ಎನ್. ಆರ್. ಸಂತೋಷ್ ಆರೋಗ್ಯ ಸ್ಥಿರ; ಸೋಮವಾರ ಡಿಸ್ಚಾರ್ಜ್
ಬೆಂಗಳೂರು, ನವೆಂಬರ್ 29 : "ಎನ್. ಆರ್. ಸಂತೋಷ್ ಅವರ ಆರೋಗ್ಯ ಸ್ಥಿರವಾಗಿದೆ" ಎಂದು ವೈದ್ಯರು ಹೇಳಿದರು. ಮುಖ್ಯಮಂತ್ರಿ ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಎನ್. ಆರ್. ಸಂತೋಷ್ ಶುಕ್ರವಾರ ರಾತ್ರಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು.
ಭಾನುವಾರ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯ ಡಾ. ಸಂಜಯ್ ಕುಲಕರ್ಣಿ ಅವರು ಎನ್. ಆರ್. ಸಂತೋಷ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. "ಸಂತೋಷ್ ಇವತ್ತು ಚೆನ್ನಾಗಿದ್ದಾರೆ. ತಿಂಡಿ ಮಾಡಿದ್ದಾರೆ, ಓಡಾಡುತ್ತಿದ್ದಾರೆ" ಎಂದರು.
"ಹೃದಯದ ಬಡಿತ ಚೆನ್ನಾಗಿದೆ. ಸಹಜ ಸ್ಥಿತಿಗೆ ಮರಳಿದ್ದಾರೆ. ಆರೋಗ್ಯ ಸ್ಥಿರವಾಗಿದೆ. ಇಂದು ಮಾತನಾಡುತ್ತಿದ್ದಾರೆ. ಬೆಳಗ್ಗೆ ಇಡ್ಲಿ ತಿಂದಿದ್ದಾರೆ. 24 ರಿಂದ 48 ಗಂಟೆಗಳ ಕಾಲ ಅವರ ಆರೋಗ್ಯದ ಮೇಲೆ ನಿಗಾವಹಿಸಲಾಗಿದೆ" ಎಂದು ಮಾಹಿತಿ ನೀಡಿದರು.

"ನಮಗೆ ಯಾವುದೇ ರಾಜಕೀಯ ಒತ್ತಡಗಳು ಇಲ್ಲ. ಅವರನ್ನು ಸೋಮವಾರ ಡಿಸ್ಚಾರ್ಜ್ ಮಾಡಲಾಗುತ್ತದೆ. ಪೊಲೀಸರು ಅವರ ಕೆಲಸವನ್ನು ಮಾಡುತ್ತಿದ್ದಾರೆ" ಎಂದು ಡಾ. ಸಂಜಯ್ ಕುಲಕರ್ಣಿ ಹೇಳಿದರು.
ಎಫ್ಐಆರ್ ದಾಖಲು; 31 ವರ್ಷದ ಎನ್. ಆರ್. ಸಂತೋಷ್ ಶುಕ್ರವಾರ ರಾತ್ರಿ 12 ನಿದ್ರೆ ಮಾತ್ರೆಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಿ. ಎಸ್. ಯಡಿಯೂರಪ್ಪ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದರು.
ಆತ್ಮಹತ್ಯೆಗೆ ಯತ್ನಿಸಿದ ಎನ್. ಆರ್. ಸಂತೋಷ್ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆತ್ಮಹತ್ಯೆಗೆ ಕಾರಣ ಏನೆಂದು ತಿಳಿಯಲು ಪೊಲೀಸರು ತನಿಖೆ ನಡೆಸಲಿದ್ದಾರೆ. ಸಂತೋಷ್ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಹೇಳಿಕೆ ಪಡೆಯುವ ಸಾಧ್ಯತೆ ಇದೆ.
ಪತ್ನಿಯ ಹೇಳಿಕೆ; "ಶುಕ್ರವಾರ ಬೆಳಗ್ಗೆಯಿಂದಲೇ ಅವರು ಬೇಸರದಿಂದ ಇದ್ದರು. ಸಂಜೆ ಹೊರ ಹೋಗಿದ್ದರು. 7 ಗಂಟೆಗೆ ಮನೆಗೆ ಬಂದವರು ಓದಲು ಮಹಡಿಗೆ ಹೋದರು. ಅಡುಗೆ ಏನು ಮಾಡಲಿ ಎಂದು ವಿಚಾರಿಸಲು ಹೋದಾಗ ಏನೂ ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ" ಎಂದು ಎನ್. ಆರ್. ಸಂತೋಷ್ ಪತ್ನಿ ಜಾಹ್ನವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.












Click it and Unblock the Notifications