ಯುಪಿ ಮಾಡೆಲ್ ಬೇಡ: ಶುರುವಾಯ್ತು ಕಾಂಗ್ರೆಸ್ನಿಂದ ಮತ್ತೊಂದು ಅಭಿಯಾನ- ಅಂಕಿಅಂಶ ನೀಡಿ ಯೋಗಿಗೆ ತರಾಟೆ
ಬೆಂಗಳೂರು, ಏಪ್ರಿಲ್ 26: ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಉತ್ತರ ಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದ್ದಾರೆ. ಕರ್ನಾಟಕದ ಮಂಡ್ಯದಲ್ಲಿ ಅವರು ಚುನಾವಣಾ ಪ್ರಚಾರ ಕೈಗೊಂಡ ವೇಳೆ ಈ ಮಾತುಗಳನ್ನು ಆಡಿದ್ದಾರೆ. ಇದು ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ 'ಯುಪಿ ಮಾಡೆಲ್ ಬೇಡ' ಎನ್ನುವ ಟ್ವಿಟರ್ ಅಭಿಯಾನವನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.
'ಕ್ರೈಮ್ ಕ್ಯಾಪಿಟಲ್' ಎಂದೇ ಕುಖ್ಯಾತಿ ಪಡೆದಿರುವ ರಾಜ್ಯದ ಮುಖ್ಯಮಂತ್ರಿ ಸರ್ವಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಕರ್ನಾಟಕಕ್ಕೆ ಬಂದು ಬಡಾಯಿ ಕೊಚ್ಚಿಕೊಳ್ಳುವುದಕ್ಕಿಂತ ಹಾಸ್ಯ ಬೇರೊಂದಿಲ್ಲ. 3 ವರ್ಷದಲ್ಲಿ 11 ಸಾವಿರ ಹತ್ಯೆಗಳು ನಡೆದಿದ್ದು ಕಾನೂನು ಸುವ್ಯವಸ್ಥೆ ಅಧೋಗತಿಗೆ ಇಳಿದಿದ್ದು ತಮ್ಮ ಅಸಾಮರ್ಥ್ಯದಿಂದ ಅಲ್ಲವೇ?' ಎಂದು ಕೆಪಿಸಿಸಿ ಕೇಳಿದೆ.

'ಉತ್ತರ ಪ್ರದೇಶವೆಂದರೆ "ಕ್ರಿಮಿನಲ್ಗಳ ಸ್ವರ್ಗ" ಎಂದೇ ಜನಜನಿತವಾಗಿದೆ. ಹಾಡಹಗಲೇ ಯಾವುದೇ ಭಯ ಇಲ್ಲದೆ ಕ್ರಿಮಿನಲ್ ಚಟುವಟಿಕೆಗಳು ನಡೆಯುತ್ತವೆ. ಪೊಲೀಸರ ಎದುರಲ್ಲೇ ಹತ್ಯೆಗಳು ನಡೆಯುತ್ತವೆ. ಯೋಗಿ ಆದಿತ್ಯನಾಥ್ ಅವರೇ, ನಿಮ್ಮ ಪ್ರವಚನ ಕನ್ನಡಿಗರಿಗೆ ಬೇಕಿಲ್ಲ, ನಿಮ್ಮ ತಟ್ಟೆಯಲ್ಲಿನ ಹೆಗ್ಗಣವನ್ನು ನೋಡಿಕೊಳ್ಳಿ. ನಮಗೆ ನಿಮ್ಮ ಯುಪಿ ಮಾಡೆಲ್ ಬೇಡ' ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ.
'ಮಹಿಳೆಯರ ಮೃಗಗಳಂತೆ ಮುಗಿಬೀಳುವ ಅತ್ಯಂತ ಕ್ರೂರ ಪರಿಸ್ಥಿತಿ ಇರುವ ಯುಪಿ ಸಿಎಂ ಕರ್ನಾಟಕದಲ್ಲಿ ಡೋಂಗಿ ಭಾಷಣ ಕುಟ್ಟುವ ಅಗತ್ಯವಿಲ್ಲ. ಅತ್ಯಾಚಾರ ಸಂತ್ರಸ್ತೆಯ ಕುಟುಂಬದ ಗುಡಿಸಲಿಗೆ ಬೆಂಕಿ ಹಚ್ಚಿ, ಎಳೆ ಮಕ್ಕಳನ್ನು ಬೇಯಿಸಿದ ಘಟನೆ ಕಣ್ಣ ಮುಂದಿರುವಾಗ ಯಾವ ನೈತಿಕತೆಯಲ್ಲಿ ಯುಪಿ ಮಾಡೆಲ್ ಜಪಿಸುತ್ತೀರಿ? ನಮಗೆ ಇಂತ ಕ್ರೂರ ಯುಪಿ ಮಾಡೆಲ್ ಬೇಡ' ಎಂದು ತಿಳಿಸಿದೆ.
'ಕೋವಿಡ್ನಿಂದ ತನ್ನ ರಾಜ್ಯದ ಜನರನ್ನು ರಕ್ಷಿಸದೆ ಗಂಗೆಯಲ್ಲಿ ತೇಲಿಸಿದ ಯೋಗಿ ಆದಿತ್ಯನಾಥ್ ಅವರು ಆಕ್ಸಿಜನ್ ನೀಡದೆ ಕರ್ನಾಟಕದ ಜನರನ್ನು ಕೊಂದ ಬಿಜೆಪಿಗರಿಗೆ ಆದರ್ಶ ಎನಿಸಿರಬಹುದು. ಆದರೆ ಕನ್ನಡಿಗರಿಗೆ ಇಂತಹ ದುರಂತದ ಯುಪಿ ಮಾಡೆಲ್ ಬೇಡ. ದೇಶಕ್ಕೆ ಕರ್ನಾಟಕವೇ ಮಾಡೆಲ್ ಎನ್ನುವಂತಹ ಆಡಳಿತವನ್ನು ಕಾಂಗ್ರೆಸ್ ನೀಡಿದೆ, ಮುಂದೆಯೂ ನೀಡಲಿದೆ' ಎಂದು ಹೇಳಿದೆ.
'ದೇಶದ 100 ಅಪರಾಧ ಪ್ರಕರಣಗಳಲ್ಲಿ ಅತೀ ಹೆಚ್ಚು ಪ್ರಕರಣಗಳು ಉತ್ತರ ಪ್ರದೇಶದಲ್ಲಿ ನಡೆಯುತ್ತವೆ. ಅಪರಾಧದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವಾದ ಯುಪಿಯ ಮುಖ್ಯಮಂತ್ರಿ ಕರ್ನಾಟಕಕ್ಕೆ ಬಂದು ಕಾನೂನು ಸುವ್ಯವಸ್ಥೆ ಹಾಗೂ ಅಪರಾಧದ ಬಗ್ಗೆ ಉಪದೇಶ ಕೊಡುವುದು ಪರಮ ಹಾಸ್ಯ. ಮೊದಲು ತಮ್ಮ ರಾಜ್ಯದ ಮಕ್ಕಳನ್ನು ರಕ್ಷಿಸಿಕೊಳ್ಳಲಿ' ಎಂದು ಕೆಪಿಸಿಸಿ ಟ್ವೀಟ್ ಮಾಡಿದೆ.












Click it and Unblock the Notifications