ಸ್ಥಳೀಯರ ವಿರೋಧ: ನಿಡ್ಡೋಡಿ ಸ್ಥಾವರ ಕೈಬಿಟ್ಟ ಸರ್ಕಾರ
ಬೆಂಗಳೂರು,ಮೇ.24: ಜನರಿಂದ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಿಡ್ಡೋಡಿ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿದೆ.
ದ.ಕ. ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಅರಣ್ಯ ಸಚಿವ ರಮಾನಾಥ್ ರೈ ಈ ವಿಷಯವನ್ನು ತಿಳಿಸಿದ್ದಾರೆ. ಜನರ ವಿರೋಧದ ಹಿನ್ನೆಲೆಯಲ್ಲಿ ನಿಡ್ಡೋಡಿ ಯೋಜನೆಯನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಯಾವದೇ ಯೋಜನೆ ಕೈಗೆತ್ತಿಕೊಳ್ಳಬೇಕಾದರೆ ಅಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗುತ್ತದೆ. ಆದರೆ, ನಿಡ್ಡೋಡಿ ಯೋಜನೆಗೆ ಸಾಕಷ್ಟು ವಿರೋಧ ಇರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಮಂಗಳೂರು ತಾಲೂಕಿನ ಮುಲ್ಕಿ-ಕಿನ್ನಿಗೋಳಿ- ಮೂಡುಬಿದರೆ ನಡುವೆ ಬರುವ ನಿಡ್ಡೋಡಿ ಎಂಬ ಪುಟ್ಟ ಗ್ರಾಮದಲ್ಲಿ ನೇಶನಲ್ ಥರ್ಮಲ್ ಪವರ್ ಕಾರ್ಪೊರೇಷನ್ (ಎನ್ಟಿಪಿಸಿ) ಸಂಸ್ಥೆಯ ಬೃಹತ್ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಕರ್ನಾಟಕ ಸರ್ಕಾರ ಅನುಮತಿ ನೀಡಿತ್ತು.[ನಿಡ್ಡೋಡಿ ವಿದ್ಯುತ್ ಸ್ಥಾವರದ ದುಷ್ಪರಿಣಾಮ:ಸಂದರ್ಶನ]
ಯೋಜನೆಗೆ ಜನರ ವಿರೋಧ ಯಾಕೆ?
ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಎಲ್ಲೂರಿನಲ್ಲಿ ಈಗಾಗಲೇ 1200 ಮೆಗಾವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ಉಡುಪಿ ಪವರ್ ಕಾರ್ಪೋರೇಷನ್ (ಯುಪಿಸಿಎಲ್) ಸ್ಥಾಪನೆಯಾಗಿದೆ. ಸ್ಥಾವರ ಸ್ಥಾಪನೆಯಾದಲ್ಲಿ ಅದರ ಬೂದಿಗಳು ಸ್ಥಳೀಯ ಗ್ರಾಮಗಳಿಗೆ ಹರಡಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಲಿದೆ ಎಂದು ಪರಿಸರವಾದಿಗಳು ಆರೋಪ ಮಾಡಿದ್ದರೂ, ಸರ್ಕಾರ ಸ್ಥಾವರ ಸ್ಥಾಪಿಸಲು ಅನುಮತಿ ನೀಡಿತ್ತು.
ಸರ್ಕಾರ ಒಂದು ಸ್ಥಾವರ ಸ್ಥಾಪನೆ ಮಾಡಿ ಜಿಲ್ಲೆಯನ್ನು ಹಾಳುಮಾಡುತ್ತಿರುವುದು ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಈಗ ಮತ್ತೊಂದು ಸ್ಥಾವರ ಸ್ಥಾಪನೆಯ ವಿಚಾರವನ್ನು ತಿಳಿದ ಕೂಡಲೇ ಪರಿಸರವಾದಿಗಳು, ಧಾರ್ಮಿಕ ನಾಯಕರು ಒಟ್ಟಾಗಿ ಜನರನ್ನು ಒಂದೂಗೂಡಿಸಿ ಪ್ರತಿಭಟನೆ ನಡೆಸುತ್ತಿದ್ದರು.[ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಮತ್ತೊಂದು ಶಾಕ್]
ಒಂದು ವೇಳೆ ಘಟಕ ಸ್ಥಾಪನೆಯಾಗಿದ್ದಲ್ಲಿ ಪ್ರತಿ ದಿನ ಸುಮಾರು 55,000 ಟನ್ ಪ್ರಮಾಣದ ಕಲಿದ್ದಲು ಭಸ್ಮವಾಗಿ, 10,000 ಟನ್ ಹಾರುಬೂದಿ ಉತ್ಪಾದನೆಯಾಗುವ ಸಾಧ್ಯತೆಯಿತ್ತು.












Click it and Unblock the Notifications