ವಿವಿಧ ಸಮಿತಿಗಳ ಪುನರ್ ರಚನೆ : ಎಚ್ಡಿಕೆಗೆ ದಿನೇಶ್ ಗುಂಡೂರಾವ್ ಪತ್ರ
ಬೆಂಗಳೂರು, ಅಕ್ಟೋಬರ್ 18 : ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈಗ ಇರುವ ಹಲವು ಸಮಿತಿಗಳನ್ನು ಹೊಸ ಸರ್ಕಾರ ಪುನರ್ ರಚನೆ ಮಾಡಲಿದೆ. ಪುನರ್ ರಚನೆ ವೇಳೆ ಕಾಂಗ್ರೆಸ್ ಸದಸ್ಯರಿಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷರು ಈ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಬೆಂಬಲವನ್ನು ನೀಡುವುದರ ಜೊತೆಗೆ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಈಗ ಇರುವ ಅಕ್ರಮ-ಸಕ್ರಮ ಸಮಿತಿ, ಭೂ ನ್ಯಾಯಮಂಡಳಿ ಸಮಿತಿ ಸೇರಿದಂತೆ ಇತರ ಸಮಿತಿಗಳನ್ನು ಪುನರ್ ರಚನೆ ಮಾಡಬೇಕಿದೆ. ಸಮಿತಿ ಪುನರ್ ರಚನೆ ಮಾಡುವಾಗ ಎರಡೂ ಪಕ್ಷಗಳ ಸದಸ್ಯರಿಗೆ ಸಮಾನ ಅವಕಾಶಗಳು ಸಿಗಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿಗಳು ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ತಮ್ಮ ಮಂತ್ರಿ ಮಂಡಲದ ಎಲ್ಲಾ ಸದಸ್ಯರಿಗೆ ಈ ಕುರಿತು ಸೂಚನೆಗಳನ್ನು ನೀಡಬೇಕು ಎಂದು ದಿನೇಶ್ ಗುಂಡೂರಾವ್ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಯಾವ ಅನುಪಾತದಲ್ಲಿ ನೇಮಕ
ಕಾಂಗ್ರೆಸ್ ಶಾಸಕರು ಇರುವಂತಹ ಕ್ಷೇತ್ರ/ತಾಲೂಕಿನಲ್ಲಿ ಸಮಿತಿಗಳನ್ನು ರಚನೆ ಮಾಡುವಾಗ 2:1ರ ಅನುಪಾತದಲ್ಲಿ ಕಾಂಗ್ರೆಸ್-ಜೆಡಿಎಸ್ ಸದಸ್ಯರನ್ನು ನೇಮಿಸಬೇಕು ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ತಿಳಿಸಿದ್ದಾರೆ. ಎರಡೂ ಪಕ್ಷದ ಮುಖಂಡರಿಗೆ ಸಹಾಯಕವಾಗಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಜೆಡಿಎಸ್ ಶಾಸಕರು ಇರುವ ಕ್ಷೇತ್ರ
ಜೆಡಿಎಸ್ ಶಾಸಕರು ಇರುವ ಕ್ಷೇತ್ರದಲ್ಲಿ 2:1 ಅನುಪಾತದಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರು ಇರುವಂತೆ ಸಮಿತಿಯನ್ನು ರಚಿಸಬೇಕು. ಒಂದು ವೇಳೆ ಬಿಜೆಪಿ ಶಾಸಕರಿದ್ದು, ಕಾಂಗ್ರೆಸ್ 2ನೇ ಸ್ಥಾನದಲ್ಲಿದ್ದರೆ 2:1ರ ಅನುಪಾತದಲ್ಲಿ ನೇಮಕ ಮಾಡಬೇಕು ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.

ಜೆಡಿಎಸ್ 2ನೇ ಸ್ಥಾನದಲ್ಲಿದ್ದರೆ
ಬಿಜೆಪಿ ಶಾಸಕರಿರುವ ಕ್ಷೇತ್ರದಲ್ಲಿ ಜೆಡಿಎಸ್ 2ನೇ ಸ್ಥಾನದಲ್ಲಿದ್ದರೆ 2:1 ಅನುಪಾತದಲ್ಲಿ ಜೆಡಿಎಸ್ ಕಾಂಗ್ರೆಸ್ ಶಾಸಕರು ಇರುವಂತೆ ಸಮಿತಿ ರಚನೆ ಮಾಡಬೇಕು. ಎರಡೂ ಪಕ್ಷದ ಕಾರ್ಯಕರ್ತರಿಗೆ ಹೆಚ್ಚಿನ ಬೆಂಬಲ ನೀಡುವ ಜೊತೆಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ದಿನೇಶ್ ಗುಂಡೂರಾವ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇಲಾಖೆಯ ಸಮಿತಿಗಳು
ದಿನೇಶ್ ಗುಂಡೂರಾವ್ ಅವರು ಪತ್ರದಲ್ಲಿ ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಬೇಕು. ಎಲ್ಲಾ ಸಚಿವರಿಗೆ ಸೂಕ್ತ ನಿರ್ದೇಶವನ್ನು ನೀಡಬೇಕು. ತಮ್ಮ ಇಲಾಖೆಗೆ ಸಂಬಂಧಪಟ್ಟಂತೆ, ಸಾಧ್ಯವಾದಷ್ಟು ಎಲ್ಲಾ ಕ್ಷೇತ್ರಗಳಲ್ಲಿ/ತಾಲೂಕುಗಳಲ್ಲಿ/ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸದಸ್ಯರು ಇರುವಂತೆ ಜಾಗೃತೆ ವಹಿಸಿ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.












Click it and Unblock the Notifications