ಬಿ ವೈ ವಿಜಯೇಂದ್ರ ಬಾಮೈದನ ಮನೆ ಮೇಲೆ ಲೋಕಾಯುಕ್ತ ದಾಳಿ : ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?
ಬೆಳಗಾವಿ, ಡಿಸೆಂಬರ್ 05: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಬಾಮೈದ ಅಂದರೆ ಪತ್ನಿಯ ಸಹೋದರ ಡಾ ಪ್ರಭುಲಿಂಗ ಮಾನ್ಕರ್ ಅವರ ಮನೆ ಮತ್ತು ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸುವರ್ಣಸೌಧದಲ್ಲಿ ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಕ್ರಮ ಆಗಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಕ್ರಮ ಆಗಬೇಕು. ಭ್ರಷ್ಟಾಚಾರ ಮಾಡಿದವರನ್ನೇ ನಾಯಕರನ್ನಾಗಿ ಮಾಡಿದರೆ ಪ್ರಾಮಾಣಿಕರು ಹೇಗೆ ಇರಲು ಸಾಧ್ಯ ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಉಮೇಶ್ ಕಂಡೆಕ್ಟರ್ ಯಾರು ಅಂತ ನಮಗೆ ಗೊತ್ತಿಲ್ವಾ? ಅವರ ಮನೆಯಲ್ಲಿ ಎರಡು ನೋಟ್ ಕೌಂಟಿಂಗ್ ಯಂತ್ರ ಸಿಕ್ಕಿದ್ದು ಗೊತ್ತಿಲ್ವಾ? ಅವನ ಬಳಿ ಸಾವಿರಾರು ಕೋಟಿ ಹೇಗೆ ಬಂತು ಎರಡು ನೋಟು ಎಣಿಕೆ ಯಂತ್ರ ಏಕಿತ್ತು? ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಅಥವಾ ವಿಜಯೇಂದ್ರ ಎಂದು ಕೇಳಬೇಡಿ. ಭ್ರಷ್ಟರು ಭ್ರಷ್ಟರೇ, ನಾನು ಭ್ರಷ್ಟಾಚಾರ ಮಾಡಿದರೆ ಭ್ರಷ್ಟನೇ. ಸನ್ಮಾನ್ಯ ಡಿಕೆ ಶಿವಕುಮಾರ್ ಭ್ರಷ್ಟ ಇದ್ದರೂ ಭ್ರಷ್ಟರೇ. ಯಾರು ಕರ್ನಾಟಕವನ್ನು ಲೂಟಿ ಹೊಡೆದಿದ್ದಾರೆ, ಕರ್ನಾಟಕವನ್ನು ಲೂಟಿ ಮಾಡಿ ಸಿಂಗಾಪುರ ಮಾರಿಶಸ್ ನಲ್ಲಿ ಹೂಡಿಕೆ ಮಾಡಿದ್ದಾರೆ ಅದರ ಬಗ್ಗೆ ತನಿಖೆ ಆಗಬೇಕು ಹಾಗೂ ಜೈಲಿಗೆ ಹೋಗಬೇಕು ಎಂದು ಒತ್ತಾಯಿಸಿದರು.
ಅಲ್ಪಸಂಖ್ಯಾತರಿಗೆ ಅನುದಾನ ಬಿಡುಗಡೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಾರವಾಗಿ, ಪಾಕಿಸ್ತಾನದವರ ಸರ್ಕಾರ ಬಂದಂತಾಗಿದೆ. ಇಂತಹ ಸರ್ಕಾರ. ಇದೇ ಉದ್ಧಟತನ ಮುಂದುವರಿಸಿದರೆ ಅತೀ ಹೆಚ್ಚು ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದರು.
ಇನ್ನೂ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಮೇಲೆ ಹಲ್ಲೆ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿ, ಇಷ್ಟೆಲ್ಲಾ ದಾಖಲೆ ಇರುವಾಗ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆ ಇಲ್ಲಿಯ ಮೇಡಂ ಕೈಗೊಂಬೆಯಾಗಿದ್ದಾರೆ.ಬೆಳಗಾವಿ ಸುಸಂಸ್ಕೃತವಾದ ಜಿಲ್ಲೆ ಗುಂಡಾಗಿರಿ ಯಾರು ಪ್ರಾರಂಭ ಮಾಡಿದ್ದಾರೆ ಅವರ ಅಂತ್ಯ ಕಾಣಲಿದೆ ಎಂದರು.
ರಾಜ್ಯದ 63 ಕಡೆ ಲೋಕಾಯುಕ್ತರು ದಾಳಿ!
ಮಂಗಳವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದು, ಬೆಂಗಳೂರು ಸೇರಿದಂತೆ ಬರೋಬ್ಬರಿ 63 ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. 13 ಅಧಿಕಾರಿಗಳಿಗೆ ಸೇರಿ ರಾಜ್ಯದ 63 ಕಡೆ ದಾಳಿ ನಡೆಸಿದ್ದು, ಬೆಂಗಳೂರಿನಲ್ಲಿ ಮೂರು ಕಡೆ ದಾಳಿ ನಡೆಸಿದ್ದು, ಸುಮಾರು 200 ಹೆಚ್ಚು ಅಧಿಕಾರಿ ಸಿಬ್ಬಂದಿಯಿಂದ ದಾಳಿ ಮಾಡಿ ದಾಖಲಗಲನ್ನ ಪರಿಶೀಲನೆ ನಡೆಸಲಾಗುತ್ತಿದೆ.
ಬೆಂಗಳೂರುಲ್ಲಿ 3 ಕಡೆ, ಕಲಬುರಗಿ, ಬೀದರ್-2 ಕಡೆ, ಬಳ್ಳಾರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಮೈಸೂರು, ಕೋಲಾರ, ಧಾರವಾಡದಲ್ಲಿ ದಾಳಿ ನಡೆಸಲಾಗಿದ್ದು, ಆದಾಯಕ್ಕೂ ಮೀರಿ ಅಧಿಕ ಆಸ್ತಿ ಗಳಿಕೆ ಸಂಬಂಧ ದಾಳಿ ನಡೆಸಿ ಶೋಧಕಾರ್ಯ ಆರಂಭಿಸಿದ್ದಾರೆ. ಇನ್ನೂ ಕಲಬುರಗಿಯಲ್ಲಿರುವ ಯಾದಗಿರಿ ಡಿಎಚ್ಓ ಡಾ. ಪ್ರಭುಲಿಂಗ್ ಮಾನಕರ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಅಕ್ರಮ ಆಸ್ತಿ ಗಳಿಗೆ ಆರೋಪದ ಮೇಲೆ ಯಾದಗಿರಿ ಡಿಎಚ್ಓ ಡಾ. ಪ್ರಭುಲಿಂಗ್ ಮಾನಕರ್ ಅವರ ಮನೆ ಮೇಲೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಬೆಂಗಳೂರಿನ ಬೆಸ್ಕಾಂ ಇಇ ಚೆನ್ನಕೇಶವ ಅವರ ಅಮೃತಹಳ್ಳಿ ಠಾಣಾ ವ್ಯಾಪ್ತಿಯ ಜಕ್ಕೂರಿನಲ್ಲಿರುವ ನಿವಾಸದಲ್ಲಿ ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದಾರೆ. ದಾಳಿ ವೇಳೆ 6 ಲಕ್ಷ ನಗದು, 3 ಕೆಜಿ ಚಿನ್ನ, 28 ಕೆಜಿ ಬೆಳ್ಳಿ, 25 ಲಕ್ಷ ಮೌಲ್ಯದ ಡೈಮಂಡ್ ಜುವೆಲರಿ, ಸೇರಿ 1.5 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿವೆ ಎಂಬ ಮಾಹಿತಿ ತಿಳಿದು ಬಂದಿದೆ.












Click it and Unblock the Notifications