ಆಧುನಿಕತೆಯ ಗಂಧ ಗಾಳಿಯೇ ಅರಿಯದ ಕಾರವಾರದ ಕುಗ್ರಾಮ ಈ ಹಿರಿಮನೆ
ಕಾರವಾರ, ಜುಲೈ 9: ದೇಶದ ವಹಿವಾಟುಗಳು ಆನ್ಲೈನ್ ಆಗುತ್ತಿದೆ. ಎಲ್ಲವೂ ಕಂಪ್ಯೂಟರ್, ಇಂಟರ್ನೆಟ್, ಮೊಬೈಲ್ಗಳಿಂದಲೇ ಸಾಧ್ಯವಾಗುತ್ತಿದೆ. ಆದರೆ ಇಂತಹ ಆಧುನಿಕ ಯುಗದಲ್ಲಿಯೂ ಮೂಲ ಸೌಕರ್ಯಗಳ ಗಂಧ ಗಾಳಿಯೇ ಇಲ್ಲದ ಕುಗ್ರಾಮವೊಂದು ಇಲ್ಲಿದೆ.
ಈ ಗ್ರಾಮದ ಜನತೆ ಆರೋಗ್ಯ ಹದಗೆಟ್ಟರೂ ಮೈಲುಗಟ್ಟಲೆ ಕಾಡು-ಮೇಡುಗಳನ್ನು ಏರಿಳಿದು ನಗರಕ್ಕೆ ಬರಬೇಕಾದ ಪರಿಸ್ಥಿತಿ ಇದೆ. ಈ ಗ್ರಾಮದ ಹೆಸರು ಹಿರಿಮನೆ.

ಕಾರವಾರದ ದೇವಳಮಕ್ಕಿ ಗ್ರಾಮದಿಂದ ಕಡಿದಾದ ಕಾಡು ದಾರಿಯಲ್ಲಿ ಸುಮಾರು 6 ಕಿ.ಮೀ ಗುಡ್ಡವೇರಿ ಸಾಗಿದರೆ 'ಹಿರಿಮನೆ' ಎಂಬ ಊರು ಸಿಗುತ್ತದೆ. ಈ ಕುಗ್ರಾಮದಲ್ಲಿ ಒಟ್ಟೂ 6 ಮನೆಗಳಿದ್ದು, 25 ಮಂದಿ ನೆಲೆಸಿದ್ದಾರೆ. ದಿನನಿತ್ಯದ ಅಗತ್ಯಗಳಿಗೆ ಇಲ್ಲಿನ ಜನರು 6 ಕಿ.ಮೀ ದೂರದ ದೇವಳಮಕ್ಕಿ ಗ್ರಾಮವನ್ನೇ ಅವಲಂಬಿಸಿದ್ದಾರೆ.
ತಾಲ್ಲೂಕಿನ ಗಡಿಯಲ್ಲಿರುವ ಈ ಗ್ರಾಮ ಅಂಕೋಲಾ ತಾಲೂಕಿನ ವ್ಯಾಪ್ತಿಯಲ್ಲಿದೆ. ಹಟ್ಟಿಕೇರಿ ಗ್ರಾಮ ಪಂಚಾಯ್ತಿ ಅಡಿಯಲ್ಲಿರುವ ಈ ಹಿರಿಮನೆಯ ಜನರು ತಿಂಗಳ ಪಡಿತರ ಪಡೆಯಲು 30 ಕಿ.ಮೀ ನಡೆಯಬೇಕು!

ಅಲ್ಲದೇ ಅಗತ್ಯ ಸರ್ಕಾರಿ ಕೆಲಸಗಳಿಗೆ, ದಾಖಲೆಗಳನ್ನು ಪಡೆದುಕೊಳ್ಳಲು ಈ ಊರಿನ ಜನರು ಹತ್ತಿರದ ಕಾರವಾರ ಬಿಟ್ಟು ದೂರದ ಅಂಕೋಲಾ ತಾಲೂಕಿಗೆ ಅಲೆದಾಡಬೇಕು. ಸರ್ಕಾರಿ ಕೆಲಸ ವಿಳಂಬವಾದರೆ ಅಂಕೋಲಾದ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡು ಮರುದಿನ ಊರಿಗೆ ಮರಳ ಬೇಕಾದ ಪರಿಸ್ಥಿತಿ ಇಲ್ಲಿನ ಜನರದ್ದಾಗಿದೆ.
ಗ್ರಾಮದ ವಿದ್ಯಾರ್ಥಿಗಳು 6 ಕಿ.ಮೀ ದೂರದ ದೇವಳಮಕ್ಕಿಯ ಶಿರ್ವೇ ಗ್ರಾಮದಲ್ಲಿನ ಶಾಲೆಗೆ ಬರಬೇಕು. ಪ್ರತಿದಿನ ಗುಡ್ಡ ಹತ್ತಿಳಿದು ಶಾಲೆಗೆ ಬರುವುದು ಕಷ್ಟವಾಗುವುದರಿಂದ ದೇವಳಮಕ್ಕಿಯಲ್ಲಿರುವ ಸಂಬಂಧಿಗಳ ಮನೆ ಯಲ್ಲಿದ್ದುಕೊಂಡು ಕೆಲವರು ಶಾಲೆಗೆ ಹೋಗುತ್ತಾರೆ.

ಚಪ್ಪಲಿ ಇಲ್ಲಿ ನಿಷೇಧ
ಧಾರ್ಮಿಕ ಹಾಗೂ ದೇವರ ಆರಾಧನೆಯನ್ನೇ ಹೆಚ್ಚಿನ ಪ್ರಮಾಣದಲ್ಲಿ ನಂಬಿರುವ ಇಲ್ಲಿನ ಜನರು ಯಾರೂ ಕೂಡ ಚಪ್ಪಲಿಯನ್ನು ಧರಿಸುವುದಿಲ್ಲ. ಹಿರಿಮನೆಗೆ ಬೇರೆಯವರು ಹೋಗುವುದಾದರೂ ಚಪ್ಪಲಿಯನ್ನು ತೆಗೆದಿಟ್ಟೇ ಹೋಗಬೇಕು. ಹಿರಿಮನೆ ಉತ್ತಮ ಚಾರಣ ಸ್ಥಳಗಳಲ್ಲಿ ಒಂದಾಗಿದ್ದು ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಆದರೆ ಚಪ್ಪಲಿ ಧರಿಸುವುದು ಈ ಗ್ರಾಮದಲ್ಲಿ ನಿಷೇಧವಾಗಿದ್ದರಿಂದ ಚಾರಣಕ್ಕೆ ತೆರಳಿದವರು ಬರಿಗಾಲಿನಲ್ಲೇ ಕಾಡಿನ ಕಡಿದಾದ ದಾರಿಯಲ್ಲಿ ಸಾಗಬೇಕು.
ವಿದ್ಯುತ್ ಸಂಪರ್ಕವೂ ಇಲ್ಲದ ಈ ಕುಗ್ರಾಮಕ್ಕೆ ವಿದ್ಯುತ್ ಸೌಕರ್ಯ ಕಲ್ಪಿಸುವಂತೆ ಸಾಕಷ್ಟು ಬಾರಿ ಇಲ್ಲಿನ ಜನರು ಸಂಬಂಧಪಟ್ಟ ಅಧಿಕಾರಿಗಳಿಗೆ ಬೇಡಿಕೆಯನ್ನು ಸಲ್ಲಿಸಿದ್ದಾರೆ. ಅರಣ್ಯ ಪ್ರದೇಶವಾಗಿದ್ದರಿಂದ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ರಕ್ಷಾ ಕವಚವಿರುವ ವಿದ್ಯುತ್ ತಂತಿಗಳನ್ನು ಬಳಸಿ ನೆಲದಡಿಯ ಮೂಲಕ ವಿದ್ಯುತ್ ಸೌಕರ್ಯ ಕಲ್ಪಿಸುವುದಾಗಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ ಎನ್ನುತ್ತಾರೆ ಹಿರಿಮನೆಯ ನಿವಾಸಿ ಗೋಪಾಲ ಗೌಡ.
ಕೃಷಿಯೇ ಇವರ ಜೀವಾಳ
ಹಿರಿಮನೆ ಕುಗ್ರಾಮದ ಜನರಿಗೆ ಕೃಷಿಯೇ ಜೀವಾಳವಾಗಿದೆ. ಭತ್ತವನ್ನು ಇಲ್ಲಿ ಪ್ರಧಾನವಾಗಿ ಬೆಳೆಯುತ್ತಾರೆ. ಜತೆಗೆ ಬಾಳೆ, ಅಡಿಕೆ ತೋಟಗಳು ಸಹ ಇಲ್ಲಿವೆ. ಜೇನು ತೆಗೆಯುವುದು, ಮೆಣಸಿನ ಬೆಳೆಗಳು ಇವರಿಗೆ ಆದಾಯ ತರುವ ಕೃಷಿಗಳಾಗಿದ್ದು, ಉಳಿದ ಅವಧಿಯಲ್ಲಿ ಹತ್ತಿರದ ಪ್ರದೇಶಕ್ಕೆ ತೆರಳಿ ಕೂಲಿ ಮಾಡುತ್ತಾರೆ.
ಹಿರಿಮನೆ ದಟ್ಟಾರಣ್ಯದಲ್ಲಿದ್ದರೂ ಇಲ್ಲಿನ ಜನರಿಗೆ ನೀರಿನ ಸಮಸ್ಯೆಯಿಲ್ಲ. ಸದಾ ಝರಿಯ ಹರಿಯುತ್ತಿರುತ್ತದೆ. ಇದೇ ನೀರನ್ನು ಜನರು ಬಳಸಿಕೊಳ್ಳುತ್ತಾರೆ.












Click it and Unblock the Notifications