ಕಾಂಗ್ರೆಸ್ನಲ್ಲಿ ಯಾವುದೇ ಒಳಜಗಳ ಇಲ್ಲ; ಇವೆಲ್ಲಾ ಮಾಧ್ಯಮಗಳ ಸೃಷ್ಟಿ; ಸಿದ್ದರಾಮಯ್ಯ
ಬೆಂಗಳೂರು, ಜೂನ್ 30: "ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ನಡುವೆ ಯಾವುದೇ ಕಲಹ ಇಲ್ಲ. ಇವೆಲ್ಲವೂ ಮಾಧ್ಯಮ ಸೃಷ್ಟಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ನಾಯಕತ್ವ ಹಾಗೂ ಮುಂದಿನ ಸಿಎಂ ಯಾರು ಎಂಬ ವಿಚಾರವಾಗಿ ಕೆಲವು ದಿನಗಳಿಂದ ವೈಮನಸ್ಸು ಆರಂಭವಾಗಿದೆ ಎನ್ನಲಾಗಿತ್ತು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, "ರಾಜ್ಯ ಕಾಂಗ್ರೆಸ್ನಲ್ಲಿ ಯಾವುದೇ ಒಳಜಗಳ ಇಲ್ಲ. ಮಾಧ್ಯಮಗಳು ಇವನ್ನೆಲ್ಲಾ ಸೃಷ್ಟಿ ಮಾಡುತ್ತಿವೆ. ಪಕ್ಷದಲ್ಲಿ ನಾವೆಲ್ಲಾ ಒಂದಾಗಿದ್ದೇವೆ. ಹಲವು ವಿಷಯಗಳ ಕುರಿತು ಒಟ್ಟಾಗಿ ಚರ್ಚೆ ಮಾಡುತ್ತಿದ್ದೇವೆ" ಎಂದು ತಿಳಿಸಿದರು.
"ಪಕ್ಷದಲ್ಲಿ ಇಂಥ ವಿಷಯಗಳು, ಭಿನ್ನಾಭಿಪ್ರಾಯಗಳು ಪಕ್ಷದ ಒಳಗೆ ಚರ್ಚೆ ನಡೆಯಬೇಕು. ಮಾಧ್ಯಮಗಳ ಮುಂದೆ ಅಲ್ಲ" ಎಂದು ಹೇಳಿದ ಅವರು, "ಕಾಂಗ್ರೆಸ್ ಕಲಹ, ನಾಯಕರ ನಡುವಿನ ಭಿನ್ನಾಭಿಪ್ರಾಯ ಎಂಬುದೆಲ್ಲವೂ ಸಂಪೂರ್ಣ ಮಾಧ್ಯಮಸೃಷ್ಟಿ, ಕಾಂಗ್ರೆಸ್ ನಾಯಕರು ಸೃಷ್ಟಿಸಿರುವಂಥದ್ದಲ್ಲ. ಅಂಥ ಯಾವುದೇ ಸಂಗತಿಗಳು ಕಾಂಗ್ರೆಸ್ನಲ್ಲಿ ನಡೆದಿಲ್ಲ" ಎಂದು ಸ್ಪಷ್ಟನೆ ನೀಡಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಕುರಿತು ಕಳೆದ ಒಂದು ತಿಂಗಳಿನಿಂದ ಚರ್ಚೆ ನಡೆಯುತ್ತಿತ್ತು. ಸಿದ್ದರಾಮಯ್ಯ ಪರಮಾಪ್ತ ಜಮೀರ್ ಅಹ್ಮದ್, ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕೆಂದು ಜನ ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಜಮೀರ್ ಹೇಳಿಕೆಗೆ ಮೂವರು ಕಾಂಗ್ರೆಸ್ ನಾಯಕರು ದನಿಗೂಡಿಸಿದ್ದರು. ಇದೇ ವಿಷಯವಾಗಿ ಕಾಂಗ್ರೆಸ್ನಲ್ಲಿ ಒಳಜಗಳ ಆರಂಭವಾಗಿದೆ ಎನ್ನಲಾಗಿತ್ತು.












Click it and Unblock the Notifications