ಕರ್ನಾಟಕಕ್ಕೆ 'ಬಸವ ನಾಡು' ಎಂದು ಮರುನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ: ಪ್ರಭಾವಿ ಲಿಂಗಾಯತ ಸಚಿವರ ಹೊಸ ಬೇಡಿಕೆ
ವಿಜಯಪುರ, ಅಕ್ಟೋಬರ್ 28: 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರ (ಬಸವಣ್ಣ) ಅವರ ಹೆಸರನ್ನು ವಿಜಯಪುರ ಜಿಲ್ಲೆಗೆ ಮರುನಾಮಕರಣ ಮಾಡಬೇಕೆಂಬ ಬೇಡಿಕೆ ಇದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಶುಕ್ರವಾರ ಹೇಳಿದ್ದಾರೆ.
ಕರ್ನಾಟಕ ರಾಜ್ಯವನ್ನು 'ಬಸವ ನಾಡು' ಎಂದು ಮರುನಾಮಕರಣ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಪ್ರತಿಪಾದನೆ ಮಾಡಿದ್ದಾರೆ.

ರಾಮನಗರ ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಲು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರಸ್ತಾವನೆ ಸಲ್ಲಿಸಿದ ಕೆಲವೇ ದಿನಗಳಲ್ಲಿ ಎಂಬಿ ಪಾಟೀಲ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಹೊಯ್ಸಳರ ಕಾಲದಲ್ಲಿ ಈ ಪ್ರದೇಶವನ್ನು ವಿಜಯಪುರ ಎಂದು ಕರೆಯಲಾಗುತ್ತಿತ್ತು, ನಂತರ ಆದಿಲ್ ಶಾಹಿ ವಂಶಸ್ಥರ ಆಳ್ವಿಕೆಯಲ್ಲಿ ಬಿಜಾಪುರವಾಗಿ ಮಾರ್ಪಟ್ಟಿತು. ಈ ಹೆಸರನ್ನು ಮತ್ತೆ ವಿಜಯಪುರ ಎಂದು ಬದಲಾಯಿಸಲಾಯಿತು. ಈಗ ಇದನ್ನು ಬಸವೇಶ್ವರ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕೆಂದು ಅನೇಕರು ಒತ್ತಾಯಿಸಿದ್ದಾರೆ ಎಂಬುದಾಗಿ ಪಾಟೀಲ್ ತಿಳಿಸಿದ್ದಾರೆ.

ಈ ಜಿಲ್ಲೆ ಬಸವಣ್ಣನವರ ಜನ್ಮಸ್ಥಳವಾಗಿರುವುದರಿಂದ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಎಂಬಿ ಪಾಟೀಲ್ ಅವರು ವಿಜಯಪುರ ಜಿಲ್ಲೆಯ ಬಬಲೇಶ್ವರ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.
ಮರುನಾಮಕರಣ ವಿಚಾರದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಹೆಸರು ಬದಲಿಸಬಹುದು. ಆದರೆ, ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಬಿಜಾಪುರ ವಿಜಯಪುರ ಆಯಿತು. ಬಸವೇಶ್ವರ ಆಗಬೇಕಾದರೆ ಹಲವೆಡೆ ನಾಮಕರಣ ಬದಲಾವಣೆ ಮಾಡಬೇಕಾಗಿರುವುದರಿಂದ ಸ್ವಲ್ಪ ತೊಂದರೆಯಾಗುತ್ತದೆ. ಅಂತಹ ಕಳವಳಗಳನ್ನು ವ್ಯಕ್ತಪಡಿಸಲಾಗಿದೆ. ನಾನು ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ ಮತ್ತು ಸಾಧಕ-ಬಾಧಕಗಳನ್ನು ಪರಿಗಣಿಸಿದ ನಂತರ ನಾವು ನಿರ್ಧರಿಸುತ್ತೇವೆ' ಎಂದು ತಿಳಿಸಿದ್ದಾರೆ.
2014 ರಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದ 12 ನಗರಗಳ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರವು ಅನುಮೋದನೆ ನೀಡಿತು. ಆಗ ಬಿಜಾಪುರವನ್ನು ವಿಜಯಪುರ ಎಂದು ಕರೆಯಲಾಯಿತು. ಕರ್ನಾಟಕವನ್ನು 'ಬಸವ ನಾಡು' ಎಂದು ಮರುನಾಮಕರಣ ಮಾಡಬಹುದು. ಅದರಲ್ಲಿ ಯಾವುದೇ ತಪ್ಪಿಲ್ಲ. ಇದು ನನ್ನ ಅಭಿಪ್ರಾಯವಾಗಿದೆ ಎಂದು ಪಾಟೀಲ್ ಹೇಳಿದ್ದಾರೆ.
'ಇದು ಸಹಜ, ಅದರಲ್ಲಿ ತಪ್ಪೇನಿದೆ? ಜಗತ್ತಿನ ಮೊದಲ ಸಂಸತ್ತು 'ಅನುಭವ ಮಂಟಪ' ಕೊಟ್ಟವರು ಬಸವಣ್ಣ. ಸಾಮಾಜಿಕ ಪರಿಕಲ್ಪನೆ ಕೊಟ್ಟವರು ಬಸವಣ್ಣ. ನಮ್ಮ ನಾಡು 'ಬಸವ ನಾಡು' ಆಗಬೇಕು. ನಮ್ಮದು ಬಸವ ಸಂಸ್ಕೃತಿ ಆಗಬೇಕು ಎಂದು ಪಾಟೀಲ್ ಪ್ರತಿಪಾದಿಸಿದ್ದಾರೆ.
ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ಐಕಾನ್ ಅಥವಾ ನಾಯಕ ಎಂದು ಘೋಷಿಸಲು ಬೇಡಿಕೆ ಇದೆ ಎಂದು ಅವರು ಹೇಳಿದ್ದಾರೆ.
ಇಡೀ ಮೆಟ್ರೊ ರೈಲು ಜಾಲಕ್ಕೆ (ಬೆಂಗಳೂರಿನಲ್ಲಿ) ಬಸವೇಶ್ವರರ ಹೆಸರಿಡಬೇಕು ಎಂಬ ಬೇಡಿಕೆಗಳೂ ಇವೆ. ಅದೇ ರೀತಿ ವಿಜಯಪುರ ವಿಮಾನ ನಿಲ್ದಾಣಕ್ಕೂ ಅವರ ಹೆಸರಿಡಬೇಕು. ಮುಖ್ಯಮಂತ್ರಿ ಜತೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಲಿಂಗಾಯತರು ಕರ್ನಾಟಕದ ಪ್ರಬಲ ಸಮುದಾಯಕ್ಕೆ ಸೇರಿದವರು. ರಾಜ್ಯದ ಜನಸಂಖ್ಯೆಯ ಸುಮಾರು 17 ಪ್ರತಿಶತವನ್ನು ಹೊಂದಿದ್ದಾರೆ. ಬಸವಣ್ಣನವರು ಲಿಂಗಾಯತ ಧರ್ಮವನ್ನು ಹುಟ್ಟುಹಾಕಿದರು ಎಂದು ಲಿಂಗಾಯತರು ಪ್ರತಿಪಾದಿಸುತ್ತಾರೆ. ಈ ಸಮುದಾಯ ರಾಜ್ಯಾದ್ಯಂತ ಹರಡಿಕೊಂಡಿದ್ದರೂ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಎಂಬಿ ಪಾಟೀಲ್ ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರಬಲ ನಾಯಕರಾಗಿದ್ದಾರೆ.












Click it and Unblock the Notifications