಯಿ) ತನಿಖಾಧಿಕಾರಿ ಮತ್ತು ವಿಚಾರಣಾ ನ್ಯಾಯಾಲಯ ಹೇಳಿಕೆ ದಾಖಲಿಸಿದ್ದಾರೆ.
ಈ ಎರಡು ಸಂದರ್ಭದಲ್ಲಿ ವಿಭಿನ್ನವಾಗಿ ಹೇಳಿಕೆ ನೀಡಿದ್ದಾರೆ. ಈ ಸಾಕ್ಷಿ ಬಿಟ್ಟು ಮತ್ಯಾರು ಪ್ರತ್ಯಕ್ಷ ದರ್ಶಿ ಇಲ್ಲ. ಇಂತಹ ಸಂದರ್ಭದಲ್ಲಿ ಗಂಭೀರ ಅಪರಾಧಗಳ ಆರೋಪವಿದ್ದರೂ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸುವುದಕ್ಕೆ ಸಕಾರಣಗಳು ಕಂಡು ಬರುತ್ತಿಲ್ಲ. ಆತನನ್ನು ಬಂಧನದಲ್ಲಿ ಮುಂದುವರಿಸುವುದು ವಿಚಾರಣಾ ಪೂರ್ವ ಶಿಕ್ಷೆ ಎನಿಸಿಕೊಳ್ಳುತ್ತದೆ. ಹಾಗಾಗಿ, ಷರತ್ತುಗಳೊಂದಿಗೆ ಜಾಮೀನು ಪಡೆಯಲು ಆರೋಪಿ ಅರ್ಹನಾಗಿದ್ದಾನೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ ಏನು...?
ಸಂತೋಷ್ ಅವರಿಗೆ ಸಂಬಂಧಿಸಿದ ಮೂಡಿಗೆರೆ ತಾಲ್ಲೂಕು ಬಣಕಲ್ ಗ್ರಾಮದಲ್ಲಿದ್ದ ಕೃಷಿ ಜಮೀನನ್ನು ಕಾರ್ತೀಕ್ ಎಂಬಾತ ಮಧ್ಯವರ್ತಿಯಾಗಿ ಮಾರಾಟ ಮಾಡಿಸಿದ್ದ. ಮಾರಾಟದ ನಂತರ ತನಗೆ ಬರಬೇಕಾದ ಲಾಭದ ಹಣಕ್ಕೆ ಕಾರ್ತಿಕ್ ಮೋಸ ಮಾಡಿದ್ದಾರೆ ಎಂದು ಸಂತೋಷ್ ತಗಾದೆ ತೆಗೆದಿದ್ದ. ಇದೇ ಕಾರಣಕ್ಕೆ 2023ರ ಆ.13ರಂದು ಮಾತುಕತೆ ನಡೆಸಲು ಕಾರ್ತಿಕ್ ನನ್ನು ಸಂತೋಷ್ ತನ್ನ ಮನೆಗೆ ಕರೆಸಿಕೊಂಡಿದ್ದರು. ಮಾತುಕತೆ ನಡೆವೆ ಇಬ್ಬರ ನಡುವೆ ಗಲಾಟೆ ನಡೆದಿತ್ತು.
ಕಾರ್ತಿಕ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದ ಸಂತೋಷ್, ಗಲಾಟೆ ತಡೆಯಲು ಮುಂದಾದ ತನ್ನ ತಂದೆ ಭಾಸ್ಕರ್ ಗೌಡ ಮತ್ತು ತಾಯಿ ಮೇಲೂ ಹಲ್ಲೆ ಮಾಡಿದ್ದ. ಘಟನೆಯಲ್ಲಿ ಕಾರ್ತಿಕ್ ಸ್ಥಳದಲ್ಲಿ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯೆ ಭಾಸ್ಕರ ಗೌಡ ಸಾವನ್ನಪ್ಪಿದ್ದರು.
ಇದರಿಂದ ಕಾರ್ತಿಕ್ ಪತ್ನಿ ಶಾಂಭವಿ ಚಿಕ್ಕಮಗಳೂರಿನ ಬಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೊಲೆ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಅರ್ಜಿದಾರರನ್ನು ಬಂಧಿಸಿದ್ದರು ಪೊಲೀಸರು, ತನಿಖೆ ಪೂರ್ಣಗೊಳಿಸಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಜಾಮೀನು ಕೋರಿ ಸಂತೋಷ್ ಸಲ್ಲಿಸಿದ್ದ ಅರ್ಜಿಯನ್ನು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ಹಾಗಾಗಿ, ಆರೋಪಿ ಹೈಕೋರ್ಟ್ ಮೊರೆ ಹೋಗಿದ್ದನು.












Click it and Unblock the Notifications