ನೋ ವ್ಯಾಕ್ಸಿನ್, ನೋ ರೇಷನ್; ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಪಷ್ಟನೆ
ಬೆಂಗಳೂರು, ಸೆಪ್ಟೆಂಬರ್ 02; ಕರ್ನಾಟಕದಲ್ಲಿ ನೋ ವ್ಯಾಕ್ಸಿನ್, ನೋ ರೇಷನ್ ಎಂಬ ಹೆಸರಿನಲ್ಲಿ ಹರಿದಾಡುತ್ತಿರುವ ಸುದ್ದಿಗಳು ಗೊಂದಲ ಮೂಡಿಸಿವೆ. ಈ ಕುರಿತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿ ಕುಮಾರ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಗುರುವಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆ ಮೂಲಕ ನೋ ವ್ಯಾಕ್ಸಿನ್, ನೋ ರೇಷನ್ ಹೆಸರಿನಲ್ಲಿ ಹರಿದಾಡುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸರ್ಕಾರದ ಯಾವುದೇ ಕಾರ್ಯಕ್ರಮ/ ಯೋಜನೆಗಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಜೋಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಒಂದು ಪಕ್ಷ ಈ ರೀತಿಯಾಗಿ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಯಾವುದೇ ಕಾರ್ಯಕ್ರಮ/ ಯೋಜನೆಗೆ ತಪ್ಪಾಗಿ ಜೋಡಿಸಿದ್ದಲ್ಲಿ ಅದನ್ನು ಕೂಡಲೇ ಕೈಬಿಡಬೇಕು ಎಂದು ನಿರ್ದೇಶಿಸಿದೆ ಎಂದು ರವಿ ಕುಮಾರ್ ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?; ಇಂದಿನ ದಿನ ಪತ್ರಿಕೆಗಳಲ್ಲಿ ನೋ ವ್ಯಾಕ್ಸಿನ್, ನೋ ರೇಷನ್ ಎಂಬ ಶೀರ್ಷಿಕೆಯಡಿ ಕೋವಿಡ್ ಲಸಿಕೆ ಪಡೆಯದವರಿಗೆ ಪಿಂಚಣಿ ಮತ್ತು ಪಡಿತರವನ್ನು ನೀಡುವುದಿಲ್ಲವೆಂದು ವರದಿಯಾಗಿರುವುದು ತಿಳಿದುಬಂದಿರುತ್ತದೆ.
ಸರ್ಕಾರದ ಯಾವುದೇ ಕಾರ್ಯಕ್ರಮ/ಯೋಜನೆಗಳಿಗೆ ಕೋವಿಡ್ ಲಸಿಕಾ ಕಾರ್ಯಕ್ರಮವನ್ನು ಜೋಡಿಸಿಲ್ಲ. ಆದ್ದರಿಂದ ಲಸಿಕೆ ಹಾಕಿಸಿಕೊಳ್ಳಲು ಜನರಿಗೆ ಯಾವುದೇ ನಿರ್ಬಂಧ ಹೇರದೆ, ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಗಳು ನಿರ್ದೇಶಿಸಿದ್ದಾರೆ. @CMofKarnataka pic.twitter.com/9ogxjunEOF
— DIPR Karnataka (@KarnatakaVarthe) September 2, 2021
ಸರ್ಕಾರದಿಂದ ಈ ರೀತಿ ಕೋವಿಡ್ ಲಸಿಕೆ ನೀಡುವುದನ್ನು ಸರ್ಕಾರದಿಂದ ನೀಡಲಾಗುವ ಪಡಿತರ, ಪಿಂಚಣಿ ಅಂತಹ ಯಾವುದೇ ಕಾರ್ಯಕ್ರಮ/ ಯೋಜನೆಗಳಿಗೆ ಜೋಡಿಸಿಲ್ಲವಾದ್ದರಿಂದ ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳುವುದಕ್ಕೆ ಜನರಿಗೆ ಯಾವುದೇ ನಿರ್ಬಂಧನೆ ಹೇರಬಾರದು.
ಜಾಗೃತಿ ಮೂಡಿಸುವ ಅಭಿಯಾನದ ಮೂಲಕ ಕೋವಿಡ್ ಲಸಿಕಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ/ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಈ ಮೂಲಕ ನಿರ್ದೇಶಿಸಲಾಗಿದೆ.
ಚಾಮರಾಜನಗರ ಡಿಸಿ ಸ್ಪಷ್ಟನೆ; ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ಇಲ್ಲ ಎಂದು ಚಾಮರಾಜನಗರ ಜಿಲ್ಲಾಡಳಿತ ಆದೇಶ ಹೊರಡಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಕ್ಕೆ ಆಕ್ರೋಶ ಸಹ ವ್ಯಕ್ತವಾಗಿತ್ತು. ಬುಧವಾರ ಜಿಲ್ಲಾಡಳಿತ ಈ ಕುರಿತು ಸ್ಪಷ್ಟನೆ ನೀಡಿತ್ತು.
ಪತ್ರಿಕಾ ಪ್ರಕಟಣೆ ಹೊರಡಿಸಿದ್ದ ಚಾಮರಾಜನಗರ ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಕೋವಿಡ್ ಲಸಿಕೆ ಪಡೆಯದವರಿಗೆ ಪಡಿತರ, ಪಿಂಚಣಿ ಇಲ್ಲ ಎಂಬ ಶೀರ್ಷಿಕೆಯಡಿ ಕೆಲ ಮಾಧ್ಯಮಗಳಲ್ಲಿ ಸುದ್ದಿ ವರದಿಯಾಗಿರುವುದನ್ನು ಗಮನಿಸಲಾಗಿದೆ. ಜಿಲ್ಲಾಡಳಿತದಿಂದ ಈ ಸಂಬಂಧ ಯಾವುದೇ ಅಧಿಕೃತ ಆದೇಶ ಹೊರಡಿಸಲಾಗಿಲ್ಲ ಎಂದು ಹೇಳಿದ್ದರು.
ಪಡಿತರದಾರರಿಗೆ ಹಾಗೂ ಪಿಂಚಣಿದಾರರಿಗೆ ಕೋವಿಡ್ ಲಸಿಕೆ ಪಡೆಯದಿದ್ದರೆ ಸೌಲಭ್ಯ ನಿರಾರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದರು. ಆದರೂ ಜನರಲ್ಲಿ ಈ ಸುದ್ದಿಯ ಕುರಿತಾದ ಗೊಂದಲ ಮುಂದುವರೆದಿತ್ತು. ಅದಕ್ಕಾಗಿ ಸ್ವತಃ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕೋವಿಡ್ ಲಸಿಕೆ ನೀಡಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಪ್ರತಿ ಬುಧವಾರ ರಾಜ್ಯದಲ್ಲಿ ಲಸಿಕಾ ಮೇಳವನ್ನು ಆಯೋಜನೆ ಮಾಡಲಾಗುತ್ತದೆ. ಸೆಪ್ಟೆಂಬರ್ 1ರಂದು ನಡೆದ ಲಸಿಕಾ ಮೇಳದಲ್ಲಿ 11,36,980 ಡೋಸ್ ಲಸಿಕೆ ನೀಡಲಾಗಿದೆ. ಇದುವರೆಗೂ ರಾಜ್ಯದಲ್ಲಿ 4,35,58,701 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ.
ಕೋವಿನ್ ಅಪ್ಲಿಕೇಶನ್ನಲ್ಲಿನ ಮಾಹಿತಿಯಂತೆ ಇದುವರೆಗೂ ಉತ್ತರ ಪ್ರದೇಶದಲ್ಲಿ 7,41,60,528, ಮಹಾರಾಷ್ಟ್ರದಲ್ಲಿ 6,00,73,500, ಮಧ್ಯಪ್ರದೇಶದಲ್ಲಿ 4,72,76,468, ಗುಜರಾತ್ನಲ್ಲಿ 4,71,16,881, ರಾಜಸ್ಥಾನದಲ್ಲಿ 4,54,56,371 ಮತ್ತು ಕರ್ನಾಟಕದಲ್ಲಿ 4,36,47,939 ಡೋಸ್ ಕೋವಿಡ್ ಲಸಿಕೆಯನ್ನು ನೀಡಲಾಗಿದೆ.
ಕರ್ನಾಟಕದಲ್ಲಿ ಅತಿ ಹೆಚ್ಚು ಲಸಿಕೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ನೀಡಲಾಗಿದೆ. ಹೆಚ್ಚು ಜನರಿಗೆ ಲಸಿಕೆಯನ್ನು ನೀಡುವ ಉದ್ದೇಶದಿಂದ ಲಸಿಕೆ ನೀಡುವ ಕೇಂದ್ರಗಳ ಸಮಯವನ್ನು ಸಹ ವಿಸ್ತರಣೆ ಮಾಡಲಾಗಿದೆ.
ಕೋವಿಡ್ ಲಸಿಕೆಯನ್ನು ಎಲ್ಲರಿಗೂ ನೀಡಲು ಕೇಂದ್ರ ಸರ್ಕಾರ ಸಹ ಸಹಕಾರ ನೀಡುತ್ತಿದೆ. ಲಸಿಕೆಗಳ ಲಭ್ಯತೆ ಮಾಹಿತಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಗಡವಾಗಿಯೇ ತಿಳಿಸಲಾಗುತ್ತದೆ. ಇದರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆಯನ್ನು ರೂಪಿಸಲು ಸಹಕಾರಿಯಾಗುತ್ತದೆ.












Click it and Unblock the Notifications