ಬರ : ಗುಳೇ ಹೋಗೋವ್ರಿಗೆ ಸಾರಿಗೆ ಸಂಸ್ಥೆ ಆಫರ್!
ಯಾದಗಿರಿ, ಏಪ್ರಿಲ್ 25 : ಭೀಕರ ಬರದಿಂದ ತತ್ತರಿಸಿರುವ ಗ್ರಾಮೀಣರು ಮಹಾನಗರಗಳಿಗೆ ಕೂಲಿ ಕೆಲಸಕ್ಕೆ ಗುಳೇ ಹೋಗೋ ಬದಲು, ಅವರವರ ಊರಲ್ಲೇ ನರೇಗಾ ಯೋಜನೆಯಡಿ ಕೆಲಸ ನೀಡೋದಾಗಿ ಸರ್ಕಾರ ಹೇಳ್ತದೆ.
ಆದರೆ, ಈಶಾನ್ಯ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಮಾತ್ರ ಗುಳೇ ಹೋಗೋವ್ರಿಗೆ 'ಹೋಗೋವ್ರಿ ಹೋಗ್ರಿ' ಅಂತ ಆಫರ್ ನೀಡ್ತಿದೆ! ಹೌದು, ಬೆಂಗಳೂರಿಗೆ ಹೋಗೋ ಕೂಲಿಕಾರ್ಮಿಕರಿಗಾಗಿ ಯಾದಗಿರಿ ಜಿಲ್ಲೆಯ ಬಸ್ ನಿಲ್ದಾಣಗಳಲ್ಲಿ ಸಾರಿಗೆ ಸಂಸ್ಥೆಯ ಆಫರ್ ಫ್ಲೆಕ್ಸ್ ಹಾಕಿರೋದು ವಿಚಿತ್ರ. [ನೀಲಕಂಠರಾಯನಗಡ್ಡಿ ವಾಸಿಗಳಿಗೆ ನೀರು ಎಂದೂ ಶಾಪ!]
ಬರದ ಛಾಯೆ ಎಲ್ಲೆಡೆ ಆವರಿಸಿದೆ. ಗ್ರಾಮಸ್ಥರ ಬದುಕು ಮತ್ತಷ್ಟು ಜಟಿಲವಾಗಿದೆ. ಸರ್ಕಾರದ ಯೋಜನೆಗಳ ಮೂಲಕ ಕೂಲಿಕಾರ್ಮಿಕರಿಗೆ ಅನುಕೂಲ ಮಾಡಿಕೊಡುವ ಯತ್ನ ಕೂಡ ನಡೆದಿದೆ. ಆದ್ರೆ, ಯಾದಗಿರಿ ಜಿಲ್ಲೆಯಿಂದ ಬೆಂಗಳೂರಿಗೆ ಹೋಗೋ ಕೂಲಿಕಾರ್ಮಿಕರಿಗೆ ಸಾರಿಗೆ ಸಂಸ್ಥೆ ನೀಡಿರೋ ಆಫರ್ ಗುಳೆ ಹೋಗೋದನ್ನ ಪ್ರೇರೇಪಿಸಿದಂತಾಗಿದೆ. ತನ್ನ ಲಾಭಕ್ಕಾಗಿ, ಸರ್ಕಾರದ ಯೋಜನೆಗಳನ್ನು ಧಿಕ್ಕರಿಸಿದಂತಾಗಿದೆ.
ಸಂಸ್ಥೆಯ ಬಸ್ಗಳಲ್ಲಿ ಕೂಲಿ ಕಾರ್ಮಿಕರಿಗೆ ಬೆಂಗಳೂರಿಗೆ ಹೋಗಿ ಬರಲು ಪ್ರತಿಯೊಬ್ಬರಿಗೆ 50 ಕೆ.ಜಿ.ವರೆಗಿನ ಲಗೇಜ್ಗಳನ್ನ ಉಚಿತವಾಗಿ ಕೊಂಡೊಯ್ಯಬಹುದು, ಯಾದಗಿರಿ ಜಿಲ್ಲೆಯ ಯಾವುದೇ ಗ್ರಾಮ ಅಥವಾ ಹಳ್ಳಿಯಿಂದ 10 ಜನಕ್ಕಿಂತ ಮೇಲ್ಪಟ್ಟು ಜನರು ಬೆಂಗಳೂರಿಗೆ ಹೋಗೋರಿದ್ರೆ, ಅವರ ಗ್ರಾಮ ಹಳ್ಳಿಗಳಿಂದ ನೇರವಾಗಿ ಬೆಂಗಳೂರಿನಲ್ಲಿ ಅವರು ನೆಲೆಸಿರುವ ಸ್ಥಳಗಳಿಗೆ ಬಸ್ಗಳನ್ನು ಬಿಡಲಾಗುವುದು ಎಂದು ಪ್ರಚಾರದ ಫ್ಲೆಕ್ಸ್ ಹಾಕಿಸಿದೆ. [ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]
ಸಂಸ್ಥೆಯ ಲಾಭಕ್ಕಾಗಿ ಈಶಾನ್ಯ ಸಾರಿಗೆ ಸಂಸ್ಥೆಯ ಗುಳೇ ಹೋಗೋವ್ರಿಗೆ ಆಫರ್ ನಿಜಕ್ಕೂ ಹಾಸ್ಯಾಸ್ಪದ. ಮಾಲ್ಗಳಲ್ಲಿ ಡಿಸ್ಕೌಂಟ್ ಆಫರ್ ನಿಡುವಂತೆ ಇಲ್ಲೂ ಸಹ ಸಾರಿಗೆ ಸಂಸ್ಥೆ ಗುಳೇ ಹೋಗೋವ್ರಿಗೆ ನೀಡ್ತಿರೋ ಇಂತಹ ಆಮಿಷ ಸರ್ಕಾರ ಯೋಜನೆಗಳನ್ನ ಮಣ್ಣುಪಾಲಾಗಿಸಲಿದೆ.
ಜನರು ಬದುಕನ್ನು ಅರಸಿಕೊಂಡು ಹೋಗುವುದು ಸಹಜ. ಆದರೆ, ಉತ್ತರ ಕರ್ನಾಟಕ ಅಭಿವೃದ್ಧಿ ಕಾಣದಿದ್ದ ಕಾರಣ ರೈತಾಪಿ ಜನರು, ಬಡವರೆಲ್ಲ ಸಂಸಾರ ಸಮೇತರಾಗಿ ಬೆಂಗಳೂರು ಬಂದು ಸೇರುತ್ತಿದ್ದಾರೆ. ಮಹಾನಗರದಲ್ಲಿ ಕೂಲಿನಾಲಿ ಮಾಡಿ, ಮನೆಗೆಲಸ, ಗಾರೆಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಜನಸಂಖ್ಯಾ ಸ್ಫೋಟ!