ಕೈದಿಗಳ ಹೆಚ್ಚಳ: ಮತ್ತೆರೆಡು ಜೈಲು ನಿರ್ಮಾಣಕ್ಕೆ ಸರ್ಕಾರ ಚಿಂತನೆ
ಬೆಂಗಳೂರು, ಜೂನ್ 30: ರಾಜ್ಯ ಕಾರಾಗೃಹದಲ್ಲಿ ಕೈದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಜತೆಗೆ ಪೊಲೀಸ್ ಸಿಬ್ಬಂದಿಗಳ ಸಂಖ್ಯೆ ಕಡಿಮೆ ಇದೆ ಹಾಗಾಗಿ ಮತ್ತೆರೆಡು ಜೈಲುಗಳ ನಿರ್ಮಾಣಕ್ಕೆ ಸರ್ಕಾರ ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೆಲ ದಿನಗಳ ಹಿಂದೆ ಹೈಕೋರ್ಟ್ ಕೂಡ ಕಾರಾಗೃಹಗಳಲ್ಲಿ ನಿಗದಿತ ಪ್ರಮಾಣಕ್ಕಿಂತಲೂ ಕೈದಿಗಳು ಹೆಚ್ಚಾಗಿರುವ ಮತ್ತು ಸಿಬ್ಬಂದಿಗಳ ಕೊರತೆಯಿರುವ ವಿಚಾರ ಕುರಿತು ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ದಾಖಲಿಸಿಕೊಂಡಿತ್ತು. ಸುಪ್ರೀಂಕೋರ್ಟ್ ನಿರ್ದೇಶನ ಮೇಲೆ ಸ್ವಯಂಪ್ರೇರಿತ ಅರ್ಜಿ ದಾಖಲಾಗಿತ್ತು.
ರಾಜ್ಯದ ಕೇಂದ್ರೀಯ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ, ಅಪರಾಧಿಗಳು ಹಾಗೂ ಮಹಿಳಾ ಕೈದಿಗಳು ಸೇರಿ ಒಟ್ಟು 3,226 ಕೈದಿಗಳನ್ನು ಇರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಈ ಜೈಲಿನಲ್ಲಿ ಪ್ರಸ್ತುತ 4,650 ಕೈದಿಗಳನ್ನು ಇರಿಸಲಾಗಿದೆ. ಕೇಂದ್ರೀಯ, ಜಿಲ್ಲಾ ಮತ್ತು ತಾಲೂಕು ಗಳು ಎಲ್ಲಾ ಸೇರಿ ರಾಜ್ಯದಲ್ಲಿ 100ಕ್ಕೂ ಹೆಚ್ಚು ಕಾರಾಗೃಹಗಳಿವೆ. ನಿಗದಿಗಿಂತಲೂ ಈ ಜೈಲುಗಳಲ್ಲಿ ಶೇ.50 ರಿಂದ 150ರಷ್ಟು ಕೈದಿಗಳಿದ್ದಾರೆ.

ಕಾರಾಗೃಹ ಇಲಾಖೆ ಈಗಾಗಲೇ 1,070 ವಾರ್ಡೆನ್ ಗಳು ಮತ್ತು 32 ಜೈಲರ್ ಗಳನ್ನು ನೇಮಕ ಮಾಡಿಕೊಂಡಿದೆ. ಹಲವು ವಿಭಾಗಗಳಲ್ಲಿ ಈಗಾಗಲೇ 2,100ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆಂದು ತಿಳಿದುಬಂದಿದೆ.
ಸ್ಥಳದ ಅಭಾವದಿಂದಾಗಿ ಮಂಗಳೂರು ಜೈಲಿನಿಂದ ಹಲವು ಕೈದಿಗಳನ್ನು ಬೆಳಗಾವಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಕೈದಿಗಳನ್ನು ಸ್ಥಳಾಂತರ ಮಾಡಿದರೂ ಕೂಡ ಜೈಲಿಗಳಲ್ಲಿ ನಿಗದಿಗಿಂತಲೂ ಹೆಚ್ಚು ಕೈದಿಗಳಿದ್ದಾರೆ. ನೂತನ ಜೈಲು ನಿರ್ಮಾಣಗೊಂಡ ಬಳಿಕ ಸ್ಥಳಾಂತರಗೊಂಡ ಕೈದಿಗಳನ್ನು ಮರಳಿ ಕಾರಾಗೃಹಗಳಿಗೆ ಕರೆ ತರಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಜೈಲುಗಳಲ್ಲಿ ಕೈದಿಗಳ ಮೇಲೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದ್ದು, ಕೈದಿಗಳನ್ನು ಸರಿಯಾಗಿ ನಡೆಸುಕೊಳ್ಳುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿತ್ತು. ಈ ಕುರಿತು ರಾಷ್ಟ್ರೀಯ ಮಾನವಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಲಾಗಿತ್ತು. ದೇಶದಲ್ಲಿರುವ ಎಲ್ಲಾ ಜೈಲುಗಳ ಸಮಸ್ಯೆಯನ್ನು ಆಲಿಸಿರುವ ಸುಪ್ರೀಂಕೋರ್ಟ್ ಆಯಾ ರಾಜ್ಯಗಳ ಹೈಕೋರ್ಟ್ಗೆ ಆಯಾ ರಾಜ್ಯಗಳಲ್ಲಿನ ಜೈಲಿನ ಪರಿಸ್ಥಿತಿ ಕುರಿತ ಸುಧಾರಣೆ ಕುರಿತಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದೆ.












Click it and Unblock the Notifications