ಗೋವಾ ಪ್ರಯಾಣಿಕರಿಗೆ ಸಿಹಿಸುದ್ದಿ: ಹುಬ್ಬಳ್ಳಿ-ಪಣಜಿಗೆ ನಿತ್ಯ ಎಕ್ಸ್ಪ್ರೆಸ್ ಬಸ್ಗಳ ಸಂಚಾರ, ವೇಳಾಪಟ್ಟಿ
NWKRTC Hubballi to Panaji Bus: ಉತ್ತರ ಕರ್ನಾಟಕ ಭಾಗದಿಂದ ಹಾವೇರಿ, ಹುಬ್ಬಳ್ಳಿ, ಧಾರವಾಡ, ಗದಗ ಸೇರಿ ವಿವಿಧ ಭಾಗಗಳಿಂದ ಪಣಜಿ, ಗೋವಾಗೆ ತೆರಳುವ ಪ್ರಯಾಣಿಕರಿಗೆ ಸುಹಿ ಸುದ್ದಿಯೊಂದು ಸಿಕ್ಕಿದೆ. ವಾಯುವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿಯಿಂದ ಪಣಜಿಗೆ 3 ವೇಗದೂತ ಬಸ್ಗಳ ಕಾರ್ಯಾಚರಣೆ ಆರಂಭಿಸಿದೆ. ಈ ಬಸ್ಗಳ ವೇಳಾಪಟ್ಟಿ, ಟಿಕೆಟ್ ದರ ಹಾಗೂ ನಿಲ್ದಾಣಗಳ ಮಾಹಿತಿ ಇಲ್ಲಿದೆ.
ಬೇಸಿಗೆ ರಜಾದಿನ ಹಿನ್ನೆಲೆ ಸಂಚಾರ ಪ್ರಮಾಣ ಹೆಚ್ಚಾಗಿದ್ದು, ಪ್ರಸ್ತುತ ಜನ ದಟ್ಟಣೆಯ ಅವಧಿ ಶುರುವಾಗಿದೆ. ಪ್ರಯಾಣಿಕರ ಓಡಾಟ ಹೆಚ್ಚಾದ ಹಿನ್ನೆಲೆಯೆಲ್ಲಿ ಸಾರ್ವಜನಿಕರ ಬೇಡಿಕೆಯ ಮೇರೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿಯಿಂದ ಪಣಜಿಗೆ ಮೂರು ವೇಗದೂತ ಬಸ್ ಗಳ ಸಂಚಾರವನ್ನು ಆರಂಭಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮಾಹಿತಿ ನೀಡಿದ್ದಾರೆ.

ವಾಣಿಜ್ಯ, ಉದ್ಯೋಗ, ವಿದ್ಯಾಭ್ಯಾಸ, ಪ್ರವಾಸ ಇನ್ನಿತರ ಕೆಲಸ ಕಾರ್ಯಗಳಿಗಾಗಿ ಪ್ರತಿ ದಿನ ಹುಬ್ಬಳ್ಳಿ- ಧಾರವಾಡ ಅವಳಿ ನಗರ ಹಾಗೂ ಜಿಲ್ಲೆಯ ವಿವಿಧ ಸ್ಥಳಗಳಿಂದ ನೆರೆಯ ಗೋವಾ ರಾಜ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಗಿ ಬರುತ್ತಾರೆ. ಪ್ರಸ್ತುತ ಶಾಲಾ ಕಾಲೇಜುಗಳಿಗೆ ರಜೆ, ಪ್ರವಾಸ ಮತ್ತಿತರ ಕಾರಣಗಳಿಂದಾಗಿ ಪ್ರಯಾಣಿಕರ ದಟ್ಟಣೆ ಅವಧಿಯಾಗಿದೆ. ರಾಜ್ಯದಿಂದ ಗೋವಾಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆಯೂ ಅಧಿಕವಾಗಿದೆ.
ಹುಬ್ಬಳ್ಳಿ-ಪಣಜಿ ಬಸ್ ಮಾರ್ಗ
ಸಾರ್ವಜನಿಕರ ಬೇಡಿಕೆ, ಸದ್ಯದ ಸನ್ನಿವೇಶ ಗಮನಿಸಿದ ವಾಯುವ್ಯ ಸಾರಿಗೆ ಸಂಸ್ಥೆಯು ಮೇರೆಗೆ ಹುಬ್ಬಳಿಯಿಂದ ಪಣಜಿಗೆ ವೇಗದೂತ ಬಸ್ಗಳನ್ನು ಬಿಡಲಾಗಿದೆ. ಸದರಿ ಬಸ್ಗಳು ಹುಬ್ಬಳ್ಳಿಯ ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಹೊರಡುತ್ತವೆ. ಹುಬ್ಬಳ್ಳಿಯಿಂದ ಈ ಬಸ್ಗಳು ಧಾರವಾಡ, ಅಳ್ನಾವರ, ರಾಮನಗರ, ಪೊಂಡಾ ಮಾರ್ಗವಾಗಿ ಪಣಜಿಗೆ ಸಂಚರಿಸುತ್ತವೆ ಬಸ್ ಮಾರ್ಗಗಳನ್ನು ವಿವರಿಸಿದರು.
ಸಮಯ, ವೇಳಾಪಟ್ಟಿ
ನಗರದ ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರತಿದಿನ ಬೆಳಗ್ಗೆ 9 ಗಂಟೆಗೆ, 10ಕ್ಕೆ ಮತ್ತು 10.35ಕ್ಕೆ ತಲಾ ಒಂದರಂತೆ ಮೂರು ವೇಗದೂತ ಬಸ್ ಹೊರಡುತ್ತವೆ. ಪಣಜಿಗೆ ಮಧ್ಯಾಹ್ನ ಕ್ರಮವಾಗಿ 2.15ಗಂಟೆಗೆ, 3.15ಕ್ಕೆ ಮತ್ತು 3.45ಕ್ಕೆ ತಲುಪುತ್ತವೆ ಎಂದರು.
ಮರಳಿ ಅದೇ ದಿನ ದಿನ ಪಣಜಿ-ಹುಬ್ಬಳ್ಳಿ ವೇಗದೂತ ಮೂರು ಬಸ್ಗಳು ಮರಳುತ್ತವೆ. ಪಣಜಿ ಬಸ್ ನಿಲ್ದಾಣದಿಂದ ಮಧ್ಯಾಹ್ನ 3.30 ಗಂಟೆಗೆ, ಸಂಜೆ 4ಕ್ಕೆ ಹಾಗೂ 5.15 ಗಂಟೆಗೆ ಅಲ್ಲಿಂದ ಹೊರಟು ಕ್ರಮವಾಗಿ ಹುಬ್ಬಳ್ಳಿ ನಿಲ್ದಾಣಕ್ಕೆ ರಾತ್ರಿ 8.30ಗಂಟೆಗೆ, 9.15ಕ್ಕೆ ಹಾಗೂ 10.30ಕ್ಕೆ ಆಗಮಿಸುತ್ತವೆ ಎಂದು ಅವರು ಮಾಹಿತಿ ನೀಡಿದರು.
ಟಿಕೆಟ್ ದರ, ಬುಕಿಂಗ್ ವಿವರ
ಹುಬ್ಬಳ್ಳಿ-ಗೋವಾ ಟಿಕೆಟ್ ದರ ಅಪಘಾತ ಪರಿಹಾರ ವಿಮೆ, ಟೋಲ್ ಫೀ ಇತ್ಯಾದಿ ಸೇರಿದಂತೆ ಒಟ್ಟು ಪ್ರಯಾಣ ದರ ರೂ. 236 ನಿಗದಿಪಡಿಸಲಾಗಿದೆ. ಮುಂಗಡ ಬಕಿಂಗ್ನಲ್ಲಿ ರಿಯಾಯಿತಿ ಸಹ ಸಿಗಲಿದೆ. ಅಧಿಕೃತ ಜಾಲತಾಣ www.ksrtc.in ಲಿಂಕ್ KSRTC Mobile App ಮೂಲಕ ಅಥವಾ ಗೋಕುಲ ರಸ್ತೆ ಕೇಂದ್ರೀಯ ಬಸ್ ನಿಲ್ದಾಣ, ಹೊಸೂರು ಬಸ್ ನಿಲ್ದಾಣ ಸೇರಿದಂತೆ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮುಂಗಡ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಬಸ್ ಟಿಕೆಟ್ನಲ್ಲಿ ರಿಯಾಯಿತಿ
ಒಂದೇ ಬಾರಿ 4 ಅಥವಾ ಅದಕ್ಕಿಂತ ಹೆಚ್ಚಿನ ಸೀಟು ಬುಕ್ ಮಾಡಿದಲ್ಲಿ ಪ್ರಯಾಣ ದರದಲ್ಲಿ ಶೇಕಡ 5 ರಷ್ಟು ರಿಯಾಯಿತಿ ಸಹ ಸಿಗುತ್ತದೆ. ಹುಬ್ಬಳ್ಳಿಯಿಂದ ಹೋಗುವ ಮತ್ತು ಅಲ್ಲಿಂದ ಬರುವ ಎರಡು ಬದಿಯ ಪ್ರಯಾಣವನ್ನು ಮುಂಚಿತವಾಗಿ ಬುಕ್ ಮಾಡಿದರೆ ಪ್ರಯಾಣ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಪ್ರತಿಕ್ರಿಯೆ ಗಮನಿಸಿ ಹುಬ್ಬಳ್ಳಿಯಿಂದ ಗೋವಾ ರಾಜ್ಯದ ಇತರೆ ಪ್ರಮುಖ ಸ್ಥಳಗಳಿಗೆ ಬಸ್ಸುಗಳನ್ನು ಆರಂಭಿಸುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧೆಡೆ ವಾಯುವ್ಯ ಸಾರಿಗೆ ಬಸ್ ಸಂಚಾರ
ಇತ್ತೀಚೆಗೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು 'ರಾಜರಥ' ಬಸ್ ಅನ್ನು ಹುಬ್ಬಳ್ಳಿ ಮತ್ತು ಬೆಳಗಾವಿಯಿಂದ ಹೈದರಾಬಾದ್ಗೆ ಸಂಚಾರ ಮಾಡುತ್ತಿದೆ. ದಾಂಡೇಲಿ ಮತ್ತು ಬೆಂಗಳೂರು ಮಾರ್ಗದಲ್ಲಿ 'ಪಲ್ಲಕ್ಕಿ' ಬಸ್, ಹುಬ್ಬಳ್ಳಿ-ಗದಗ ಮಧ್ಯ ತಡೆರಹಿತ 'ರಾಜಹಂಸ' ಬಸ್ಗಳನ್ನು ಓಡಿಸುತ್ತಿದೆ. ಇದೀಗ ಹುಬ್ಬಳ್ಳಿ-ಪಣಜಿಗೆ 'ವೇಗದೂತ' ಬಸ್ ಸಂಚಾರ ಆರಂಭಿಸಿದೆ.















Click it and Unblock the Notifications