ಕರ್ನಾಟಕ ಬಂದ್; ಮಹಿಷಿ ವರದಿ ಜಾರಿ ಬಗ್ಗೆ ಯಡಿಯೂರಪ್ಪ ಏನಂದ್ರು?
ಬೆಂಗಳೂರು, ಫೆಬ್ರವರಿ 13: ಮಹಿಷಿ ವರದಿಗೆ ಆಗ್ರಹಿಸಿ ವಿವಿಧ ಕನ್ನಡ ಸಂಘಟನೆಗಳು ಗುರುವಾರ ಕರೆ ನೀಡಿದ್ದ ಬಂದ್ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಯಾವುದೇ ಸಂಘಟನೆಯಿಲ್ಲದೇ ತರಾತುರಿಯಲ್ಲಿ ಬಂದ್ಗೆ ಕರೆ ನೀಡಿದ್ದ ಸಂಘಟನೆಗಳಿಗೆ ಮುಖಭಂಗವಾದಂತಾಗಿದೆ. ಬೆಂಗಳೂರಿನಲ್ಲಿ ಗುರುವಾರ ಬೆಳಿಗ್ಗೆ ಸ್ವಲ್ಪ ಮಟ್ಟಿಗೆ ಜನಸಂಚಾರ ವಿರಳ ಎನ್ನುವುದನ್ನು ಬಿಟ್ಟರೇ ಎಲ್ಲವೂ ಎಂದಿನಂತೆ ಜನಜೀವನ ಕಂಡು ಬಂತು. ಬಂದ್ ನಡೆಸುತ್ತೇವೆ ಎಂದು ಹೇಳಿದ್ದ ಆಟೋ, ಓಲಾ ಊಬರ್ ಚಾಲಕರೂ ಕೂಡ ಬಂದ್ ನಡೆಸಲು ಉತ್ಸುಕತೆ ತೋರಿಸಲಿಲ್ಲ. ಸಾರಿಗೆ, ಹೋಟೆಲ್, ಅಂಗಡಿ, ಮುಂಗಟ್ಟುಗಳು, ಆಸ್ಪತ್ರೆ ಎಂದಿನಂತೆ ನಡೆದವು.
ಕೆಲ ಸಂಘಟನೆಗಳು ಸಿಟಿ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕು ಎಂದು ಒತ್ತಾಯಿಸಿದರು.

ಭರವಸೆ ನೀಡಿದ ಸಿಎಂ ಯಡಿಯೂರಪ್ಪ
ಸರೋಜಿನಿ ಮಹಿಷಿ ವರದಿ ಜಾರಿ ಸಂಬಂಧ ಚರ್ಚೆ ಮಾಡಿ, ಒಂದು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಇತಿಮಿತಿಯಲ್ಲಿ ಏನೇನು ಬದಲಾವಣೆ ತರಬೇಕು ಅಂತ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಏನೇನು ಜಾರಿಗೆ ತರಬೇಕು ಅಂತ ವಿಪಕ್ಷಗಳ ಜೊತೆಗೂ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.

ಟ್ವಿಟ್ಟರ್ನಲ್ಲಿ ಟ್ರೆಂಡಿಂಗ್
ಟ್ವಿಟ್ಟರ್ನಲ್ಲಿ ಕರ್ನಾಟಕ ಬಂದ್ ಟ್ರೆಂಡಿಂಗ್ನಲ್ಲಿದೆ. #KarnatakaBandh ಬಳಸಿ, ಜನ ಟ್ವೀಟ್ ಮಾಡುತ್ತಿದ್ದಾರೆ. ಬಹಳಷ್ಟು ಜನ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿದ್ದಾರೆ. ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಮ್ಮ ಸರ್ಕಾರ ಬದ್ದವಿದೆ
ಕನ್ನಡಿಗರಿಗೆ ಉದ್ಯೋಗ ನೀಡಲು ರಾಜ್ಯ ಸರ್ಕಾರ ಬದ್ದವಿದ್ದು, ಕನ್ನಡ ಸಂಘಟನೆಗಳು ಬಂದ್ ನಡೆಸದೇ ಸರ್ಕಾರದ ಜೊತೆ ಮಾತುಕತೆ ನಡೆಸಲಿ, ಅವರ ಬೇಡಿಕೆಗಳನ್ನು ತಿಳಿಸಲಿ. ಈ ಕುರಿತು ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಗದಗನಲ್ಲಿ ಹೇಳಿದ್ದಾರೆ.

ಹೋರಾಟಗಾರರಲ್ಲಿ ಒಡಕು
ಗುರುವಾರದ ಕರ್ನಾಟಕ ಬಂದ್ ಜನರಲ್ಲಿ ಅತಿ ಹೆಚ್ಚು ಗೊಂದಲಗಳನ್ನು ಹುಟ್ಟಿ ಹಾಕಿತ್ತು. ಇದಕ್ಕೆ ಕಾರಣ ಸಂಘಟನೆಗಳಲ್ಲಿಯೇ ಬಂದ್ ಬಗ್ಗೆ ಬಿರುಕು ಮೂಡಿತ್ತು. ಕೆಲವರು ಬಂದ್ ಮಾಡುತ್ತೇವೆ ಎಂದರೆ, ಇನ್ನೂ ಕೆಲ ಹೋರಾಟಗಾರರು ಬಂದ್ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿದ್ದರು.












Click it and Unblock the Notifications