ಕೊಪ್ಪದಲ್ಲಿ ಸಂಭವಿಸಿದ್ದು ಭೂಕಂಪವಲ್ಲ, ಅಧಿಕಾರಿಗಳು ನೀಡಿದ ವರದಿಯಲ್ಲೇನಿದೆ?
ಚಿಕ್ಕಮಗಳೂರು, ಆಗಸ್ಟ್.29: ಕೊಪ್ಪದಲ್ಲಿ ಭಾರೀ ಶಬ್ದಕ್ಕೆ ಜನರು ಬೆಚ್ಚಿಬಿದ್ದ ಘಟನೆ ಇತ್ತೀಚೆಗೆ ಸಂಭವಿಸಿತ್ತು. ಜನರು ಈ ಶಬ್ದ ಕೇಳಿ ಭೂಕಂಪನ ಇರಬಹುದು ಎಂದು ಭಾವಿಸಿದ್ದರು. ಆದರೆ ಇದೀಗ ಇದು ಭೂಕಂಪನ ಅಲ್ಲ, ಅತೀ ಹೆಚ್ಚು ಮಳೆಯಾದಾಗ ಸಂಭವಿಸುವ ಶಬ್ದ ಎಂದು ಗಣಿ ಮತ್ತ ಭೂವಿಜ್ಞಾನ ಅಧಿಕಾರಿಗಳು ವರದಿ ನೀಡಿದ್ದಾರೆ.
2 ರಿಂದ 3 ರೀತಿಯಲ್ಲಿ ಶಬ್ದ ಬರುವ ಸಾಧ್ಯತೆಯಿದ್ದು, ಕಲ್ಲುಗಳ ಮಧ್ಯೆ ನೀರಿನ ಹರಿವಿನಿಂದಲೇ ಭಾರೀ ಶಬ್ದ ಬರುತ್ತಿದೆ ಎನ್ನುವ ವರದಿಯನ್ನು ಅಧಿಕಾರಿಗಳ ತಂಡ ನೀಡಿದೆ.
ಕಳೆದ ತಿಂಗಳಿನಿಂದ ಕೊಗ್ರೆ, ಶಾಂತಿಗ್ರಾಮ, ಅಭಿಕಲ್ಲು, ಅನಮಕ್ಕಿ, ಗುಡ್ಡ ಬರಗೋಡು, ನಾಯಕರ ಕಟ್ಟೆ ಗ್ರಾಮದಲ್ಲಿ ಭಾರಿ ಶಬ್ದ ಕೇಳಿ ಬರುತ್ತಿತ್ತು. ಹೆಚ್ಚಿನ ತನಿಖೆ ನಡೆಸಿದರೆ ಶಬ್ದಕ್ಕೆ ಸಂಪೂರ್ಣ ಕಾರಣ ಹಾಗೂ ಮಾಹಿತಿ ಸಿಗಲಿದೆ ಎನ್ನುವುದು ತಂಡದ ಅಭಿಪ್ರಾಯವಾಗಿತ್ತು.

ಆಗಸ್ಟ್ 14 ರಂದು ಜಿಲ್ಲೆಯ ಕೊಪ್ಪ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿದ್ದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೊಪ್ಪ ತಾಲೂಕಿನ ಕೊಗ್ರೆ ಗ್ರಾಮದಲ್ಲಿ ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಬರುತ್ತಿದ್ದು, ಕೆಲ ಮನೆಗಳು ಬಿರುಕು ಬಿಟ್ಟಿದ್ದವು. ಕೊಗ್ರೆ ಹಾಗೂ ಸುತ್ತಲ ಗ್ರಾಮಗಳಲ್ಲಿ ಪದೇಪದೆ ಭೂಮಿಯೊಳಗಿಂದ ಶಬ್ದ ಕೇಳಿ ಬರುತ್ತಿದ್ದು, ಭೂಮಿ ಕಂಪಿಸಿದ ಅನುಭವವಾಗುತ್ತಿತ್ತು.

ಈ ಹಿಂದೆಯೂ ಕೆಲ ಮನೆಗಳು ಬಿರುಕು ಬಿಟ್ಟಿದ್ದವು. ನಿರಂತರ ಶಬ್ದ, ಭೂಕುಸಿತದಿಂದ ಜನ ತೀವ್ರ ಆತಂಕಕ್ಕೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಿದ್ದಾರೆ.











Click it and Unblock the Notifications