ಪರಿಸರ ಪ್ರೇಮಿಗಳಿಗೆ ಜಯ : ಬಂಡೀಪುರದಲ್ಲಿ ಎಲಿವೇಟೆಡ್ ರಸ್ತೆ ಇಲ್ಲ
ಬೆಂಗಳೂರು, ಜನವರಿ 08 : ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡುವ ಪ್ರಸ್ತಾವನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪರಿಸರ ಪ್ರೇಮಿಗಳು ರಸ್ತೆ ನಿರ್ಮಾಣವನ್ನು ವಿರೋಧಿಸಿದ್ದರು.
ರಾಜ್ಯಸಭೆಯಲ್ಲಿ ಕೇರಳದ ಎಂ.ಪಿ.ವೀರೇಂದ್ರ ಕುಮಾರ್ ಅವರ ಪ್ರಶ್ನೆಗೆ ಕೇಂದ್ರ ಸರ್ಕಾರದಿಂದ ಉತ್ತರ ನೀಡಲಾಗಿದೆ. ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಬದಲು ತಿತಿಮತಿ-ಗೋಣಿಕೊಪ್ಪ-ಕುಟ್ಟಾ ಪರ್ಯಾಯ ರಸ್ತೆಯನ್ನು ಅಭಿವೃದ್ಧಿಪಡಿಸುವುದು ಉತ್ತಮ ಎಂಬ ಅಭಿಪ್ರಾಯವಿದೆ.
ಬಂಡೀಪುರ: ಮನುಷ್ಯರ ತೆವಲಿಗೆ ವನ್ಯಪ್ರಾಣಿಗಳು ಬಲಿಯಾಗಬೇಕೇ?
ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ರಾಜ್ಯ ಸಚಿವ ಡಾ.ಮಹೇಶ್ ಶರ್ಮಾ ಅವರು ರಾಜ್ಯಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದಾರೆ. 'ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವು ಮತ್ತು ಕಾಮಗಾರಿಯನ್ನು ಕೈಗೊಳ್ಳಲು ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ' ಎಂದು ಹೇಳಿದ್ದಾರೆ.
'ಬಂಡೀಪುರ ಅರಣ್ಯದಲ್ಲಿ ಫ್ಲೈ ಓವರ್ ನಿರ್ಮಿಸಲ್ಲ, ರಾತ್ರಿ ಸಂಚಾರವೂ ಇಲ್ಲ'
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ 67 ಕರ್ನಾಟಕ ಮತ್ತು ಕೇರಳ ರಾಜ್ಯವನ್ನು ಸಂಪರ್ಕಿಸುತ್ತದೆ. ಈ ರಸ್ತೆಯಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಿದರೆ ಪ್ರಾಣಿಗಳಿಗೆ ತೊಂದರೆ ಆಗಲಿದೆ ಎಂದು ಕರ್ನಾಟಕ ಹೇಳಿತ್ತು...
ಬಂಡೀಪುರ ಅರಣ್ಯದಲ್ಲಿ ರಾತ್ರಿ ವೇಳೆ ಉಪಟಳ: ಅರಣ್ಯ ಪ್ರಿಯರ ಬೇಸರ
ರಾತ್ರಿ ವಾಹನ ಸಂಚಾರ ನಿಷೇಧ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿ 67ರ 25 ಕಿ.ಮೀ. ವ್ಯಾಪ್ತಿಯಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ರ ತನಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ವೇಳೆಯಲ್ಲಿ ಪ್ರಾಣಿಗಳು ಸಂಚಾರ ನಡೆಸುತ್ತವೆ. ಅವುಗಳಿಗೆ ತೊಂದರೆ ಆಗುವ ಹಿನ್ನಲೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೇರಳ ಸರ್ಕಾರ ಎಷ್ಟು ಮನವಿ ಮಾಡಿದರು ಕರ್ನಾಟಕ ಒಪ್ಪಿಗೆ ನೀಡಿಲ್ಲ.
ಎಲಿವೇಟೆಡ್ ರಸ್ತೆ ನಿರ್ಮಾಣ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಕೇರಳ ಸರ್ಕಾರದ ಬೇಡಿಕೆಯಾಗಿತ್ತು. ಆದರೆ, ಕರ್ನಾಟಕ ಎಲಿವೇಟೆಡ್ ರಸ್ತೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿತ್ತು. ರಾಜ್ಯದ ಪರಿಸರ ಪ್ರೇಮಿಗಳು ಸಹ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಶೇ 50ರಷ್ಟು ಖರ್ಚು ನೀಡುತ್ತೇವೆ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಎಲಿವೇಟೆಡ್ ರಸ್ತೆ ನಿರ್ಮಾಣ ಮಾಡಲು ಶೇ 50ರಷ್ಟು ಹಣವನ್ನು ನಾವು ನೀಡುತ್ತೇವೆ ಎಂದು ಕೇರಳ ಸರ್ಕಾರ ಹೇಳಿತ್ತು. ಆದರೆ, ಕರ್ನಾಟಕ ಇದಕ್ಕೆ ಒಪ್ಪಿಗೆ ಕೊಟ್ಟಿರಲಿಲ್ಲ. ಈಗ ಎಲಿವೇಟೆಡ್ ರಸ್ತೆ ನಿರ್ಮಾಣದ ಪ್ರಸ್ತಾಪವೇ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಬಂಡೀಪುರ ಮಾರ್ಗ
ಬಂಡೀಪುರದ ಮಾರ್ಗವು ತಮಿಳುನಾಡು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ಕೇರಳ ಸರ್ಕಾರ ಮಾತ್ರ ರಾತ್ರಿ ವಾಹನ ಸಂಚಾರಕ್ಕೆ ಅನುಮತಿ ನೀಡಲು ಒತ್ತಡ ಹಾಕುತ್ತಿದೆ. ರಾತ್ರಿ ವಾಹನ ಸಂಚಾರ ಸಮಯದಲ್ಲಿ ಪ್ರಾಣಿಗಳ ಜೀವಕ್ಕೆ ಬೆಲೆ ಇಲ್ಲದಂತಾಗುತ್ತದೆ ಮತ್ತು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮ ಸಾಗಾಟಗಳು ಹೆಚ್ಚುತ್ತವೆ ಎಂಬ ಆತಂಕವನ್ನು ಪರಿಸರ ಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.
ಯಾವ ವಾಹನಕ್ಕೆ ಅನುಮತಿ?
ಕರ್ನಾಟಕ ಮತ್ತು ಕೇರಳದ ನಡುವಿನ ಬಂಡೀಪುರ ಮಾರ್ಗದಲ್ಲಿ ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆಯ ತನಕ ಕರ್ನಾಟಕದ 2 ಸರ್ಕಾರಿ ಬಸ್ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಆಂಬ್ಯುಲೆನ್ಸ್, ಅಗ್ನಿಶಾಮಕದಳದ ವಾಹನಕ್ಕೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಮಾರ್ಗದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲನ್ನು ಏರಿತ್ತು.