ಕಾವೇರಿ ನದಿ ಪಾಲು : ಕರ್ನಾಟಕಕ್ಕೆ ಸಿಕ್ಕ ಪಾಲು ಇನ್ನು ಹೆಚ್ಚಳ!
ಬೆಂಗಳೂರು, ಮಾರ್ಚ್ 21: ಕನ್ನಡಿಗರ ಜೀವನದಿ ಕಾವೇರಿ ಕನ್ನಡಿಗರ ಪಾಲಿಗೆ ಹೆಚ್ಚಾಗಿ ಒಲಿದಿದ್ದಾಳೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ನ್ಯಾಯಪೀಠ ನೀಡಿದ್ದ ತೀರ್ಪಿನಂತೆ ಸಿಗಬೇಕಿರುವ ಪಾಲು ಈಗ ಇನ್ನಷ್ಟು ಹೆಚ್ಚಳವಾಗಿದೆ. 284.75 ಟಿಎಂಸಿ ಅಡಿ ನೀರು ಬದಲಿಗೆ 350.65 ಟಿಎಂಸಿ ಅಡಿ ನೀರು ಕರ್ನಾಟಕಕ್ಕೆ ದಕ್ಕಲಿದೆ.
ನದಿ ನೀರಿನ ಹಂಚಿಕೆಯ ಕುರಿತು 2007 ರ ಕಾವೇರಿ ನ್ಯಾಯಾಧಿಕರಣದ ಐ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿಗೆ ಸಂಬಂಧಿಸಿದಂತೆ ಅಂತಿಮ ತೀರ್ಪು ಫೆಬ್ರವರಿ 17ರಂದು ಬಂದಿತ್ತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾ.ಅಮಿತ್ ರಾಯ್, ನ್ಯಾ.ಎ.ಎಂ.ಖಾನ್ವಿಲ್ಕರ್ ನೇತೃತ್ವದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ನ್ಯಾ ದೀಪಕ್ ಮಿಶ್ರಾ ಅವರು ನೀಡಿದ ಅಂತಿಮ ತೀರ್ಪಿನ ಅನ್ವಯ ಕರ್ನಾಟಕಕ್ಕೆ 270ರ ಬದಲಿಗೆ 284 ಟಿಎಂಸಿ ಆಡಿ ನೀರು ಸಿಗಬೇಕು ಎಂಬ ತೀರ್ಪು ಬಂದಿತ್ತು.
ಜತೆಗೆ ತಮಿಳುನಾಡಿನ ಪಾಲು 177.25 ಟಿಎಂಸಿ ಅಡಿ ಎಂದು ನಿರ್ಧರಿಸಲಾಗಿತ್ತು.

ವಾರ್ಷಿಕ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ 14.5 ಟಿಎಂಸಿ ಹೆಚ್ಚುವರಿ ನೀರು ಲಭ್ಯವಾಗಲಿದ್ದು, ಅಗತ್ಯಕ್ಕೆ ತಕ್ಕಂತೆ ಕರ್ನಾಟಕ ತನ್ನ ನೀರಾವರಿ ಸಂಪತ್ತನ್ನು ವಿಸ್ತರಿಸಿಕೊಳ್ಳಬಹುದು. ಹೀಗಾಗಿ ಅಣೆಕಟ್ಟು ನಿರ್ಮಾಣದ ಕರ್ನಾಟಕದ ಪ್ರಸ್ತಾವನೆಗೆ ಬಲ ಸಿಕ್ಕಿದೆ.
ಬೆಂಗಳೂರಿನ ಕುಡಿಯುವ ನೀರಿನ ದಾಹಕ್ಕೆ ಬೆಲೆ ನೀಡಿದ್ದು, ಪುನರ್ ಬಳಕೆ ಮೂಲಕ 26.9 ಟಿಎಂಸಿ ಅಡಿ ಹಾಗೂ 39 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ಮೇಕೆದಾಟು ಹಾಗೂ ಶಿವಸಮುದ್ರಕ್ಕೆ ಹರಿಸಿ, ನೀರಾವರಿ ಯೋಜನೆಗಳಿಗೆ ಬಳಸಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಉಲ್ಲೇಖವಿಲ್ಲದಿರುವುದರಿಂದ ಜಲ ವಿದ್ಯುತ್ ಯೋಜನೆಗೆ ವಿನಿಯೋಗಿಸಿದರೆ, ಹೆಚ್ಚುವರಿ ನೀರು ಕರ್ನಾಟಕಕ್ಕೆ ಲಭ್ಯವಾಗಲಿದೆ.












Click it and Unblock the Notifications