ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ನಿಖಿಲ್ ಕುಮಾರಸ್ವಾಮಿ?
ಬೆಂಗಳೂರು, ಆಗಸ್ಟ್ 21: ಪ್ರಸ್ತುತ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿರುವ ನಿಖಿಲ್ ಕುಮಾರಸ್ವಾಮಿ ಅವರ ಅಂತಿಮ ಗುರಿಯಂತೂ ರಾಜಕೀಯವೇ ಎಂಬುದು ಎಲ್ಲರಿಗೂ ತಿಳಿದಿರುವುದೇ. ಆದರೆ ಅವರು ಕೆಲವೇ ತಿಂಗಳಲ್ಲಿ ಎದುರಾಗಲಿರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅನುಮಾನ ದಟ್ಟವಾಗಿದೆ.
ಹೌದು, ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿಖಿಲ್ ತಮಗೆ ರಾಜಕೀಯದ ಬಗ್ಗೆ ತೀವ್ರ ಆಸಕ್ತಿಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಪ್ರತಿದಿನ ತಾವು ತಂದೆಯೊಂದಿಗೆ ಪ್ರಸ್ತುತ ರಾಜಕೀಯದ ಬಗ್ಗೆ ಚರ್ಚಿಸುತ್ತಿರುವುದಾಗಿಯೂ ಹೇಳಿದ್ದಾರೆ. ಆದರೆ ಈ ಚರ್ಚೆ ಚುನಾವಣಾ ರಾಜಕಾರಣದ್ದಾಗಿದೆ ಎಂಬ ಗುಸು-ಗುಸು ಹರಿದಾಡುತ್ತಿದೆ.
ನಿಖಿಲ್ ಕುಮಾರಸ್ವಾಮಿ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರೆಯೇ ಎಂಬ ಅನುಮಾನ ಮೂಡಲು ಕಾರಣವಾಗಿರುವುದು ಅವರದ್ದೇ ಒಂದು ಹೇಳಿಕೆ. ತಾವು ತಂದೆಯಂತೆ ರಾಜಕೀಯ ಪ್ರವೇಶ ಮಾಡುವುದಾಗಿ ಅವರು ಹೇಳಿದ್ದಾರೆ.

ಅಚಾನಕ್ ಆಗಿ ರಾಜಕೀಯ ಪ್ರವೇಶ
ತಂದೆ ಕುಮಾರಸ್ವಾಮಿ ಅವರು ಅಚಾನಕ್ ಆಗಿ ರಾಜಕೀಯ ಪ್ರವೇಶ ಮಾಡಿದ್ದರು. ಹಾಗಾಗಿ ಈಗ ಹಠಾತ್ತನೇ ನಿಖಿಲ್ ಚುನಾವಣೆಗೆ ಇಳಿಯುತ್ತಾರಾ ಎಂಬ ಅನುಮಾನ ಜೆಡಿಎಸ್ ವಲಯದಲ್ಲೇ ಕೇಳಿಬರುತ್ತಿದೆ.

ಪ್ರಜ್ವಲ್ ರೇವಣ್ಣ ಜತೆ ನಿಖಿಲ್ ಕೂಡ ರಾಜಕೀಯಕ್ಕೆ
ರೇವಣ್ಣ ಪುತ್ರ, ಪ್ರಜ್ವಲ್ ರೇವಣ್ಣ ಲೋಕಸಭೆ ಚುನಾವಣೆಗೆ ಇಳಿಯುವುದು ಬಹುತೇಕ ಪಕ್ಕಾ ಆಗಿದೆ. ಹಾಗಾಗಿ ಕುಮಾರಸ್ವಾಮಿ ಕುಟುಂಬದ ನಿಖಿಲ್ ಸಹ ಚುನಾವಣೆಗೆ ಇಳಿಯುವ ಸಾಧ್ಯತೆಯನ್ನ ತಳ್ಳಿ ಹಾಕುವಂತೆಯೇ ಇಲ್ಲ. ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚುರುಕಾಗಿ ಜೆಡಿಎಸ್ ಪರ ಪ್ರಚಾರ ಸಹ ಮಾಡಿ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದರು.

ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರ
ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಅಥವಾ ಮಂಡ್ಯ ಕ್ಷೇತ್ರದಿಂದ ನಿಖಿಲ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಆಂತರಿಕ ಒತ್ತಡವೂ ಜೆಡಿಎಸ್ ವರಿಷ್ಟರ ಮೇಲಿದೆ ಎನ್ನಲಾಗುತ್ತಿದೆ.

ದೇವೇಗೌಡರ ಯೋಜನೆ ಏನು?
ಕುಟುಂಬ ಪಕ್ಷವೆಂಬ ಹಣೆಪಟ್ಟಿ ಕಳಚಿಕೊಳ್ಳಲು ಒದ್ದಾಡುತ್ತಿರುವ ದೇವೇಗೌಡರು ಬೇಡಿಕೆಗೆ ಮಣೆ ಹಾಕುತ್ತಾರೆಯೇ ಕಾದು ನೋಡಬೇಕು. ಈ ಬಾರಿ ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕಿಳಿಸಿ ವಿಧಾನಸಭೆ ಚುನಾವಣೆಗೆ ನಿಖಿಲ್ ಅವರನ್ನು ರಾಜಕೀಯಕ್ಕೆ ತರುವ ಬಗ್ಗೆಯೂ ಯೋಜನೆ ಇದೆ ಎನ್ನಲಾಗಿದೆ.












Click it and Unblock the Notifications