ಮತ್ತೆ ಸುದ್ದಿಯಾದ ಮೇಕೆದಾಟು ವಿವಾದ; ಸಮಿತಿ ರಚಿಸಿದ ಎನ್ಜಿಟಿ
ಬೆಂಗಳೂರು, ಮೇ 26; ಮೇಕೆದಾಟು ಬಳಿ ಅಕ್ರಮವಾಗಿ ನಿರ್ಮಾಣ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಈ ಬಗ್ಗೆ ಪರಿಶೀಲನೆ ನಡೆಸಲು ಜಂಟಿ ಸಮಿತಿಯನ್ನು ರಚನೆ ಮಾಡಿದೆ.
ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಕರ್ನಾಟಕ ಸರ್ಕಾರ ಉದ್ದೇಶಿಸಿದೆ. ಆದರೆ ತಮಿಳುನಾಡು ಸರ್ಕಾರ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಈ ಕುರಿತು ಸುಪ್ರೀಂಕೋರ್ಟ್ಗೆ ಸಹ ಅರ್ಜಿಯನ್ನು ಸಲ್ಲಿಕೆ ಮಾಡಿದೆ.
2021ರ ಏಪ್ರಿಲ್ 15ರಂದು ಪತ್ರಿಕೆಗಳಲ್ಲಿ ಬಂದ ವರದಿ ಅನ್ವಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸ್ವಯಂ ಪ್ರೇರಿತ ಅರ್ಜಿಯನ್ನು ದಾಖಲು ಮಾಡಿಕೊಂಡಿದೆ. ಈ ಕುರಿತು ವಿಚಾರಣೆ ನಡೆಸುವಾಗ ಜಂಟಿ ಸಮಿತಿಯನ್ನು ರಚನೆ ಮಾಡಿದೆ.
ನ್ಯಾಯಮೂರ್ತಿ ಕೆ. ರಾಮಕೃಷ್ಣ ಮತ್ತು ತಜ್ಞರ ಸಮಿತಿಯ ಸದಸ್ಯ ಡಾ. ಕೆ. ಸತ್ಯಗೋಪಾಲ್ ಅಕ್ರಮ ನಿರ್ಮಾಣ ಚಟುವಟಿಕೆ ಕುರಿತು ತನಿಖೆ ಕೈಗೊಂಡು ಜುಲೈ 5ರೊಳಗೆ ವರದಿ ಸಲ್ಲಿಕೆ ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ.

ಅಕ್ರಮ ನಿರ್ಮಾಣ ಕಾಮಗಾರಿ
ಏಪ್ರಿಲ್ 15ರಂದು ಪ್ರಕಟಗೊಂಡ ವರದಿಯಲ್ಲಿ ಮೇಕೆದಾಟು ಬಳಿ ನಿರ್ಮಾಣ ಹಂತದ ಕಾಮಗಾರಿ ಆರಂಭಿಸಲಾಗಿದೆ. ಹಲವಾರು ನಿರ್ಮಾಣ ಚಟುವಟಿಕೆ ವಸ್ತುಗಳನ್ನು ಸಂಗ್ರಹ ಮಾಡಲಾಗಿದೆ ಎಂದು ತಿಳಿಸಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಹೇಳಿದೆ.

ಪರಿಸರಕ್ಕೆ ಆಗುವ ಹಾನಿ
ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಿದರೆ ಪರಿಸರಕ್ಕೆ ಹಾನಿಯಾಗಲಿದೆ. ಯಾವುದೇ ರಾಜ್ಯ ಸಹ ಪರಿಸರ ಇಲಾಖೆ ಒಪ್ಪಿಗೆ ಇಲ್ಲದೇ ನಿರ್ಮಾಣ ಕಾಮಗಾರಿ ಆರಂಭಿಸುವಂತಿಲ್ಲ. ಕಾಮಗಾರಿ ಆರಂಭಿಸಿದರೆ ಕಾವೇರಿ ನ್ಯಾಯಾಧೀಕರಣದ ತೀರ್ಪಿನ ಉಲ್ಲಂಘನೆಯಾಗುತ್ತದೆ ಎಂದು ಹಸಿರು ನ್ಯಾಯಾಧೀಕರಣ ಹೇಳಿದೆ.

ಆಯಾ ರಾಜ್ಯಗಳೇ ದಂಡ ಕಟ್ಟಬೇಕು
ಮೇಕೆದಾಟು ಬಳಿ ಪರಿಸರಕ್ಕೆ ಹಾನಿಯಾಗುವಂತೆ ನಿರ್ಮಾಣ ಚಟುವಟಿಕೆ ನಡೆಯುತ್ತಿದೆಯೇ?. ಒಂದು ವೇಳೆ ಅಂತಹ ಚಟುವಟಿಕೆ ಪರಿಸರ ಇಲಾಖೆ ಅನುಮತಿ ಇಲ್ಲದೆಯೋ ನಡೆಯುತ್ತಿರುದ್ದರೆ ಅದಕ್ಕೆ ಆಯಾ ರಾಜ್ಯಗಳೇ ಹೊಣೆ. ಇದರಿಂದಾಗಿ ಪರಿಸರಕ್ಕೆ ಆದ ಹಾನಿಯ ನಷ್ಟವನ್ನು ರಾಜ್ಯಗಳೇ ಭರಿಸಬೇಕು ಎಂದು ನ್ಯಾಯಾಧೀಕರಣ ಹೇಳಿದೆ.

ಕರ್ನಾಟಕದ ಸರ್ಕಾರದ ಯೋಜನೆ
ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಿ ಹೆಚ್ಚುವರಿ ಕಾವೇರಿ ನೀರನ್ನು ಬಳಕೆ ಮಾಡಿಕೊಂಡು ಬೆಂಗಳೂರು ಹಾಗೂ ಸುತ್ತಮುತ್ತಲಿನ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯನ್ನು ಕರ್ನಾಟಕ ಸರ್ಕಾರ ರೂಪಿಸಿದೆ. ಇದಕ್ಕಾಗಿ 45 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಆದರೆ, ತಮಿಳುನಾಡು ಸರ್ಕಾರ ಈ ಯೋಜನೆ ವಿರುದ್ಧ ಸುಪ್ರೀಂ ಮೆಟ್ಟಿಲೇರಿದೆ.












Click it and Unblock the Notifications