ಡಿಕೆಶಿಗೆ ಇಷ್ಟದ ಖಾತೆ ಕೊಡಿಸಲು ನಿರ್ಮಲಾನಂದ ಸ್ವಾಮೀಜಿ ವಕಾಲತ್ತು
ಬೆಂಗಳೂರು, ಜೂನ್ 05: ಇಂಧನ ಖಾತೆ ಜೆಡಿಎಸ್ ಪಾಲಾಗಿದ್ದರಿಂದ ಅಸಮಾಧಾನಗೊಂಡಿದ್ದ ಡಿಕೆ ಶಿವಕುಮಾರ್ಗೆ ಈಗ ಮತ್ತೆ ಇಂಧನ ಖಾತೆ ಒಲಿದು ಬರುವ ಸಾಧ್ಯತೆ ಹೆಚ್ಚಾಗಿದೆ.
ಡಿಕೆ.ಶಿವಕುಮಾರ್ ಬೇಡಿಕೆ ಇಟ್ಟಿದ್ದ ಇಂಧನ ಖಾತೆ ಜೆಡಿಎಸ್ ಪಕ್ಷಕ್ಕೆ ಹೋಗಿತ್ತು ಆದರೆ ಈಗ ಜೆಡಿಎಸ್ ವರಿಷ್ಠರು ಇಂಧನ ಖಾತೆಯನ್ನು ಕಾಂಗ್ರೆಸ್ಗೆ ನೀಡಿ ಬೆಂಗಳೂರು ಉಸ್ತುವಾರಿ ಅಥವಾ ಇನ್ನಾವುದಾದರೂ ಖಾತೆಯನ್ನು ಪಡೆದುಕೊಳ್ಳಲು ಅಸ್ತು ಎಂದಿದ್ದಾರೆ. ಆದರೆ ಈ ಮಹತ್ವದ ಬದಲಾವಣೆ ಹಿಂದೆ ಇರುವುದು ನಿರ್ಮಲಾನಂದ ಸ್ವಾಮೀಜಿ ಎನ್ನಲಾಗಿದೆ.
ಸಂಪುಟ ವಿಸ್ತರಣೆ ಬಿರುಸುಗೊಂಡ ಬಳಿಕ ಅಸಮಾಧಾನಗೊಂಡ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗ ಸ್ವಾಮೀಜಿ ನಿರ್ಮಲಾನಂದ ಅವರನ್ನು ಭೇಟಿ ಆಗಿ ಮಾತುಕತೆ ನಡೆಸಿದ್ದರು. ಆಗ ಶಿವಕುಮಾರ್ ಅವರು ತಮ್ಮ ಅಸಮಾಧಾನವನ್ನು ಅವರಲ್ಲಿ ತೋಡಿಕೊಂಡಿದ್ದರು ಎನ್ನಲಾಗಿದೆ.

ನಿರ್ಮಲಾನಂದ ಸ್ವಾಮೀಜಿ ಅವರು ಕುಮಾರಸ್ವಾಮಿ ಅವರಿಗೆ ಬುದ್ಧಿ ಹೇಳಿ, 'ಜೆಡಿಎಸ್ ಪಕ್ಷವು ಒಕ್ಕಲಿಗ ಮುಖಂಡನೊಬ್ಬನಿಗೆ ಖಾತೆ ತಪ್ಪಿಸಿತು ಎಂಬ ಅಪನಿಂದನೆಗೆ ಗುರಿ ಆಗಬೇಕಾಗುತ್ತದೆ, ಹಾಗಾಗಿ ಒಕ್ಕಲಿಗ ಸಮುದಾಯಕ್ಕಾಗಿಯಾದರೂ ಇಂಧನ ಖಾತೆಯನ್ನು ಡಿಕೆಶಿಗೆ ಬಿಟ್ಟುಕೊಡಿ' ಎಂದು ನಿರ್ಮಲಾನಂದ ಸ್ವಾಮೀಜಿ ಅವರು ಮನವಿ ಮಾಡಿದ್ದಾರೆ.
ಕುಮಾರಸ್ವಾಮಿ ಅವರು ಈ ವಿಷಯವನ್ನು ದೊಡ್ಡಗೌಡರ ಬಳಿ ಚರ್ಚಿಸಿ, ಇಂಧನ ಖಾತೆಗೆ ಪಟ್ಟು ಹಿಡಿದಿದ್ದ ಎಚ್.ಡಿ.ರೇವಣ್ಣ ಅವರ ಮನವೊಲಿಸಲು ಮನವಿ ಮಾಡಿದ್ದಾರೆ. ಆ ನಂತರ ದೇವೇಗೌಡರು ರೇವಣ್ಣ ಅವರ ಮನವೊಲಿಸಿ ಇಂಧನ ಖಾತೆಯನ್ನು ಕಾಂಗ್ರೆಸ್ಗೆ ಬಿಟ್ಟುಕೊಡಲು ಒಪ್ಪಿದ್ದಾರೆ.
ನಿರ್ಮಲಾನಂದ ಸ್ವಾಮೀಜಿ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ಸ್ವಾಮೀಜಿ ಆಗಿದ್ದು, ಒಕ್ಕಲಿಗ ಸಮುದಾಯ ನಾಯಕ ಡಿಕೆಶಿಗೆ ಒಕ್ಕಲಿಗ ಸಮುದಾಯದ ನಾಯಕರಿಂದಲೇ ಅನ್ಯಾಯವಾಗಿದೆ ಎಂಬ ಸುದ್ದಿ ಹರಡಿ ಅದು ಸಮುದಾಯದ ಒಗ್ಗಟ್ಟಿಗೆ ತೊಡಕಾಗುತ್ತದೆ ಎಂಬ ಕಾರಣದಿಂದ ಅವರು ಜೆಡಿಎಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದಾರೆ.
ಕಾಂಗ್ರೆಸ್ಗೆ ಇಂಧನ ಖಾತೆ ಬಿಟ್ಟು ಕೊಡುವ ನಿರ್ಣಯ ಮಾಡಿರುವ ಕಾರಣ, ಅದಕ್ಕೆ ಬದಲಾಗಿ ಬೆಂಗಳೂರು ಉಸ್ತುವಾರಿ ಅದರ ಜೊತೆಗೆ ಮತ್ತೊಂದು ಖಾತೆಗೆ ಜೆಡಿಎಸ್ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಇಂಧನ ಖಾತೆ ಕೈತಪ್ಪಿರುವ ಕಾರಣ ಈಗ ರೇವಣ್ಣ ಅವರು ಎರಡು ಖಾತೆ ಬೇಕೆಂದು ಪಟ್ಟು ಹಿಡಿದಿದ್ದಾರೆ.












Click it and Unblock the Notifications