ಪಠ್ಯಕ್ರಮ ಕಡಿತ ಇಲ್ಲ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್
ಬೆಂಗಳೂರು, ಅ 16: ಕೊರೊನಾ ಕಾರಣದಿಂದ ಶಾಲೆಗಳು ನಡೆಯುವ ದಿನದಲ್ಲಿ ಸ್ವಲ್ಪ ಮಟ್ಟಿನ ವ್ಯತ್ಯಾಸ ಆಗಿದ್ದರೂ ಸಹ ಪಠ್ಯಕ್ರಮದಲ್ಲಿ ಯಾವುದೇ ಕಡಿಮೆ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಪಠ್ಯ ಕ್ರಮ ಕಡಿಮೆ ಮಾಡುವ ಬಗ್ಗೆ ಯಾವುದೇ ಯೋಚನೆ ಇಲ್ಲ. ಪರೀಕ್ಷೆಗೆ ಅಗತ್ಯವಿದ್ದಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡುವ ಬಗ್ಗೆ ಜನವರಿ-ಫೆಬ್ರವರಿಯಲ್ಲಿ ನಿರ್ಧರಿಸಲಾಗುವುದು ಎಂದು ಅವರು ಶನಿವಾರ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಶನಿವಾರ ಪೂರ್ಣ ದಿನ ಹಾಗೂ ಭಾನುವಾರವೂ ಕೆಲ ಸಮಯ ತರಗತಿ ನಡೆಸಬೇಕು. ಈ ಮೂಲಕ ಬಾಕಿ ಉಳಿದಿರುವ ಎಲ್ಲ ಪಾಠಗಳನ್ನು ಮಕ್ಕಳಿಗೆ ಬೋಧಿಸಿ ಪಠ್ಯಕ್ರಮ ಪೂರ್ಣಗೊಳಿಸುವ ಕುರಿತಂತೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
"ಒಂದರಿಂದ ಐದನೇ ತರಗತಿ ಆರಂಭಕ್ಕೆ ಅಗತ್ಯವುಳ್ಳ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಿ.ಇ. ಒ.ಗಳು, ಡಿ.ಡಿ.ಪಿ.ಐಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ'' ಎಂದು ಶಿಕ್ಷಣ ಸಚಿವ ನಾಗೇಶ್ ತಿಳಿಸಿದರು.

ಬಿಸಿಯೂಟ ಆರಂಭಕ್ಕೆ ಸೂಚನೆ:
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅ.21ರಿಂದ ಶಿಕ್ಷಕರು ಬಿಸಿಯೂಟ ಯೋಜನೆಯನ್ನು ಪುನರಾರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಕೋವಿಡ್-19 ತುರ್ತು ಪರಿಸ್ಥಿತಿ ಹಿನ್ನೆಲ್ಲೆಯಲ್ಲಿ 1-10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಮತ್ತೆ ಶಾಲೆಗಳಲ್ಲಿ ಬಿಸಿಯೂಟದ ಯೋಜನೆಯನ್ನು ಮತ್ತೆ ಪ್ರಾರಂಭಿಸಬೇಕು ಎಂದು ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಾಲೆಗಳಿಗೆ ಸೂಚನೆ ನೀಡಲಾಗಿದೆ.
ಬಿಸಿಯೂಟ ಯೋಜನೆಗೆ ಶಿಕ್ಷಕರು ಈ ಸೂಚನೆಗಳನ್ನು ಪಾಲಿಸಲು ಸೂಚಿಸಲಾಗಿದೆ.
* ಶಾಲೆಗಳಲ್ಲಿ ಅಡುಗೆಯನ್ನು ತಯಾರು ಮಾಡಲು ಆಹಾರ ಧಾನ್ಯಗಳ ದಾಸ್ತಾನು ಪರಿಶೀಲಿಸಬೇಕು. ಅವಧಿ ಮೀರಿದ ಪದಾರ್ಥಗಳು ಬಳಕೆಯಾಗದಂತೆ ನೋಡಿಕೊಳ್ಳಬೇಕು
* ಶಾಲೆಗಳಲ್ಲಿರುವ ಗ್ಯಾಸ್, ಸ್ಟೌ, ಪರಿಕರಗಳು ದುರಸ್ತಿ ಹೊಂದಿದಲ್ಲಿ ಅಕ್ಷರ ದಾಸೋಹ ಕಾರ್ಯಕ್ರಮದ ಅನುದಾನದಡಿ 5000-8000 ರೂ. ಬಳಸಿಕೊಂಡು ರಿಪೇರಿ ಮಾಡಿಸಬೇಕು.
* ಶಾಲೆಗಳಿಗೆ ಅಕ್ಕಿ ಮತ್ತು ಗೋಧಿ ಸರಬರಾಜು ಆಗುತ್ತಿದೆ. ಉಳಿದ ಆಹಾರ ಪದಾರ್ಥಗಳನ್ನು 5ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ರೂ.4.97 ಹಾಗೂ 6-10ನೇ ತರಗತಿ ವಿದ್ಯಾರ್ಥಿಗಳಿಗೆ ರೂ.7.45 ಪರಿವರ್ತನಾ ವೆಚ್ಚ ಬಳಸಿಕೊಂಡು ಅಡುಗೆ ತಯಾರಿಸಬೇಕು.
* ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಹಾಗೂ ಅಡುಗೆ ಸಹಾಯಕರು ಎರಡು ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದಿರಬೇಕು. ಎರಡು ಡೋಸ್ ಪೂರ್ಣಗೊಂಡಿದ್ದರೆ ಮಾತ್ರ ಅಡುಗೆ ಕೇಂದ್ರಗಳಿಗೆ ಹಾಜರಾಗಬೇಕು. ಶಿಕ್ಷಕರು ಇದನ್ನು ಕಡ್ಡಾಯವಾಗಿ ಪರಿಶೀಲನೆ ನಡೆಸಬೇಕು.












Click it and Unblock the Notifications