ಶೀಘ್ರದಲ್ಲಿ ಪಟ್ಟಿ ಬಿಡುಗಡೆ: ಬಿಜೆಪಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ: ಶೋಭಾ ಕರಂದ್ಲಾಜೆ
ಬೆಂಗಳೂರು,ಏಪ್ರಿಲ್7: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಅಬ್ಬರದ ಪ್ರಚಾರವನ್ನ ಆರಂಭಿಸಿರುವ ರಾಜಕೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ದೊಡ್ಡ ತಲೆನೋವಾಗಿದೆ.
ಇತ್ತ ಕಾಂಗ್ರೆಸ್ ಮೊದಲ ಪಟ್ಟಿ ಹಾಗೂ ಎರಡನೇ ಪಟ್ಟಿಯಲ್ಲಿ 166 ಕ್ಷೇತ್ರಗಳ ಅಭ್ಯರ್ಥಿಯನ್ನ ಫೈನಲ್ ಮಾಡಿದ್ದು, ಬಂಡಾಯವಿರುವ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ಇನ್ನೂ ಹೈಕಮಾಂಡ್ ಮುಂದಾಗಿಲ್ಲ. ಇನ್ನೂ ಪ್ರಾದೇಶಿಕ ಪಕ್ಷ ಜೆಡಿಎಸ್ಚುನಾವಣಾ ದಿನಾಂಕ ಘೋಷಣೆಗೂ ಮೊದಲೇ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ದಳಪತಿಗಳಿಗೆ ಹಾಸನ ಕ್ಷೇತ್ರವೇ ದೊಡ್ಡ ಸವಾಲಾಗಿದೆ.

ಇನ್ನೂ ರಾಷ್ಟ್ರೀಯ ಪಕ್ಷವಾದ ಬಿಜೆಪಿಯಲ್ಲಿ ಮೊದಲ ಪಟ್ಟಿ ಆಯ್ಕೆ ಕುರಿತು ರಾಜ್ಯ ಬಿಜೆಪಿ ಹೈಕಮಾಂಡ್ ನಾಯಕರಿಗೆ ಸಂಭಾವ್ಯ ಪಟ್ಟಿಯನ್ನ ಕಳುಹಿಸಿದ್ದು, ಎರಡುದ ದಿನಗಳ ಕಾಲ ಚರ್ಚೆ ನಡೆಸಿ ಶೀಘ್ರದಲ್ಲೇ ಬಿಜೆಪಿ ಪಟ್ಟಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.
ಬಿಜೆಪಿ ಪಟ್ಟಿ ಬಿಡುಗಡೆ ಕುರಿತು ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಮಾತನಾಡಿ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಗೊಂದಲಗಳಿದ್ದೂ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತಿಳಿಸಿದರು.
ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಯಡಿ ನಡೆಯುವ ಒಂದು ಪಕ್ಷ. ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಯನ್ನು ಗೌರವಿಸುತ್ತದೆ. ನಮ್ಮ ರಾಷ್ಟ್ರೀಯ, ರಾಜ್ಯ, ಜಿಲ್ಲಾ- ಮಂಡಲ ಅಧ್ಯಕ್ಷರ ಆಯ್ಕೆಯು ಕೂಡ ಪ್ರಜಾತಂತ್ರ ವ್ಯವಸ್ಥೆಯ ಅಡಿಯಲ್ಲೇ ನಡೆಯುತ್ತಿದೆ ಎಂದು ಹೇಳಿದರು.

ಇವತ್ತು ವಿಧಾನಸಭಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಕೂಡ ಪ್ರಜಾತಂತ್ರ ವ್ಯವಸ್ಥೆಯ ರೀತಿಯಲ್ಲಿ ನಡೆಯುತ್ತಿದೆ. ವರ್ಷದ 365 ದಿನವೂ ಕೆಲಸ ಮಾಡುವ ಕಾರ್ಯಕರ್ತರು ನಮ್ಮ ಬೂತ್ ಮಟ್ಟದಲ್ಲಿ ಇದ್ದಾರೆ ಎಂದ ಅವರು, ಕಾಂಗ್ರೆಸ್ ಪಕ್ಷದವರು ಚುನಾವಣೆಗೆ ಸಮೀಪದ ಕೊನೆಯ 2 ತಿಂಗಳು ಮಾತ್ರ ಎಂದು ತಿಳಿಸಿದರು.
ಕಾಂಗ್ರೆಸ್ನವರಿಗೆ ಕೇಡರ್ ಇಲ್ಲ; ಲೀಡರ್ಗಳೂ ಇಲ್ಲ. ಆದರೆ, ಬಿಜೆಪಿ ವರ್ಷವಿಡೀ, 5 ವರ್ಷವೂ ಕೆಲಸ ಮಾಡುತ್ತದೆ. ಸರಕಾರ ಇರಲಿ ಅಥವಾ ಇಲ್ಲದೇ ಇರಲಿ, ನಮ್ಮ ಕಾರ್ಯಕರ್ತರು ಕೆಲಸ ಮಾಡುವವರು. ಸರಕಾರ ಇದ್ದಾಗ ನಮ್ಮ ಕಾರ್ಯಕರ್ತರು ಯೋಜನೆಗಳನ್ನು ಜನರಿಗೆ ತಲುಪಿಸುತ್ತಾರೆ. ಸರಕಾರ ಇಲ್ಲದಿದ್ದರೆ ಅವ್ಯವಸ್ಥೆ, ಜನರ ಬೇಡಿಕೆಗಳಿಗಾಗಿ ಹೋರಾಟ ಮಾಡುತ್ತಾರೆ ಎಂದು ವಿವರಿಸಿದರು.
ಬಿಜೆಪಿಯ 43ನೇ ಸ್ಥಾಪನಾ ದಿನವನ್ನು ನಾವು ಹೆಮ್ಮೆಯಿಂದ ಆಚರಿಸಿದ್ದೇವೆ. ಪ್ರಪಂಚದ ನಂಬರ್ ವನ್ ಪಾರ್ಟಿಯ ಸ್ಥಾಪನಾ ದಿನ ಕೂಡ ಇವತ್ತು ಆಗಿದೆ. ಇದೇ ಮಾದರಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕೂಡ ನಡೆಯಲಿದೆ. ಮೊನ್ನೆ ಮಾರ್ಚ್ 31 ರಂದು ಪ್ರಜಾತಂತ್ರ ವ್ಯವಸ್ಥೆಗೆ ಗೌರವ ಕೊಡುವ ರೀತಿಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹವನ್ನು ಮತದಾನದ ಮೂಲಕ ನೆರವೇರಿಸಿದ್ದೇವೆ. ಮಂಗಳವಾರ ಹಾಗೂ ಬುಧವಾರ ಚುನಾವಣಾ ಸಮಿತಿಯು ಈ ಅಭಿಪ್ರಾಯದ ಕ್ರೋಡೀಕರಣ ಕಾರ್ಯ ಮಾಡಿದೆ ಎಂದು ತಿಳಿಸಿದರು.
ನಮ್ಮ ಕಾರ್ಯಕರ್ತರ ಅಭಿಪ್ರಾಯವನ್ನು ಯಥಾವತ್ತಾಗಿ ಕೇಂದ್ರ ಚುನಾವಣಾ ಸಮಿತಿಗೆ ಮತ್ತು ಸಂಸದೀಯ ಮಂಡಳಿಗೆ ಕಳುಹಿಸಿ ಕೊಡಲಾಗುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷವಾದ ಕಾರಣ ಸಹಜವಾಗಿ ಎಲ್ಲ ನಿರ್ಧಾರಗಳು ಕೇಂದ್ರದಿಂದ ಆಗುತ್ತದೆ. ಎಂಎಲ್ಎ, ಎಂಎಲ್ಸಿ, ಎಂಪಿ ಅಭ್ಯರ್ಥಿ ಆಯ್ಕೆಯನ್ನು ಕೇಂದ್ರ ಚುನಾವಣಾ ಸಮಿತಿ- ಸಂಸದೀಯ ಮಂಡಳಿ ನಿರ್ಧರಿಸುತ್ತದೆ ಎಂದ ಅವರು, ಅಂತಿಮ ಸ್ಪರ್ಶ ನೀಡುವ ಕಾರ್ಯವನ್ನು ಕೇಂದ್ರ ಚುನಾವಣಾ ಸಮಿತಿ- ಸಂಸದೀಯ ಮಂಡಳಿ ಮಾಡಲಿದೆ ಎಂದು ತಿಳಿಸಿದರು.












Click it and Unblock the Notifications