ಅಪ್ಪ-ಅಮ್ಮನ ಕಳೆದುಕೊಂಡ ತುಮಕೂರಿನ ಮಕ್ಕಳ ಕರುಣಾಜನಕ ಕಥೆ
ತುಮಕೂರು ಮೂಲದ ಈ ಅಣ್ಣ-ತಂಗಿಯ ಜೀವನದಲ್ಲಿ ಆದ ದುರ್ಘಟನೆಗಳ ಬಗ್ಗೆ ತಿಳಿದರೆ ಕರುಳು ಕತ್ತರಿಸಿದಂತಾಗುತ್ತದೆ. ಮುಂಬೈನಿಂದ ಇವರಿಬ್ಬರನ್ನು ಕರೆತಂದ ಕೇರಳ ಪೊಲೀಸರ ಮಾನವೀಯತೆಗೆ ಸಲಾಂ ಹೇಳಬೇಕು
ಬೆಂಗಳೂರು, ಮಾರ್ಚ್ 22: ಆ ನಲವತ್ತೈದು ದಿನವೂ ಆರು ವರ್ಷದ ಆರ್ಯನ್ ತನ್ನ ತಂಗಿ, ನಾಲ್ಕು ವರ್ಷದ ಅಮೃತಾಳ ಕೈಯನ್ನು ಗಟ್ಟಿಯಾಗಿ ಹಿಡಿದಿದ್ದ. ಆ ಹುಡುಗನ ಪ್ರೀತಿಯೇ ಕೇರಳ ಪೊಲೀಸರ ನೆರವಿಗೆ ಬಂದಿದೆ. ಈ ಇಬ್ಬರು ಮಕ್ಕಳನ್ನು ಪತ್ತೆ ಹಚ್ಚಿ, ವಾಪಸ್ ಕರ್ನಾಟಕಕ್ಕೆ ಕರೆತಂದಿದ್ದಾರೆ.
ಈ ಇಡೀ ವರದಿ ಮನಸ್ಸು ಕಲುಕುವಂಥದ್ದು. ಆಗಿದ್ದೇನೆಂದರೆ, ಜನವರಿ ಕೊನೆ ವಾರದಲ್ಲಿ ಈ ಮಕ್ಕಳ ತಾಯಿಯ ಸಾವಿನ ನಂತರ, ಈ ಇಬ್ಬರು ಮಕ್ಕಳನ್ನು ಮುಂಬೈ ರೈಲು ಹತ್ತಿಸಲಾಗಿತ್ತು. ಮುಂಬೈನಲ್ಲಿ ಈ ಮಕ್ಕಳನ್ನು ಪತ್ತೆಹಚ್ಚಿ, ಕಳೆದ ಭಾನುವಾರ ಕೇರಳಕ್ಕೆ ಕರೆತರಲಾಗಿದೆ.[ದಾವಣಗೆರೆಯಲ್ಲಿ ತಂದೆ, ತಾಯಿ, ಬಂಧು-ಬಳಗವಿಲ್ಲದ ನೇತ್ರಾಳ ಮದುವೆ]
ಅಂದಹಾಗೆ, 2015ರ ವರೆಗೆ ಈ ಮಕ್ಕಳು ಕರ್ನಾಟಕದ ತುಮಕೂರಿನಲ್ಲಿ, ತಮ್ಮ ಪೋಷಕರ ಜತೆಗೆ ಇದ್ದರು. ಈ ಮಕ್ಕಳ ತಂದೆ ರವಿಯನ್ನು ವರಸೆಯಲ್ಲಿ ಚಿಕ್ಕಪ್ಪನಾದ (ತಾಯಿಯ ತಂಗಿ ಗಂಡ) ಮಂಜುನಾಥ್ ಎಂಬುವನೇ ಕೊಂದಿದ್ದಾನೆ ಎಂದು ಆರೋಪವಿದೆ. ಆ ನಂತರ ಮಂಜುನಾಥ್ ಹಾಗೂ ಈ ಮಕ್ಕಳು, ತಾಯಿ ಶೋಭಾ ಕೇರಳದ ಇರಿಟ್ಟಿ ಎಂಬಲ್ಲಿ ಒಟ್ಟಾಗಿ ಇರಲು ಆರಂಭಿಸಿದ್ದಾರೆ.
ಜಗಳ ತೆಗೆಯುತ್ತಿದ್ದ ಶೋಭಾ
ಆದರೆ, ಯಾವಾಗೆಲ್ಲ ಮಂಜುನಾಥ್ ತುಮಕೂರಿನಲ್ಲಿರುವ ಪತ್ನಿಯನ್ನು ನೋಡಿಬರಲು ಹೋಗುತ್ತೇನೆ ಎನ್ನುತ್ತಿದ್ದನೋ ಆಗ ಶೋಭಾ ಜಗಳ ತೆಗೆಯುತ್ತಿದ್ದಳಂತೆ. ಜನವರಿ 22, 2017ರಲ್ಲಿ ಇದೇ ರೀತಿ ಒಮ್ಮೆ ಜಗಳವಾಡುವಾಗ ಆಕೆ ಮೇಲೆ ಮಂಜುನಾಥ್ ಹಲ್ಲೆ ನಡೆಸಿದ್ದಾನೆ. ಆಗ ಶೋಭಾ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ.
ಆತ್ಮಹತ್ಯೆ ಎಂದುಕೊಂಡಿದ್ದರು ಮಂದಿ
ಆಕೆ ಸತ್ತೇ ಹೋಗಿರಬಹುದು ಎಂದು ಭಾವಿಸಿದ ಆತ, ದೇಹವನ್ನು ಬಾವಿಯೊಂದಕ್ಕೆ ಎಸೆದಿದ್ದಾನೆ. ಆದರೆ ಬದುಕಿದ್ದ ಆಕೆ, ಬಾವಿಯಲ್ಲಿ ಎಸೆದ ನಂತರ ಮುಳುಗಿ ಮೃತಪಟ್ಟಿದ್ದಾಳೆ. ಪ್ರಾರಂಭದಲ್ಲಿ ಶೋಭಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಪೊಲೀಸರು ವಿಚಾರಣೆ ಮುಂದುವರಿಸಿದ್ದರು.
ಮುಂಬೈ ರೈಲು ಹತ್ತಿಸಿದ್ದ
ಜನವರಿ 29ರಂದು ಮಕ್ಕಳನ್ನು ಬೆಂಗಳೂರಿಗೆ ಕರೆತಂದಿದ್ದ ಮಂಜುನಾಥ್, ಮುಂಬೈ ರೈಲಿಗೆ ಹತ್ತಿಸಿದ್ದ. ನಂತರ ಇರಿಟ್ಟಿಗೆ ಹಿಂತಿರುಗಿದ್ದ. ಕೇರಳ ಪೊಲೀಸರಿಗೆ ಮಂಜುನಾಥನೇ ಶೋಭಾಳ ಕೊಲೆ ಮಾಡಿರುವ ಸುಳಿವು ಸಿಕ್ಕಿದೆ, ಆ ನಂತರ ಆತನ ವಿಚಾರಣೆ ನಡೆಸುವ ವೇಳೆ ಮಕ್ಕಳನ್ನು ಮುಂಬೈ ರೈಲು ಹತ್ತಿಸಿರುವ ಮಾಹಿತಿ ಬಹಿರಂಗವಾಗಿದೆ.
ಮಾತೇ ಆಡದ ಮಕ್ಕಳು
ಈ ಮಾಹಿತಿ ಗೊತ್ತಾದ ಕೇರಳ ಪೊಲೀಸರು ಮುಂಬೈ ಪೊಲೀಸರ ನೆರವಿನಿಂದ ಈ ಮಕ್ಕಳನ್ನು ಪತ್ತೆ ಹಚ್ಚಿದ್ದಾರೆ. ಅಲ್ಲಿಂದ ಕರೆತರುವ ದಾರಿಯುದ್ದಕ್ಕೂ ಮಕ್ಕಳು ಮಾತೇ ಆಡಿಲ್ಲ. ಪೊಲೀಸರು ಮಾತನಾಡಿಸಲು ಯತ್ನಿಸಿದರೆ ಅಳುವುದಕ್ಕೆ ಆರಂಭಿಸಿದ್ದಾರೆ. ಸದ್ಯಕ್ಕೆ ಮಕ್ಕಳು ಕಣ್ಣೂರು ಮಕ್ಕಳ ಸಹಾಯವಾಣಿ ಸುಪರ್ದಿಯಲ್ಲಿದ್ದಾರೆ.