ಬಸ್ ಪ್ರಯಾಣ ದರ ಕಡಿಮೆ ಮಾಡೋಲ್ಲ : ರೆಡ್ಡಿ
ಬೆಂಗಳೂರು, ಜನವರಿ 19 : 'ಡೀಸೆಲ್ ದರ ಹಲವು ಬಾರಿ ಕಡಿಮೆಯಾದರೂ ಕೆಎಸ್ಆರ್ಟಿಸಿ ಬಸ್ಸುಗಳ ಪ್ರಯಾಣ ದರವನ್ನು ಕಡಿಮೆ ಮಾಡುವುದಿಲ್ಲ. ಅಂತಹ ಪ್ರಸ್ತಾವನೆಯೂ ಸರ್ಕಾರದ ಮುಂದಿಲ್ಲ' ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿದ ಅವರು, 'ಕಳೆದ ಬಾರಿ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಏರಿಕೆ ಮಾಡಿದ ಬಳಿಕ ಡೀಸೆಲ್ ದರ ಕಡಿಮೆ ಆಗಿರುವುದು ನಿಜ. ಆದರೆ, ಈಗ ಬಸ್ಸುಗಳ ಪ್ರಯಾಣ ದರವನ್ನು ಇಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ' ಎಂದು ಹೇಳಿದರು. [KSRTC ನೇಮಕಾತಿ 2016 : ಅರ್ಜಿ ಸಲ್ಲಿಸುವುದು ಹೇಗೆ?]

'ಬಸ್ ಪ್ರಯಾಣದರ ಇಳಿಕೆ ಮಾಡುವಂತೆ ಯಾವುದೇ ಸಾರಿಗೆ ನಿಗಮಗಳಿಂದ ಪ್ರಸ್ತಾಪ ಬಂದಿಲ್ಲ. ಹಿಂದೆ ದರ ಹೆಚ್ಚಿಸಿದ ಬಳಿಕ ಸಿಬ್ಬಂದಿಯ ವೇತನವನ್ನು ಶೇ 11ರಷ್ಟು ಹೆಚ್ಚಿಸಲಾಗಿದೆ. ಡೀಸೆಲ್ ಖರೀದಿಯಲ್ಲಿ ಹಣ ಉಳಿತಾಯವಾದರೂ ಸಂಸ್ಥೆಯ ಆರ್ಥಿಕ ಹೊರೆ ಕಡಿಮೆ ಆಗಿಲ್ಲ' ಎಂದು ರಾಮಲಿಂಗಾ ರೆಡ್ಡಿ ಹೇಳಿದರು. [ಕೇಂದ್ರ ಮನಸ್ಸು ಮಾಡಿದರೆ 30 ರು. ಗೆ ಪೆಟ್ರೋಲ್!]
ದರ ಕಡಿಮೆ ಆಗಿದ್ದು ಯಾವಾಗ? : 2015ರ ಜನವರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ ಕಡಿಮೆ ಆಗಿತ್ತು. ಸಾಮಾನ್ಯ ವರ್ಗ, ನಗರ/ಉಪನಗರ ಸಾರಿಗೆ ಹಾಗೂ ವೇಗದೂತ ಬಸ್ ಪ್ರಯಾಣ ದರ ನಾನಾ ಹಂತಗಳಲ್ಲಿ 1 ರಿಂದ 11 ರೂ.ವರೆಗೆ ಇಳಿಕೆಯಾಗಿತ್ತು. [ಪ್ರಯಾಣ ದರ ಕಡಿತ, ಎಲ್ಲಿಗೆ ಎಷ್ಟು ರೂ?]
2,871 ಬಸ್ಸುಗಳ ಖರೀದಿ : 'ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಈ ವರ್ಷ 2,871 ಬಸ್ಸುಗಳನ್ನು ಖರೀದಿ ಮಾಡಲಿದೆ. ಹಳೆಯ ಬಸ್ಸುಗಳನ್ನು ಈ ವರ್ಷ ಸೇವೆಯಿಂದ ಹಿಂಪಡೆಯಲಾಗುತ್ತದೆ. ಬಸ್ಸುಗಳ ಖರೀದಿಗೆ ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು, ವಾಯವ್ಯ ರಸ್ತೆ ಸಾರಿಗೆ ನಿಗಮ 215 ಬಸ್ಸುಗಳನ್ನು ಖರೀದಿ ಮಾಡಿದೆ' ಎಂದು ಸಚಿವರು ಹೇಳಿದರು.
'ನರ್ಮ್ ಯೋಜನೆಯಡಿ ಕೆಎಸ್ಆರ್ಟಿಸಿಗೆ 800 ಬಸ್ಸುಗಳು ಮಂಜೂರಾಗಿವೆ. ಈ ವರ್ಷ ಅವು ಸೇರ್ಪಡೆಗೊಳ್ಳಲಿವೆ. ಬಿಎಂಟಿಸಿಗೆ ಇನ್ನೂ ಒಂದು ವರ್ಷ ವೋಲ್ವೊ ಸೇರಿದಂತೆ ಯಾವುದೇ ಬಸ್ಸುಗಳನ್ನು ಖರೀದಿ ಮಾಡುವುದಿಲ್ಲ' ಎಂದು ಸಚಿವರು ಸ್ಪಷ್ಟಪಡಿಸಿದರು.












Click it and Unblock the Notifications