ನವೆಂಬರ್ ಕ್ರಾಂತಿ; ಮಿಕ್ಕ ಯಾರ ಮಾತಿಗೂ ಕಿಮ್ಮತ್ತಿಲ್ಲ: ಡಿ ಕೆ ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ನವೆಂಬರ್ 01: ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಅನ್ನೋ ಸುದ್ದಿ ಸದ್ಯ ರಾಜಕೀಯ ಪಡಸಾಲೆಯಲ್ಲಿ ಹರಿದಾಡ್ತಿದೆ. ಸಚಿವ ಸಂಪುಟದಲ್ಲಿ ಯಾರು ಸ್ಥಾನ ಕಳೆದುಕೊಳ್ಳಬಹುದು? ಯಾರು ಹೊಸದಾಗಿ ಸೇರ್ಪಡೆಯಾಗಬಹುದು? ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯುತ್ತಾರಾ? ಡಿ.ಕೆ.ಶಿವಕುಮಾರ್ ಸಿಎಂ ಕನಸು ನನಸಾಗೇಬಿಡುತ್ತಾ? ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾಗಿಬಿಡ್ತಾರಾ? ಎಂಬ ಹಲವು ಪ್ರಶ್ನೆಗಳಿಗೆ ನವೆಂಬರ್ನಲ್ಲಿ ಉತ್ತರ ಸಿಗಬಹುದು ಎಂಬ ಕಾತರ ಹೆಚ್ಚಾಗಿದೆ. ಈ ಎಲ್ಲಾ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ನವೆಂಬರ್ ಕ್ರಾಂತಿಯ ಬಗ್ಗೆ ನಾನು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏನು ಮಾತನಾಡಿದ್ದೇವೆಯೋ ಅದು ಮಾತ್ರ ಮಾತು. ಮಿಕ್ಕ ಯಾರ ಮಾತಿಗೂ ಕಿಮ್ಮತ್ತು ಇಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹೇಳಿದರು. ನಾವು ಒಮ್ಮತದಲ್ಲಿ ಇರುವ ಕಾರಣಕ್ಕೇ 136 ಕ್ಷೇತ್ರ ಗೆದ್ದು 140 ಕ್ಕೆ ನಮ್ಮ ಬಲ ಹೆಚ್ಚಿರುವುದು ಎಂದರು.

ಟನಲ್ ರಸ್ತೆ ವಿಚಾರವಾಗಿ ವಿಪಕ್ಷ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್ ಬಾಗ್ ಬಳಿ ಪ್ರವೇಶ- ನಿರ್ಗಮನ ತಾಣ ರೂಪಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ. ಅಶೋಕ್ ಅವರು ಧರಣಿ ಕೂರುವ ಅವಶ್ಯಕತೆಯಿಲ್ಲ. ಏಕೆಂದರೆ ಅವರು ಬೆಂಗಳೂರಿನವರು. ಇಲ್ಲಿಂದ ಏಳೆಂಟು ಬಾರಿ ಗೆದ್ದಿದ್ದಾರೆ. ಅವರಿಗೂ ಜವಾಬ್ದಾರಿಯಿದೆ. ಅವರ ನೇತೃತ್ವದಲ್ಲಿ ರಚಿಸಿದ ಸಮಿತಿಯೇ ಸರ್ಕಾರಕ್ಕೆ ಸಲಹೆ, ನಿರ್ದೇಶನ ನೀಡಲಿ. ಟನಲ್ ಯೋಜನೆಯನ್ನು ಅವರೂ ಗಮನಿಸಲಿ. ಅಶ್ವಥ ನಾರಾಯಣ್ ಸೇರಿ ಬೇರೆ ಯಾರ ಹೆಸರನ್ನು ಸೂಚಿಸಿದರು ಅವರನ್ನು ಈ ಸಮಿತಿಗೆ ಸೇರ್ಪಡೆ ಮಾಡಲಾಗುವುದು. ನಾವೆಲ್ಲರೂ ಒಟ್ಟಿಗೆ ಸೇರಿ ಕೆಲಸ ಮಾಡಬೇಕು, ಮಾಡೋಣ ಎಂದರು.
ನಾನು ಶುಕ್ರವಾರ ರಾತ್ರಿ ಲಾಲ್ ಬಾಗ್ ಬಳಿ ತೆರಳಿ ಎಲ್ಲೆಲ್ಲಿ ಟನಲ್ ರಸ್ತೆಗೆ ಪ್ರವೇಶ ಕಲ್ಪಿಸಬಹುದು ಎಂದು ಪರಿಶೀಲನೆ ಮಾಡಿದ್ದೇನೆ. ಪರ್ಯಾಯ ಮಾರ್ಗಗಳ ಬಗ್ಗೆ ಆಲೋಚನೆ ನಡೆಸುತ್ತಿದ್ದೇನೆ. ಯಾವುದೇ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಬೆಳಗಾವಿಯಲ್ಲಿ ಎಂಇಎಸ್ ನವರ ಜೊತೆ ಪೊಲೀಸರು ಸೆಲ್ಫಿ ತೆಗೆದುಕೊಂಡಿರುವುದು ಹಾಗೂ ಪ್ರತಿಭಟನೆಗೆ ರಕ್ಷಣೆ ನೀಡಿರುವುದರ ಬಗ್ಗೆ ಮಾತನಾಡಿ, ಎಂಇಎಸ್ ನವರನ್ನು ಪರಿವರ್ತಿಸುವ ಕೆಲಸ ನಾವು ಮಾಡೋಣ. ಕರ್ನಾಟಕದಲ್ಲಿ ಒಂದು ಪಕ್ಷ, ಗುಂಪಾಗಿ ಅದು ಕೆಲಸ ಮಾಡುತ್ತಿದೆ. ಅವರೂ ಸಹ ಕನ್ನಡಿಗರೇ. ಅವರೂ ಸಹ ಕರ್ನಾಟಕ ವಿಧಾನಸಭೆಗೆ ಪ್ರವೇಶ ಮಾಡಿದ್ದಾರೆ. ಕರ್ನಾಟಕದಲ್ಲಿ ಇರಬೇಕು ಎಂದರೆ ಕನ್ನಡಿಗರಾಗಿ ಇರಬೇಕು. ಕರ್ನಾಟಕದಲ್ಲಿ ಇರುವವರು ಕಡ್ಡಾಯವಾಗಿ ಕನ್ನಡ ಕಲಿಯಬೇಕು, ಮಾತನಾಡಬೇಕು. ಈ ನಾಡಿನಲ್ಲಿ ಬದುಕುವವರು ಕನ್ನಡದ ಬೆಳವಣಿಗೆಗೆ ಸಹಕಾರ ನೀಡಬೇಕು. ಇತರೇ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿ ಗೃಹಸಚಿವರಿಗೆ ಇರುತ್ತದೆ. ಅವರು ಮಾಹಿತಿ ನೀಡುತ್ತಾರೆ ಎಂದರು.












Click it and Unblock the Notifications