'ಹೆಲಿಕಾಪ್ಟರಿನಲ್ಲಿ ಮೆರೆಯುತ್ತಿದ್ದ ನನಗೆ ಇಂಥಾ ದುರ್ಗತಿಯಾ?
ಬೆಂಗಳೂರು, ಸೆ. 26: 'ಬಳ್ಳಾರಿ ಗಣಿಗಾರಿಕೆ ಅಕ್ರಮಕ್ಕೆ ಜನಾರ್ದನ ರೆಡ್ಡಿಯೇ ಪ್ರಧಾನ ಸೂತ್ರಧಾರ' ಎಂದು ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ಸಮ್ಮುಖದಲ್ಲಿ ರೆಡ್ಡಿ ಸೋದರಳಿಯ ಸುರೇಶ್ ಬಾಬು ಆದಿಯಾಗಿ ಸಿಬಿಐ ಮುಂದೆ ಪ್ರಮಾಣ ಮಾಡಿ ಹೇಳುತ್ತಿರಬೇಕಾದರೆ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಸ್ತುತ ಬೆಂಗಳೂರು ಸಿಬಿಐ ಬಂಧನದಲ್ಲಿರುವ ಜನಾರ್ದನ ರೆಡ್ಡಿಯ ಅತ್ಯಾಪ್ತ ಶಿಷ್ಯ ಅಲಿ ಖಾನ್ ರಂಪರಾಮಾಯಣ ಮಾಡಿ, ರೆಡ್ಡಿ 'ವರ್ಚಸ್ಸಿಗೆ' ಮತ್ತಷ್ಟು ಮಸಿ ಬಳಿದಿದ್ದಾನೆ.
'ಹೆಲಿಕಾಪ್ಟರ್ನಲ್ಲಿ ಹೋಗಿ ಉಪ್ಪಿಟ್ಟು ತಿನ್ನುತ್ತಿದ್ದೆ, ನನಗಿಂಥಾ ದುರ್ಗತಿಯಾ?' ಎಂದು ಕೂಗಾಡುತ್ತಾ ಬಟ್ಟೆ ಹರಿದುಕೊಂಡು ಪೊಲೀಸ್ ಜೀಪ್ ಗಾಜಿಗೆ ಹಣೆ ಚಚ್ಚಿಕೊಂಡು ಆಟವಾಡಿದ K Mehfuz Ali Khan ಎಂಬ ನಾಮಧೇಯದ ವಿಚಾರಣಾಧೀನ ಕೈದಿಯನ್ನು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಅವರು ಅರ್ಧ ಗಂಟೆಗೂ ಹೆಚ್ಚು ಕಾಲ ಸರಿಯಾಗಿ ವಿಚಾರಿಸಿಕೊಂಡಿದ್ದಾರೆ.
ಬುಧವಾರ ಕೋರ್ಟ್ ಆವರಣದಲ್ಲಿ ನಡೆದ ನಾಟಕೀಯ 'ಕೋರ್ಟ್ ಪ್ರೊಸೀಡಿಂಗ್ಸ್' ಹೀಗಿತ್ತು:

ನ್ಯಾಯಾಧೀಶರು ಗದರಿಕೊಂಡಿದ್ದು ಹೀಗೆ:
'ಒಂದು ಕಾಲದಲ್ಲಿ ನೀನು ಹೆಲಿಕಾಪ್ಟರ್ನಲ್ಲೆ ಓಡಾಡಿರಬಹುದು. ಆಕಾಶದಲ್ಲೇ ಹಾರಾಡಿರಬಹುದು. ಆದರೆ ಈಗ ವಿಚಾರಣಾಧೀನ ಕೈದಿ. ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು'.
'ನಿನ್ನ ಕಿತಾಪತಿ ನ್ಯಾಯಾಲಯದ ಮುಂದೆ ನಡೆಯುವುದಿಲ್ಲ. ಈತ ಜೀಪ್ ಹತ್ತುವುದಿಲ್ಲ ಎಂದಾದರೆ ಹಗ್ಗದಿಂದ ಕಟ್ಟಿ ಹಾಕಿ ಬಿಎಂಟಿಸಿ ಬಸ್ನಲ್ಲಿ ಕರೆದುಕೊಂಡು ಹೋಗಿ. ಮಾಧ್ಯಮಗಳ ಮೂಲಕ ಈತನ ಬಂಡವಾಳ ಜನರಿಗೆ ಗೊತ್ತಾಗಲಿ'.

ಅಲಿ ಖಾನನನ್ನು ಕೋರ್ಟಿಗೆ ಯಾಕೆ ಕರೆತರಲಾಗಿತ್ತು?
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ ಸಂಬಂಧ ಐಎಲ್ಸಿ ಕಂಪನಿಗೆ ಅಕ್ರಮವಾಗಿ ಅದಿರು ಸಾಗಾಟ ಮಾಡಿದ ಆರೋಪ ಸಂಬಂಧ ವಿಚಾರಣೆ ನಡೆಸಲು ಅಲಿ ಖಾನ್, ಖಾರದಪುಡಿ ಮಹೇಶ ಹಾಗೂ ಸ್ವಸ್ತಿಕ್ ನಾಗರಾಜನನ್ನು ವಶಕ್ಕೆ ತೆಗೆದುಕೊಳ್ಳಲು ಸಿಬಿಐ ಅಧಿಕಾರಿಗಳು ಅವರನ್ನೆಲ್ಲ ನ್ಯಾಯಾಲಯಕ್ಕೆ ಕರೆತಂದಿದ್ದರು. ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಮೂವರನ್ನು ಸೆಪ್ಟೆಂಬರ್ 30ರ ವರೆಗೆ ಸಿಬಿಐ ವಶಕ್ಕೆ ಒಪ್ಪಿಸಿತ್ತು. ಬಳಿಕ ಸಿಬಿಐ ಅಧಿಕಾರಿಗಳು ಮೂವರನ್ನು ಕರೆದುಕೊಂಡು ಹೋಗಲು ಜೀಪ್ ನಲ್ಲಿ ಹತ್ತಿಸುತ್ತಿದ್ದರು. ಆ ವೇಳೆಗಾಗಲೇ ಸ್ವಸ್ತಿಕ್ ನಾಗರಾಜ್ ಹಾಗೂ ಖಾರದಪುಡಿ ಮಹೇಶ್ ಜೀಪ್ನಲ್ಲಿ ಕುಳಿತಿದ್ದಾರೆ.

ಅಲಿ ಖಾನ್ ಜಬರದಸ್ತು ಏನಿತ್ತು?:
'ನಾನು ಹೆಲಿಕಾಪ್ಟರಿನಲ್ಲಿ ಹಾರಾಡಿದವನು. ಹಾಗಾಗಿ ಸಿಬಿಐ ಜೀಪ್ ಹತ್ತುವುದಿಲ್ಲ. ನನ್ನನ್ನು ಇನ್ನೋವಾ ಕಾರಿನಲ್ಲೇ ಕರೆದುಕೊಂಡು ಹೋಗಿ' ಎಂದು ಸಿಬಿಐ ಅಧಿಕಾರಿಗಳೊಂದಿಗೆ ವರಾತ ತೆಗೆದಿದ್ದಾನೆ. ಮಾತ್ರವಲ್ಲ, ಜೀಪ್ ಹತ್ತಲು ಬಿಲ್ ಕುಲ್ ನಿರಾಕರಿಸಿದ್ದಾನೆ.
ಅದರೂ ಒತ್ತಾಯ ಮಾಡಿ ಅಧಿಕಾರಿಗಳು ಜೀಪ್ ಗೆ ಹತ್ತಿಸಿದ್ದಾರೆ. ಇದರಿಂದ ಸುಮ್ಮನಾಗದ ಅಲಿಖಾನ್ ಬಟ್ಟೆ ಹರಿದುಕೊಂಡು ತನ್ನ ಹಣೆಯನ್ನು ಜೀಪ್ನ ಗಾಜಿಗೆ ಚಚ್ಚಿಕೊಂಡು ತನ್ನ ಮೇಲೆ ಸಿಬಿಐ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆಂದು ಬಿಂಬಿಸಲು ಯತ್ನಿಸಿದ್ದಾನೆ.

ಹೆಲಿಕಾಪ್ಟರಿನಲ್ಲಿ ಹೋಗಿ ನಾನು ಉಪ್ಪಿಟ್ಟು ತಿನ್ನುತ್ತಿದ್ದೆ
'ನೀವು ಯಾವತ್ತಾದರೂ ಹೆಲಿಕಾಪ್ಟರಿನಲ್ಲಿ ಓಡಾಡಿದ್ದೀರಾ? ನಾನು ಯಾವಾಗಲೂ ಅದರಲ್ಲೇ ಓಡಾಡುವುದು. ನಾನು ಏನು ಎನ್ನುವುದು ಗೊತ್ತಾ? ಹೆಲಿಕಾಪ್ಟರಿನಲ್ಲಿ ಹೋಗಿ ನಾನು ಉಪ್ಪಿಟ್ಟು ತಿನ್ನುತ್ತಿದ್ದೆ' ಎಂದು ಸಿಬಿಐ ಅಧಿಕಾರಿಗಳ ಎದುರು ಅಲಿ ಖಾನ್ ಆರ್ಭಟಿಸಿದ್ದಾನೆ.

ಅಲಿ ಖಾನ್ ರಂಪಾಟ ರೆಕಾರ್ಡ್ ಆಗಿತ್ತು!
ಇದರಿಂದ ಗಲಿಬಿಲಿಗೊಂಡ ಸಿಬಿಐ ಅಧಿಕಾರಿಗಳು ಆರೋಪಿಯನ್ನು ವಾಪಸ್ ನ್ಯಾಯಾಲಯಕ್ಕೆ ಕರೆದೊಯ್ದರು. ಮಧ್ಯಾಹ್ನ ನ್ಯಾಯಾಲಯದ ಕಲಾಪ ಆರಂಭವಾಗುತ್ತಿದ್ದಂತೆ ಅಲಿಖಾನನ ಎಲ್ಲಾ ಚಟುವಟಿಕೆಗಳನ್ನು ಸಿಬಿಐ ಅಧಿಕಾರಿಗಳು ನ್ಯಾಯಾಧೀಶರ ಗಮನಕ್ಕೆ ತಂದರು. ಆತನ ಮಾತುಗಳನ್ನು ಸಿಬಿಐ ಅಧಿಕಾರಿ ಹೇಮಂತ್ ರೆಕಾರ್ಡ್ ಮಾಡಿಕೊಂಡೇ ನ್ಯಾಯಾಧೀಶರಿಗೆ ನೀಡಿದರು.

ಅಲಿಖಾನ್ ದುರ್ವತನೆಗೆ ನ್ಯಾಯಾಧೀಶ ಏನಂದರು!?
'ನೀನು ಹೆಲಿಕಾಪ್ಟರ್ನಲ್ಲಿ ಓಡಾಡಿದ್ದು ಯಾರ ದುಡ್ಡಿನಲ್ಲಿ. ಅದೆಲ್ಲಾ ನಿನ್ನ ಸ್ವಂತ ಸಂಪಾದನೆಯೇ? ಹೆಲಿಕಾಪ್ಟರಿನಲ್ಲಿ ಓಡಾಡಲು ದುಡ್ಡು ಹೇಗೆ ಮಾಡಿದ್ದು ಎನ್ನುವುದರ ಬಗ್ಗೆಯೇ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ನನಗೆ ಅದು ಬೇಕು. ಇದು ಬೇಕು ಎನ್ನುವ ಆಟಗಳು ನ್ಯಾಯಾಲಯದ ಮುಂದೆ ನಡೆಯುವುದಿಲ್ಲ. ಈ ಹಿಂದೆ ವಕೀಲರು, ಪೊಲೀಸರು ಹಾಗೂ ಮಾಧ್ಯಮದವರ ನಡುವೆ ಗಲಾಟೆಯಾಗಿದ್ದು ಸಹ ನೀನೂ ಮತ್ತು ನಿನ್ನಂತವರು ನಿರ್ಮಿಸಿರುವ ದುಷ್ಟ ಕೂಟದಿಂದಲೇ. ಇಂದು ಕೂಡಾ ಗಲಾಟೆ ಮಾಡಿ ಅದೇ ರೀತಿಯ ವಾತಾವರಣ ನಿರ್ಮಿಸಬೇಕು ಎಂದುಕೊಂಡಿದ್ದೀಯಾ?' ಎಂದು ನ್ಯಾಯಾಧೀಶರು ಖಾರವಾಗಿ ಪ್ರಶ್ನಿಸಿದ್ದಾರೆ.

'ಕೈಗೆ ಹಗ್ಗ ಕಟ್ಟಿ ಬಿಟಿಎಸ್ ಬಸ್ನಲ್ಲಿ ಎಳೆದುಕೊಂಡು ಹೋಗ್ರಿ ಇವನನ್ನು'
'ಇನ್ನು ಮುಂದಾದರೂ ನೀನು ನಿನ್ನ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಸಿಬಿಐ ಅಧಿಕಾರಿಗಳ ವಿಚಾರಣೆಗೆ ಸಹಕರಿಸಬೇಕು. ನಿನ್ನ ವರ್ತನೆ ಬಗೆಗಿನ ವಿಡಿಯೋ ರೆಕಾರ್ಡಿಂಗ್ ಆಗಿರುವ ಸಿಡಿಯನ್ನು ಸುಪ್ರೀಂ ಕೋರ್ಟ್ ಹಾಗೂ ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ತರುತ್ತೇವೆ' ಎಂದು ನ್ಯಾಯಾಧೀಶರು ಖಾರವಾಗಿ ಹೇಳಿದರು. 'ನೀನು ಸಾಮಾನ್ಯ ಕೈದಿಯಂತೆ ಸಿಬಿಐ ಅಧಿಕಾರಿಗಳ ಬಳಿ ಇರುವ ಜೀಪ್ನಲ್ಲೇ ಹೋಗಬೇಕು. ನ್ಯಾಯಾಲಯದ ಮುಂದೆ ಎಲ್ಲರೂ ಸಮಾನರು. ವಿಚಾರಣಾಧೀನ ಕೈದಿಯಾಗಿ ನಿನ್ನ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು. ಇಲ್ಲದಿದ್ದರೆ ನಿನ್ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ' ಎಂದು ನ್ಯಾಯಾಧೀಶರು ಬುದ್ದಿಮಾತು ಹೇಳಿದರು.

ಅಲಿ ಖಾನನ್ನುದ್ದೇಶಿಸಿ ನ್ಯಾಯಾಧೀಶರು ಇನ್ನೂ ಏನು ಹೇಳಿದರು?:
'ನಿನ್ನಂತೆ ಸಾವಿರಾರು ಜನರು ಬಳ್ಳಾರಿಯಲ್ಲಿದ್ದಾರೆ. ಆದರೆ ಅವರೆಲ್ಲಾ ಗಣಿಗಾರಿಕೆಯಲ್ಲಿ ತೊಡಗಿಲ್ಲ. ರಾಜ್ಯದಲ್ಲಿ ಎಷ್ಟೋ ಜನ ಸರಿಯಾಗಿ ತಿನ್ನಲು ಆಹಾರವಿಲ್ಲದೇ ಪರದಾಡುತ್ತಾ ಫುಟ್ ಪಾತ್ ನಲ್ಲಿ ತಿಂದು, ಮಲಗುತ್ತಿದ್ದಾರೆ. ರಾಜ್ಯದ ಲಕ್ಷಾಂತರ ಜನರಿಗೆ ಶೌಚಾಲಯಗಳಿಲ್ಲ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಿದೆ. ಇದನ್ನು ತುಂಬಿಸಿ ಕೊಡುವವರು ಯಾರು?'

ಅಲಿ ಖಾನ್ ಕೊನೆಗೂ ಕ್ಷಮೆ ಕೇಳಿದ ಅನ್ನಿ
ಇಷ್ಟೆಲ್ಲಾ ರಾಮಾಯಣ ಆದ ಮೇಲೆ ನ್ಯಾಯಾಧೀಶರ ಬುದ್ದಿಮಾತಿನಿಂದ ಮೆತ್ತಗಾದ ಅಲಿ ಖಾನ್ ತನ್ನ ವರ್ತನೆ ಬಗ್ಗೆ ಕ್ಷಮೆ ಕೇಳಿದ ಅನ್ನಿ. (ಚಿತ್ರ ಕೃಪೆ: newswala.com)
-
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications