ಆಸ್ತಿ ರಿಜಿಸ್ಟ್ರೇಷನ್ನಲ್ಲಿ ಹೊಸ ಸಮಸ್ಯೆ: ಕಂದಾಯ ಸಚಿವರು ಹೇಳಿದ್ದೇನು ?
ರಾಜ್ಯದಲ್ಲಿ ಆಸ್ತಿ ನೋಂದಣಿ, ಇ - ಖಾತಾ, ಮದುವೆ ರಿಜಿಸ್ಟ್ರೇಷನ್ ಸೇರಿದಂತೆ ವಿವಿಧ ಸರ್ಕಾರಿ ಕೆಲಸಗಳಿಗೆ ದೊಡ್ಡ ಸಮಸ್ಯೆ ಎದುರಾಗಿದ್ದು. ಆಸ್ತಿ ನೋಂದಣಿ ಮಾಡಿಸಬೇಕು ಎಂದು ಕೊಂಡವರು, ಆಸ್ತಿ ಮಾರಾಟ ಅಥವಾ ಖರೀದಿ, ಇ - ಖಾತಾ ಮಾಡಿಸಿಕೊಳ್ಳಬೇಕು ಎನ್ನುವವರಿಗೆ ಸಂಕಷ್ಟ ಎದುರಾಗಿದೆ. ರಾಜ್ಯದಲ್ಲಿ ಕಳೆದ ಒಂದು ವಾರದಿಂದಲೂ ಜನ ಸಬ್-ರಿಜಿಸ್ಟ್ರಾರ್ಗಳ ಕಚೇರಿಗಳ ಮುಂದೆ ತಾಸುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಕಾವೇರಿ-2 ತಂತ್ರಾಂಶದಲ್ಲಿ ಉಂಟಾಗಿರುವ ಸಮಸ್ಯೆಯಿಂದ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕರ್ನಾಟಕದಲ್ಲಿ ನಿತ್ಯವೂ ಸಾವಿರಾರು ಆಸ್ತಿಗಳ ರಿಜಿಸ್ಟ್ರೇಷನ್ ಆಗುತ್ತದೆ. ಆದರೆ ಈ ವರ್ಷದ ಜನವರಿ ಅಂತ್ಯದಿಂದ ಹಾಗೂ ಫೆಬ್ರವರಿ 1ರಿಂದ ಆಸ್ತಿಗಳ ನೋಂದಣಿಯಲ್ಲಿ ಸಮಸ್ಯೆ ಆಗುತ್ತಿದೆ. ರಾಜ್ಯದ ಪ್ರಮುಖ ನಗರಗಳ ಸಬ್ - ರಿಜಿಸ್ಟರ್ ಆಫೀಸ್ಗಳ ಮುಂದೆ ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಕಾವೇರಿ-2 ಸಾಫ್ಟವೇರ್ನಲ್ಲಿ ಗ್ರಾಹಕ ಲಾಗಿನ್ ಹಾಗೂ ಅಧಿಕೃತ ಲಾಗಿನ್ ಎರಡೂ ಸಹ ಕೆಲಸ ಮಾಡದೆ ಇರುವುದರಿಂದ ರಿಜಿಸ್ಟ್ರೇಷನ್ ಸಮಸ್ಯೆ ಆಗುತ್ತಿದೆ.

ಬೆಳಿಗ್ಗೆ ಸಬ್ ರಿಜಿಸ್ಟ್ರೇಷನ್ ಆಫೀಸ್ಗೆ ಬರುವ ಜನ ಸಂಜೆಯ ವರೆಗೆ ಸರ್ಕಾರಿ ಕಚೇರಿಗಳಲ್ಲೇ ಕಾಯುವ ಪರಿಸ್ಥಿತಿ ಸೃಷ್ಟಿಯಾಗುತ್ತಿದೆ. ಅಧಿಕೃತ ಲಾಗಿನ್ಗಳು ಕೆಲಸ ಮಾಡದೆ ಇರುವುದರಿಂದ ಜನರನ್ನು ವಾಪಸ್ ಕಳುಹಿಸುವುದು ಅನಿವಾರ್ಯವಾಗುತ್ತಿದೆ ಎಂದು ಸರ್ಕಾರಿ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಇನ್ನು ರಾಜ್ಯದಲ್ಲಿ ಫೆಬ್ರವರಿ 1 ರಿಂದ ಕಾವೇರಿ-2 ಸಾಫ್ಟ್ವೇರ್ ಕೆಲಸ ಮಾಡುತ್ತಿಲ್ಲ. ರಾಜ್ಯದ ಹಲವು ಭಾಗದಲ್ಲಿ ಈ ಸಮಸ್ಯೆ ಇದೆ ಎಂದು ಹೇಳಲಾಗಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದ್ದೇನು ?
ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಕರ್ನಾಟಕದಲ್ಲಿ ಋುಣಮುಕ್ತ ಪ್ರಮಾಣಪತ್ರ (ಇಸಿ) ಪಡೆಯಲು ಹಾಗೂ ಆಸ್ತಿ ನೋಂದಣಿ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳಿಗೆ ವಿಷಾದಿಸುತ್ತೇವೆ. ನಮ್ಮ ಇ - ಆಡಳಿತ ವಿಭಾಗವು ಸಮಸ್ಯೆಗಳನ್ನು ಪರಿಹರಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಐಟಿ ವ್ಯವಸ್ಥೆಯ ತಾಂತ್ರಿಕ ಸಮಸ್ಯೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಸವಾಲಿನ ಸಂದರ್ಭವನ್ನು ಪರಿಹರಿಸುವ ಉದ್ದೇಶದಿಂದ ನಾವು ಹೆಚ್ಚು ಸಮಯ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸಚಿವರು ಈ ರೀತಿ ಟ್ವೀಟ್ ಮಾಡಿರುವುದು ಹಲವರನ್ನು ಕೆರಳಿಸಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ಕಂದಾಯ ಇಲಾಖೆಯು ಹೊಸ ಕಾನೂನುಗಳನ್ನು ರೂಪಿಸುತ್ತಿದೆ. ಸಿದ್ಧತೆಯನ್ನೇ ಮಾಡಿಕೊಳ್ಳದೆ ಹೊಸ ಪ್ರಯೋಗಗಳನ್ನು ಮಾಡಬಾರದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕಾವೇರಿ ತಂತ್ರಾಂಶದ ಬಗ್ಗೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಅಭಿವೃದ್ಧಿ ಮಾಡಿದ್ದು ಯಾರು. ಈ ಸಂಬಂಧ ತನಿಖೆ ನಡೆಯಬೇಕು. ಇಷ್ಟೊಂದು ಕೆಟ್ಟದಾಗಿ ಯಾರಾದರೂ ಸಾಫ್ಟ್ವೇರ್ ಅಭಿವೃದ್ಧಿ ಮಾಡಲು ಸಾಧ್ಯವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾದಲ್ಲಿ ಜನ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಸಚಿವ ಕೃಷ್ಣಬೈರೇಗೌಡ ಅವರು ಮಾಡಿರುವ ಪೋಸ್ಟ್ ಸಹ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications