ಜಾತಿ ಗಣತಿ ವರದಿ ಜಟಾಪಟಿ: 'ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು ಒತ್ತಾಯ'
ಬೆಂಗಳೂರು, ಏಪ್ರಿಲ್ 19: ಜಾತಿ ಗಣತಿ ವರದಿ ಅಂಕಿ ಬಗ್ಗೆ ಚರ್ಚೆ ಮಾಡಲು ಕೂಡಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು. ಸಮುದಾಯದ ಮುಖಂಡರು, ಸ್ವಾಮೀಜಿಗಳನ್ನ ಒಟ್ಟಿಗೆ ಕರೆದು ಸಭೆ ಕರೆದು ಚರ್ಚಿಸಬೇಕೆಂದು ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದರು. ಜಾತಿಗಣತಿಗೆ ಜೆಡಿಎಸ್ ವಿರೋಧ ಮಾಡೊಲ್ಲ. ಆದರೆ ಸಮೀಕ್ಷೆ ಮಾಡಿರೋ ವ್ಯವಸ್ಥೆ ಸರಿಯಿಲ್ಲ. ಹೀಗಾಗಿ ವರದಿ ಪುನರ್ ಪರಿಶೀಲನೆ ಆಗಬೇಕು. ಕೂಡಲೇ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆದು ವರದಿ ಬಗ್ಗೆ ಚರ್ಚೆ ಮಾಡಬೇಕು.ಜಾತಿ ಗಣತಿ ವರದಿಯನ್ನ ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಚರ್ಚೆ ಮಾಡಬೇಕು ಎಂದು ಆಗ್ರಹಿಸಿದರು.
ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ದೇಶದಲ್ಲಿ ಭಾರತ್ ಜೋಡೋ ಮಾಡಿದ್ರಿ. ಆದರೆ, ರಾಜ್ಯದಲ್ಲಿ ಯಾವ ಸಂದೇಶ ಕೊಡ್ತಿದ್ದೀರಾ ಮಿಸ್ಟರ್ ರಾಹುಲ್ ಗಾಂಧಿ ಅವರೇ. ರಾಹುಲ್ ಗಾಂಧಿ ಅವರೇ ಸಮುದಾಯಗಳ ನಡುವೆ ವಿಷ ಬೀಜ ಬಿತ್ತಿದ್ದೀರಾ. ಜನ ಬೀದಿ ಬೀದಿಗಳಲ್ಲಿ ಒಡೆದಾಡಬೇಕಾ? ಇದೇನಾ ನಿಮ್ಮ ಜೋಡೋ ಯಾತ್ರೆ. ಹೇಳ್ತೀನಿ ಕೇಳಿ, ನೀವು ಪಶ್ಚಾತ್ತಾಪ ಯಾತ್ರೆ ಮಾಡೋ ದಿನ ದೂರ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ಗಣತಿಯನ್ನು ಮೊನ್ನೆಲಿಗೆಗೆ ತಂದು ನಿಮ್ಮ ಬೇಳೆ ಬೇಯಿಸೋಕೆ ಸಮಾಜ ಸಮಾಜದ ಮಧ್ಯೆ ವಿಷ ಬೀಜ ಹಿಂಡುತ್ತೀರಾ ಎಂದು ರಾಹುಲ್ ಗಾಂಧಿ ವಿರುದ್ಧ ನಿಖಿಲ್ ಕುಮಾರಸ್ವಾಮಿ ಅವರ ವಾಗ್ದಾಳಿ ನಡೆಸಿದರು. ಜಾತಿಗಣತಿ ಮೂಲಕ ಏನ್ ಮಾಡೋಕೆ ಹೊರಟ್ಟಿದ್ದೀರಾ ಸಿದ್ದರಾಮಯ್ಯ ಅವರೇ? ಇದು ಜಾತಿಗಣತಿನಾ? ಈಗ ಬಿಡುಗಡೆ ಮಾಡಿರುವ ಬುಕ್ ನೋಡಿದ್ರೆ ಪಾಪ ಸಚಿವರಿಗೂ ಮಾತಾಡೋಕೆ ಆಗೊಲ್ಲ. ಜಾತಿ ಮತ್ತು ಧರ್ಮದಿಂದ ಯಾರ ಹೊಟ್ಟೆ ತುಂಬುವುದಿಲ್ಲ ಬಡವರನ್ನ ಗುರುತಿಸಿ ಸರ್ಕಾರದ ಸೌಲಭ್ಯ ಕೊಡಿ ಅಂತ ನಿಖಿಲ್ ಕುಮಾರಸ್ವಾಮಿ ಆಗ್ರಹಿಸಿದರು.
ಅಮಾಯಕರ ಕೈಯಲ್ಲಿ ಪೆನ್ನು ಕೊಟ್ಟು ಜಾತಿ ಗಣತಿ ವರದಿ ಬರೆಸಿದ್ದೀರಾ. ಡಿಸಿಎಂ ಡಿಕೆಶಿ ಅವರೇ ಪೆನ್ನು ಪೇಪರ್ ಕೇಳಿದ್ರು ಕೊಟ್ಟಿದ್ದಾರೆ. ನೀವು ಯಾವುದಕ್ಕೆ ಉಪಯೋಗ ಮಾಡ್ತಿದ್ದೀರಾ. ನಿಮ್ಮ ಆತ್ಮಸಾಕ್ಷಿಯನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ ಮಿಸ್ಟರ್ ಡಿ.ಕೆ.ಶಿವಕುಮಾರ್ ಅವರೇ ವೈಜ್ಞಾನಿಕವಾಗಿ ಸಮೀಕ್ಷೆ ಮಾಡೋಕೆ ಆಗಿಲ್ಲ ಅಂದರೆ ಹೇಗೆ? ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದರು.
ಪೆನ್ನು ಪೇಪರ್ ಕೊಡಿ ಅಂತ ಕೇಳಿದ್ರಲ್ಲ ಡಿಕೆ ಶಿವಕುಮಾರ್ ಅವರೇ..ಮೊನ್ನೆ ಖಾಲಿ ಸಿಲಿಂಡರ್ ಎತ್ತಿಕೊಂಡು ಪೋಸ್ ಕೊಡ್ತೀರಾ. ಖಾಲಿ ಸಿಲಿಂಡರ್ ಎತ್ತೋಕೆ ನೀವೇ ಬೇಕಾ? ಭಾರವನ್ನ ಜನರ ಮೇಲೆ ಹಾಕಿರೋದು ನೀವು. ಅದ್ಬುತ ನಟನೆ ಕಣ್ರಿ ನಿಮ್ದು ಎಂದು ವ್ಯಂಗ್ಯವಾಡಿದರು. ಜನ ನಿಮಗೆ ಪೆನ್ನು ಪೇಪರ್ ಇಟ್ಟುಕೊಳ್ಳಿ ಅಂತ ಕೊಟ್ಟಿದ್ದಾರೆ. ಬನ್ನಿ ಸಮಾಜ ಕಟ್ಟೋಣ. ಕೊಟ್ಟಿರೋ ಪೆನ್ನು ಪೇಪರ್ ಅನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಿ ವಾಗ್ದಾಳಿ ನಡೆಸಿದರು.
ಎರಡು ವರ್ಷದ ಆಡಳಿತದಲ್ಲಿ ನಿಮ್ಮ ಸಾಧನೆ ಏನು.?ಮೂರು ವರ್ಷ ಮಾತ್ರ ಸಿದ್ದರಾಮಯ್ಯ ಸಿಎಂ ಆಗಿರಬಹುದು ಅಷ್ಟೇ. ಸಿದ್ದರಾಮಯ್ಯ ಅವರೇ ಜನಪರವಾಗಿ ಮಾಡಿರೋ ಸಾಧನೆ ತೋರಿಸಿ. ಎರಡು ವರ್ಷ ಅಯ್ತು ಅಧಿಕಾರಕ್ಕೆ ಬಂದು. ನಿಮ್ಮ ಸಾಧನೆ 16ನೇ ಬಜೆಟ್ ಮಂಡನೆ ಮಾಡಿದೆ. 4 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದ್ದು ಅಂತೀರಾ? ಸಾಲ ಮಾಡಿ ದೊಡ್ಡ ಗಾತ್ರದ ಬಜೆಟ್ ಅಂತ ಹೇಳೋಕೆ ನೀವೇ ಬೇಕಾ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕೇಂದ್ರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಮಾತನಾಡಿದ ಅವರ, ಎರಡು ವರ್ಷಗಳಲ್ಲಿ ಇವರ ಆಡಳಿತದಲ್ಲಿ ಸಾಧನೆ ಶೂನ್ಯ. ಅದನ್ನ ಹೇಳೋಕೆ ಆಗ್ತಿಲ್ಲ. ಕುಮಾರಸ್ವಾಮಿ ಬಗ್ಗೆ ಮಾತಾಡಿದ್ರೆ ಹೆಚ್ಚು ಪ್ರಚಾರ ಸಿಗುತ್ತೆ ಅಂತ ಡಿಕೆ ಶಿವಕುಮಾರ್ ಮಾತಾಡ್ತಾರೆ HDK ಮತ್ತೆ ರಿಯಾಕ್ಷನ್ ಕೊಡೋವರೆಗೂ ವಿಷಯ ಜೀವಂತವಾಗಿ ಇರುತ್ತೆ ಅಂತ ಡಿಕೆಶಿವಕುಮಾರ್ ಪ್ರಚಾರ ಸಿಗುತ್ತೆ ಅಂತ ಮಾತಾಡ್ತಾರೆ. ಯಾರು ಯಾರಿಗೆ ಹೆದರಬೇಕು? ಯಾಕೆ ಹೆದರಬೇಕು ಹೇಳಿ? ಅಂತಿಮವಾಗಿ ಪ್ರಪಂಚವನ್ನ ಬಿಟ್ಟು ಹೋಗೋವಾಗ 6 ಅಡಿ 3 ಅಡಿ ಮಾತ್ರ ಅಲ್ಲವಾ? ಡಿಕೆ ಶಿವಕುಮಾರ್ ಹೇಳಿಕೆಗೆ ನಿಖಿಲ್ ಅವರು ಕೌಂಟರ್ ಕೊಟ್ಟರು.
ಜನಿವಾರ ಹಾಕಿದ್ದಕ್ಕೆ CET ಎಕ್ಸಾಂ ಬರೆಯಲು ಅವಕಾಶ ಕೊಡದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನಿವಾರ ಹಾಕಿದ್ದಕ್ಕೆ ಎಕ್ಸಾಂಗೆ ಕೂರಿಸದೇ ಇರೋದು ಸರಿಯಲ್ಲ.ಈ ಘಟನೆಯನ್ನ ನಾನು ಖಂಡಿಸುತ್ತೇನೆ ಎಂದರು.
ಜನಿವಾರ ಹಾಕಿಕೊಂಡು ಕಾಪಿ ಹೊಡೆಯೋಕೆ ಆಗುತ್ತಾ.? ಜನುವಾರದಲ್ಲಿ ಕಾಪಿ ಚೀಟಿ ಇಟ್ಟುಕೊಂಡು ಹೋಗೋಕೆ ಆಗುತ್ತಾ? ಜನಿವಾರ ಇದ್ದರೆ ಏನು ಸಮಸ್ಯೆ. ಸ್ಮಾರ್ಟ್ ವಾಚ್ ಬೇಕಿದ್ರೆ ನೀವು ತೆಗೆಸಬೇಕು ಸರಿ. ಆದರೆ ಜನಿವಾರ ತೆಗೆದು ಒಂದು ಸಮುದಾಯಕ್ಕೆ ಅವಮಾನ ಮಾಡೋದು ಸರಿಯಲ್ಲ. ಈ ಘಟನೆಗೆ ಕ್ರಮ ತೆಗೆದುಕೊಳ್ಳಬೇಕು. ಅವರಿಗೆ ಬುದ್ದಿವಾದ ಹೇಳಬೇಕು.ಮುಂದೆ ಇಂತಹ ಘಟನೆ ಆಗದಂತೆ ಕ್ರಮವಹಿಸಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ತಿಳಿಸಿದರು.












Click it and Unblock the Notifications