ಗ್ರಾ.ಪಂ. ಚುನಾವಣೆ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು, ಡಿಸೆಂಬರ್ 3: ಈ ತಿಂಗಳ 22 ಮತ್ತು 27ರಂದು ಎರಡು ಹಂತಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮತದಾನವನ್ನು ಕಡ್ಡಾಯಗೊಳಿಸುವ ಯಾವುದೇ ಆಲೋಚನೆ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
'ಮತದಾನವನ್ನು ಕಡ್ಡಾಯಗೊಳಿಸುವುದು ವಾಸ್ತವವಾಗಿ ತೀರಾ ಅಸಂಭವ. ನಾವು ಅದನ್ನು ಜಾರಿಮಾಡುವುದಿಲ್ಲ. ಅಂತಹ ಕಾನೂನು ಅಸ್ತಿತ್ವದಲ್ಲಿದೆ ಎನ್ನುವುದೂ ನಮಗೆ ಗೊತ್ತಿಲ್ಲ' ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ; ನೀತಿ ಸಂಹಿತೆಯಲ್ಲಿ ಏನಿದೆ?
2015ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪಂಚಾಯತ್ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸಿ ಶಾಸನವನ್ನು ಅಂಗೀಕರಿಸಿತ್ತು. ಆದರೆ ಅದನ್ನು ಉಲ್ಲಂಘಿಸಿದವರಿಗೆ ಯಾವುದೇ ಶಿಕ್ಷೆಯ ಅವಕಾಶವನ್ನು ಉಲ್ಲೇಖಿಸಿರಲಿಲ್ಲ. ಹಾಗೆಯೇ ಚುನಾವಣೆಯಲ್ಲಿ ತಮ್ಮ ಮತದಾನದ ಹಕ್ಕು ಚಲಾಯಿಸುವವರು ಪಂಚಾಯಿತಿ ಚುನಾವಣೆಗಳಲ್ಲಿಯೂ 'ನೋಟಾ' ಆಯ್ಕೆ ಮಾಡುವ ಅವಕಾಶವನ್ನು ಒದಗಿಸಿತ್ತು. ಮುಂದೆ ಓದಿ.
ಮತ ಚಲಾಯಿಸಿದ್ದ ಸಿದ್ದರಾಮಯ್ಯ
ಕಡ್ಡಾಯ ಮತದಾನದ ಕಾನೂನು ಜಾರಿಯಾದ ಬಳಿಕ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ತಮ್ಮ ಸಿದ್ದರಾಮನ ಹುಂಡಿ ಗ್ರಾಮಕ್ಕೆ ತೆರಳಿ ಮತ ಚಲಾಯಿಸಿದ್ದರು.
ಎಚ್ಕೆ ಪಾಟೀಲ್ ಹೇಳಿಕೆ
ಜನರ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಲು ಪಂಚಾಯಿತಿ ಚುನಾವಣೆಗಳಲ್ಲಿ ಮತದಾನವನ್ನು ಕಡ್ಡಾಯಗೊಳಿಸಲು ತಮ್ಮ ಸರ್ಕಾರ ಬಯಸಿದೆ ಎಂದು ಆಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್ಕೆ ಪಾಟೀಲ್ ತಿಳಿಸಿದ್ದರು.
ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆ
ಮತಚಲಾಯಿಸದೆ ಇದ್ದರೆ ಶಿಕ್ಷೆಯಿಲ್ಲ
'22 ದೇಶಗಳು ಮತದಾನವನ್ನು ಕಡ್ಡಾಯಗೊಳಿಸಿವೆ ಮತ್ತು ಅವುಗಳಲ್ಲಿ ಹತ್ತು ದೇಶಗಳು ಮಾತ್ರ ಮತಗಟ್ಟೆಗೆ ಬಂದು ಮತಚಲಾಯಿಸದೆ ಇದ್ದರೆ ಮತದಾರರಿಗೆ ದಂಡ ವಿಧಿಸುವ ಕಾನೂನು ಹೊಂದಿವೆ. ನಾವು ಯಾವುದೇ ದಂಡವನ್ನು ವಿಧಿಸುತ್ತಿಲ್ಲ. ಮತದಾರರು ಪ್ರಾಮಾಣಿಕವಾಗಿ ಹೊರಬಂದು ಮತ ಚಲಾಯಿಸುವುದನ್ನು ನಾವು ಬಯಸಿದ್ದೇವೆ' ಎಂದು ಹೇಳಿದ್ದರು.
Recommended Video
ಮೂಲಭೂತ ಹಕ್ಕಿನ ಉಲ್ಲಂಘನೆ
'ಮತದಾನವನ್ನು ಕಡ್ಡಾಯಗೊಳಿಸುವುದು ಪ್ರಜಾಪ್ರಭುತ್ವದಲ್ಲಿ ನಾಗರಿಕರಿಗೆ ನೀಡಿರುವ ಅಭಿವೃಕ್ತಿ ಸ್ವಾತಂತ್ರ್ಯದ ಹಕ್ಕಿನ ಉಲ್ಲಂಘನೆ ಕೂಡ ಆಗಬಹುದು. ತಾವು ಮತ ಹಾಕಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಪ್ರತಿಯೊಬ್ಬರ ಆಯ್ಕೆಯಾಗಿರುತ್ತದೆ' ಎಂದು ಬಿಜೆಪಿಯ ಹಿರಿಯ ಮುಖಂಡರು ಹೇಳಿದ್ದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ.