ಕರ್ನಾಟಕದಲ್ಲಿ ಮಂಜೂರಾದ ಜಮೀನುಗಳ ಪೋಡಿ ಇಂಡೀಕರಣ ಈಗ ಸುಲಭ
ಬೆಂಗಳೂರು, ಜುಲೈ 04; ಸರ್ಕಾರಿ ಜಮೀನಿನಲ್ಲಿ ಮಂಜೂರಾದ ಜಮೀನುಗಳ ಫೋಡಿ ಇಂಡೀಕರಣ ಮಾಡಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವ ಕುರಿತು ಭೂ ಮಾಪನ ಇಲಾಖೆ ಸುತ್ತೋಲೆ ಹೊರಡಿಸಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ, ಪ್ರಾದೇಶಿಕ ಆಯುಕ್ತರಿಗೆ ತಂತ್ರಾಂಶ ಬಳಕೆ ಮಾಡಿಕೊಂಡು ಹೇಗೆ ಪೋಡಿ ಇಂಡೀಕರಣ ಮಾಡುವುದು ಎಂದು ವಿವರಣೆ ನೀಡಲಾಗಿದೆ.
ಆಯುಕ್ತರು, ಭೂ ಮಾಪನ ಇಲಾಖೆ ಹಾಗೂ ಪದನಿಮಿತ್ತ ನಿರ್ದೇಶಕರು ಭೂಮಿ & ಯುಪಿಓಆರ್, ಬೆಂಗಳೂರು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸರ್ಕಾರಿ ಜಮೀನಿನಲ್ಲಿ ಮಂಜೂರಾದ ಜಮೀನುಗಳ ಪೋಡಿ ಇಂಡೀಕರಣ ಮಾಡಲು ಭೂಮಿ ತಂತ್ರಾಂಶದಲ್ಲಿ ಅವಕಾಶ ಕೋರಿ ಹಲವಾರು ಪತ್ರಗಳು ಸ್ವೀಕೃತವಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸುತ್ತೋಲೆ ಹೇಳಿದೆ.

ಸರ್ಕಾರಿ ಜಮೀನಿನಲ್ಲಿ ಮಂಜೂರಾದ ಜಮೀನುಗಳ ಪೋಡಿ ಇಂಡೀಕರಣ ಮಾಡಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ನಾಗರೀಕರು ಅಥವಾ ಭೂಮಿ ಆಪರೇಟರ್ ಈ ಲಿಂಕ್ ಅನ್ನು ಬಳಸಿ ಅರ್ಜಿಯನ್ನು ದಾಖಲಿಸಬಹುದು ಎಂದು ಸುತ್ತೋಲೆ ಹೇಳಿದೆ.
ಈ ಲಿಂಕ್ (https://landrecords.karnataka.gov.in/Service145/) ಕಾರ್ಯ ವಿಧಾನದ ಕುರಿತು ಸಹ ಸುತ್ತೋಲೆಯಲ್ಲಿ ಮಾಹಿತಿ ನೀಡಲಾಗಿದೆ. ಒಬ್ಬರಿಗಿಂತ ಹೆಚ್ಚು ಆರ್ಟಿಸಿದಾರರ ಹೆಸರು ಒಂದೇ ಸರ್ವೆ ನಂಬರ್ನಲ್ಲಿದ್ದರೆ ಅದನ್ನು ಬಹುಮಾಲೀಕತ್ವದ ಆರ್ಟಿಸಿ ಎನ್ನಲಾಗುತ್ತದೆ. ಒಂದು ಸರ್ವೇ ನಂಬರ್ ಎರಡಕ್ಕಿಂತ ಹೆಚ್ಚು ಜನರ ಹೆಸರಿದ್ದರೆ ಅದನ್ನು ಪ್ರತ್ಯೇಕವಾಗಿ ಹೆಸರು ಮಾಡುವುದಕ್ಕೆ ಪೋಡಿ ಎನ್ನುತ್ತಾರೆ.
ಕರ್ನಾಟಕದಲ್ಲಿ ಕೃಷಿ ಭೂಮಿ ಖರೀದಿ ಮತ್ತು ಮಾರಾಟಕ್ಕೆ ಪೋಡಿ ಮಾಡುವುದು ಕಡ್ಡಾಯವಾಗಿದೆ. ಪೋಡಿ ಮಾಡುವುದರಿಂದ ಏಕ ಮಾಲೀಕತ್ವವಿದ್ದರೆ ಕಿಸಾನ್ ಕ್ರೆಡಿಟ್ ಕಾರ್ಡ್, ಬೆಳೆ ಸಾಲ ಸಿಗುತ್ತದೆ. ಭೂಮಿ ಮಾಲೀಕತ್ವದ ಖಾತ್ರಿ ಸಹ ಅವರಿಗೆ ಸಿಗುತ್ತದೆ. ಭೂ ಆಕ್ರಮಣ ತಪ್ಪಿಸಬಹುದು. ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ.
ಕಾರ್ಯ ವಿಧಾನದ ಮಾಹಿತಿ; ಪೋಡಿ ಇಂಡೀಕರಣ ಮಾಡಲು ತಂತ್ರಾಂಶದಲ್ಲಿ ಅರ್ಜಿದಾರನು ತನ್ನ ಮೊಬೈಲ್ ನಂಬರ್ ದಾಖಲಿಸಿ ಒಟಿಪಿ ಮೂಲಕ ಲಾಗಿನ್ ಆಗಬೇಕು. ತಂತ್ರಾಂಶದಲ್ಲಿ ಲಾಗಿನ್ ಆದ ನಂತರ ಅರ್ಜಿದಾರನು ತನ್ನ ಆಧಾರ್ ekyc ಯನ್ನು ನೀಡಬೇಕು. ನಂತರ ಮೂಲ ಸರ್ವೇ ನಂಬರ್ ಅನ್ನು ಭೂಮಿಯಿಂದ ಆಯ್ಕೆ ಮಾಡಬೇಕು. ಪೋಡಿ ಪ್ರಕ್ರಿಯೆಗೆ ಒಳಪಡುವ ಹಕ್ಕುದಾರನನ್ನು ಆಯ್ಕೆ ಮಾಡಬೇಕು, ಈ ಹಂತದಲ್ಲಿ ಆಧಾರ್ ನಲ್ಲಿರುವ ಹೆಸರು ಹಾಗೂ ಪಹಣಿಯಲ್ಲಿರುವ ಹೆಸರು ಹೊಂದಾಣಿಕೆಯಾಗಬೇಕು.
ನಂತರ ಹೊಸ ಸರ್ವೇ ನಂಬರ್ ಅನ್ನು ದಾಖಲಿಸಬೇಕು. ಡಿಡಿಎಲ್ ಆರ್ ಆದೇಶ ಸಂಖ್ಯೆ ಮತ್ತು ದಿನಾಂಕ ದಾಖಲಿಸಬೇಕು. ಹೊಸ ಸರ್ವೇ ನಂಬರ್ಗೆ ಸಂಬಂಧಿಸಿದ ಟಿಪ್ಪಣಿ ಹಾಗೂ ಪಕ್ಕಾ ಪ್ರತಿಯನ್ನು ಅಪ್ಲೋಡ್ ಮಾಡಬೇಕು. ದಿನಾಂಕ 1/1/2018 ರೊಳಗೆ ಡಿಡಿಎಲ್ಆರ್ ಹೊರಡಿಸಿರುವ ಆದೇಶಗಳಿಗೆ ಕಡ್ಡಾಯವಾಗಿ ಹೊಸ ಸರ್ವೇ ನಂಬರ್ ವಿವರ ಆಕಾರ ಬಂದ್ ಡೇಟಾ ಬೇಸ್ನಲ್ಲಿ ಲಭ್ಯವಿರಬೇಕು. ನಂತರ ಅರ್ಜಿಯನ್ನು ಉಳಿಸಿ ಮುಂದಿನ ಹಂತಕ್ಕೆ ಸಲ್ಲಿಸಬೇಕು.
ಅರ್ಜಿಯು ಮೋಜಿಣಿ ತಂತ್ರಾಂಶದಲ್ಲಿ ತಾಲ್ಲೂಕು ಆಪರೇಟರ್ ಲಾಗಿನ್ನಲ್ಲಿ ಲಭ್ಯವಿರುವುದು. ತಾಲ್ಲೂಕು ಆಪರೇಟರ್ ಅನುಮೋದನೆ ನಂತರ ಸೂಪರ್ ವೈಸರ್ ಲಾಗಿನ್ನಲ್ಲಿ ಲಭ್ಯವಿರುವುದು. ಸೂಪರ್ ವೈಸರ್ ಅನುಮೋದನೆ ನಂತರ ಎಡಿಎಲ್ಆರ್ ಲಾಗಿನ್ನಲ್ಲಿ ಲಭ್ಯವಿರುವುದು. ಎಡಿಎಲ್ಆರ್ ಅನುಮೋದನೆ ನಂತರ ಡಿಡಿಎಲ್ಆರ್ ಲಾಗಿನ್ನಲ್ಲಿ ಲಭ್ಯವಿರುವುದು. ಡಿಡಿಎಲ್ಆರ್ ಅನುಮೋದನೆ ನಂತರ ಅರ್ಜಿಯು ಪಹಣಿ ಇಂಡೀಕರಣಕ್ಕಾಗಿ ಭೂಮಿಗೆ ರವಾನೆಯಾಗುತ್ತದೆ.
ಸರ್ಕಾರಿ ಜಮೀನಿನಲ್ಲಿ ಮಂಜೂರಾದ ಜಮೀನುಗಳಿಗೆ ಸಂಬಂಧಿಸಿದಂತೆ, ನಿಯಮಾನುಸಾರ ದಾಖಲೆಗಳನ್ನು ಪರಿಶೀಲಿಸಿಕೊಂಡು, ಸದರಿ ಕಾರ್ಯವಿಧಾನ ಅನುಸರಿಸಿ ಕಾನೂನುರೀತ್ಯಾ ಪೋಡಿ ಇಂಡೀಕರಣ ಮಾಡುವಂತೆ ತಮ್ಮ ಅಧೀನದಲ್ಲಿ ಬರುವ ಎಲ್ಲಾ ಡಿಡಿಎಲ್ಆರ್, ಎಡಿಎಲ್ಆರ್, ಉಪವಿಭಾಗಾಧಿಕಾರಿಗಳು ಮತ್ತು ತಾಲ್ಲೂಕು ತಹಶೀಲ್ದಾರರಿಗೆ ಸೂಚಿಸುವಂತೆ ಹಾಗೂ ಸದರಿ ತಂತ್ರಾಂಶದಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅವಕಾಶವಿರುವ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.












Click it and Unblock the Notifications